– ಅರುಣ್ ಕುಮಾರ್
ಅಂದು ೨೬ ನವೆಂಬರ್, ರಾತ್ರಿ ೮.೪೫ರ ಸುಮಾರು. ಮುಂಬೈ ಕಡಲತೀರದಲ್ಲಿ ೧೦ ಯುವಕರು ಭಾರಿ ಬೆನ್ನು ಚೀಲಗಳೊಂದಿಗೆ ಹಳದಿ ಯಾಂತ್ರಿಕ ಬೋಟಿನಿಂದ ಇಳಿಯುತ್ತಾರೆ. ಇವರನ್ನು ಕಂಡ ಭರತ್ ತಾಮೋರ್ ಎಂಬ ಮೀನುಗಾರ ಕೋಲಿ ಜನಾಂಗಕ್ಕೆ ಸೇರಿದ ಯುವಕ ಹತ್ತಿರ ಹೋಗಿ ಮಾತನಾಡಿಸುತ್ತಾನೆ. ಆ ಯುವಕರ ಉತ್ತರ ಇಷ್ಟೇ, “ ಹಮ್ ಅಭಿ ಬಹುತ್ ಟೆನ್ಷನ್ ಮೇ ಹೈ, ಹಮೇ ಔರ್ ಟೆನ್ಷನ್ ನಹೀ ದೇನಾ” ಎಂದು ಅವಸರದಲ್ಲಿ ಹೆಜ್ಜೆ ಹಾಕಿ ನಾಲ್ಕಾರು ಗುಂಪುಗಳಲ್ಲಿ ಮಾಯವಾಗುತ್ತಾರೆ. ಭರತ್ ಪ್ರಕಾರ ಅವರ ಮುಖಗಳಲ್ಲಿ ಬಹಳ ಬಿಗಿ ಇತ್ತು, ಅವರು ಒತ್ತಡದಲ್ಲಿದ್ದರು ಎಂದು. ನಂತರ ಅವನೂ ತನ್ನ ಕೆಲಸಕ್ಕಾಗಿ ರಾತ್ರಿ ೧೦ಕ್ಕೆ ತಾಜ್ ಹೋಟೆಲ್ಗೆ ಹೋದಾಗ ಅಲ್ಲಿ ಕಂಡದ್ದು ಉಗ್ರರದಾಳಿ. ಬಹಳ ತಡವಾಗಿ, ಅವನಿಗೆ ತಾನು ಕಂಡ ಬಿಗಿ ಮುಖದ ಯುವಕರೇ ಉಗ್ರರಾಗಿದ್ದರು ಎಂಬುದು ತಿಳಿದಿದ್ದು. ಆದರೆ ಸಮಯ ಮಿಂಚಿ ಹೋಗಿತ್ತು.
ಕಡಲ ರಕ್ಷಕರ ಅಳಲು
ಅವನ ದುಃಖವೇನೆಂದರೆ ಮುಂಬೈ ನಗರವನ್ನು ತಲ್ಲಣಗೊಳಿಸಿದ ಉಗ್ರರರನ್ನು ತಾನು ತಡೆಯಬಹುದಿತ್ತೇ ? ನಿಜಕ್ಕೂ ಅವರ ಕರಾಳ ಮುಖದ ಅರಿವು ಅವನಿಗೆ ಅಲ್ಲಿಯೇ ಆಗಿದ್ದರೆ, ಖಂಡಿತಾ ತಾನು ಪ್ರಾಣ ಬಲಿಕೊಟ್ಟಾದರೂ ಅವರನ್ನು ತಡೆಯುತ್ತಿದ್ದೆ ಎನ್ನುತ್ತಾನೆ, ಬಹಳ ನೋವಿನಿಂದ. ಈ ನೋವು ಆ ಕಡಲತೀರದಲ್ಲೇ ವಾಸ ಮಾಡುತ್ತಾ, ಒಂದು ರೀತಿಯ ಅನಧಿಕೃತವಾಗಿ, ಆದರೆ ತಲೆಮಾರುಗಳಿಂದ ಕಡಲತೀರವನ್ನು ಕಾಯ್ದುಕೊಂಡು ಬಂದಿರುವ ಕೋಲಿ ಜನಾಂಗದ ಪ್ರತಿಯೊಬ್ಬರಿಗೆ ಈ ಬಗ್ಗೆ ನೋವಿದೆ. ಎಂದಿನಂತೆ ಆ ದಿನ ಕೋಲಿ ಯುವಕರು ಹರಟೆ ಹೊಡೆಯುತ್ತಾ ಕಡಲತೀರದಬಂಡೆಯ ಮೇಲೆ ಕುಳಿತಿರಲಿಲ್ಲ. ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯ ನೋಡುತ್ತಾ ಅವರವರ ಮನೆಗಳಲ್ಲಿದ್ದರು. ದಾಳಿಕೋರರು ಈ ಪ್ರದೇಶದಲ್ಲಿ ನಾಲ್ಕಾರು ಬಾರಿ ಸುತ್ತಾಡಿ ಎಲ್ಲವನ್ನು ಗಮನಿಸಿಕೊಂಡು ಹೋಗಿದ್ದಾರೆ ಎಂಬುದು ಅವರ ಹೇಳಿಕೆ. ೭೨೦ ಕಿ.ಮೀ.ಸುತ್ತಳತೆಯ ವಾಣಿಜ್ಯನಗರಿ ಮುಂಬೈ ಕಡಲತೀರವನ್ನು ಸದಾಕಾಲಕ್ಕೂ ಕಾಯ್ದುಕೊಳ್ಳುವುದು ಸುಲಭದ ಕೆಲಸವಲ್ಲ. ೧೯೯೩ರಲ್ಲೂ ಸ್ಫೋಟ ನಡೆಸಿದ ಉಗ್ರರು ಸಮುದ್ರಮಾರ್ಗದಿಂದಲೇ ಮುಂಬೈ ಪ್ರವೇಶಿಸಿದ್ದರು. ಆದರೆ ಮತ್ತೆ ಅದೇ ನಡೆಯಿತು. ತಲೆಮಾರುಗಳಿಂದ ಮುಂಬೈ ಕಡಲತಡಿಯಲ್ಲೇ ಹುಟ್ಟಿ ಬೆಳೆದು ವಾಸಿಸುತ್ತಿರುವ ಕೋಲಿ ಜನಾಂಗಕ್ಕಿಂತ ಬೇರೆ ಯಾರೂ ಸಹ ಈ ಕಡಲಿನ ಏರಿಳಿತಗಳನ್ನು, ವಿದ್ಯಮಾನಗಳನ್ನು ಬಲ್ಲವರಿಲ್ಲ. ಹಾಗಾಗಿ ತಮ್ಮ ಯುವಕರಿಗೆ ಸೂಕ್ತ ಶಸ್ತ್ರಾಸ್ತ್ರಗಳೊಂದಿಗೆ ತರಬೇತಿ ನೀಡಿ ಸಜ್ಜುಗೊಳಿಸಿದರೆ ಇಂತಹ ಅನಾಹುತಗಳನ್ನು ತಪ್ಪಿಸುವ ಹೊಣೆ ಹೋರುತ್ತೇವೆ ಎನ್ನುತ್ತಾರೆ ಕೋಲಿ ಪಂಗಡದ ಪ್ರಮುಖರು.
ದುಬಾರಿಯಾದ ಪ್ರಮುಖ ಪೊಲೀಸ್ರ ಸಾವು
ಮುಂಬೈ ನಗರದ ಮೇಲೆ ಎರಗಿದ ದಾಳಿಯ ಗಂಭೀರತೆಯನ್ನು ಅರಿತುಕೊಳ್ಳುವಲ್ಲಿ ತಡವಾದುದೇ ಪರಿಸ್ಥಿತಿ ಮಿತಿಮೀರಿ ಹೋಗಲು ಪ್ರಮುಖ ಕಾರಣ ಎನ್ನಬಹುದು. ಅದು ರಾಜ್ಯ ಸರ್ಕಾರದ ಪ್ರಮುಖರಿರಲಿ, ಪೋಲಿಸ್ ಅಧಿಕಾರಿಗಳಿರಲಿ, ದೆಹಲಿಯ ಆಡಳಿತ ಸೂತ್ರಧಾರರಿರಲಿ, ಎಲ್ಲರಿಂದಲೂ ಪರಿಸ್ಥಿತಿ ಕೈ ಮೀರಿಹೋಗಿದ್ದರಲ್ಲಿ ಪಾಲಿದೆ. ಮೊಲನೆಯದಾಗಿ ಈ ಘಟನೆಯನ್ನು ಪೊಲೀಸ್ ಇಲಾಖೆ ಗ್ರಹಿಸಿದ್ದು ಹೇಗೆ ? ಉಗ್ರರ ದಮನ ಪಡೆಯ ರಾಜ್ಯದ ಮುಖ್ಯಸ್ಥರಾಗಿದ್ದ ಹೇಮಂತ್ ಖರಖರೆಯವರು ಆರಂಭದಲ್ಲಿ ಇದನ್ನು ಮುಂಬೈ ರೌಡಿಗಳ ಹೊಡೆದಾಟ ಎಂದುಕೊಂಡರಂತೆ. ಅವರ ಕೈಯಲ್ಲಿದ್ದ ಸಿಬ್ಬಂದಿಯ ಸಂಖ್ಯೆಯು ಕೇವಲ ೩೫. (ಅವರಲ್ಲಿ ಹೆಚ್ಚಿನವರು ಮಾಲೇಗಾವ್ನ ಹಿಂದೂ ಉಗ್ರರ ತನಿಖೆಯಲ್ಲಿ ಉತ್ಸಾಹದಿಂದ ತೊಡಗಿದ್ದವರು) ಧುತ್ತೆಂದು ಎರಗಿ ಬಂದ ಈ ಉಗ್ರರ ದಾಳಿಯ ವಿರುದ್ಧ ಕಾರ್ಯಾಚರಣೆ ಮಾಡಲು ಅವರಿಗೆ ಬೇಕಾದ ಬಲವಾದ ಕಾನೂನಿನ ರಕ್ಷಣೆಯೂ ಇಲ್ಲ. ಅದೊಂದು ಹಲ್ಲಿಲ್ಲದ ತನಿಖಾ ತಂಡ. ಎ.ಟಿ.ಎಸ್ ಎಂಬುದು ರಚನೆಯಾಗಿದ್ದು ೨೦೦೪ರ ಜುಲೈ ೮ರಂದು. ಅದಕ್ಕೆ ಕೇವಲ ಉಗ್ರ ಅಪರಾಧಗಳ ತನಿಖಾ ತಂಡವಾಗಿ ಅಧಿಕಾರವಿದ್ದದ್ದು. ಅದಕ್ಕೆ ದಾಳಿ-ಪ್ರತಿದಾಳಿಗಳ ಗುಂಡೆಸೆಯುವ ಅಧಿಕಾರ ಬಹಳ ಸೀಮಿತವಾಗಿತ್ತು. ಅದಕ್ಕೆ ತಕ್ಕಂತೆ ಆ ವಿಭಾಗ ಸಜ್ಜುಗೊಂಡಿತ್ತು. ಅಚ್ಚರಿಯ ವಿದ್ಯಮಾನವೆಂದರೆ ಉಗ್ರರ ನಿಗ್ರಹ ದಳಕ್ಕೆ ನೀಡಲಾದ ಉಪಕರಣಗಳು ವಿಶೇಷವಾಗಿ ಖರ್ಖರೆಯವರು ಧರಿಸಿದ್ದ ಗುಂಡುನಿರೋಧಕ ಜಾಕೆಟ್ ಕಳಪೆ ಮಟ್ಟದ್ದು ಎಂಬುದು ಅವರ ಮರಣಾನಂತರ ಬೆಳಕಿಗೆ ಬಂದಿದ್ದು. ಒಬ್ಬ ಪ್ರಮುಖ ಅಧಿಕಾರಿಯ ಸಾವು ಈ ವಸ್ತುಗಳ ಗುಣಮಟ್ಟ ಕಂಡುಕೊಳ್ಳುವ ಪರೀಕ್ಷೆಯಾಗಿ ಪರಿಣಮಿಸಬೇಕೇ ? ಮೇಲಾಗಿ ಆಕ್ರಮಣವನ್ನು ಅಂದಾಜು ಮಾಡುವಲ್ಲಿ ಖರಖರೆಯರದು ತಪ್ಪಾಗಿದೆ. ಯಾವುದೇ ವಿಶೇಷ ಶಸ್ತ್ರಗಳಿಲ್ಲದೇ, ಸೂಕ್ತ ಮಾಹಿತಿಗಳಿಲ್ಲದೇ ಮೂರು ಜನ ಪ್ರಮುಖ ಅಧಿಕಾರಿಗಳು ಒಂದೇ ವಾಹನ, ಕಾಲಿಸ್ ಜೀಪಿನಲ್ಲಿ ಧಾವಿಸಿ, ಕುಳಿತ ಸ್ಥಿತಿಯಲ್ಲಿಯೇ ಉಗ್ರರ ಗುಂಡಿನ ಮಳೆಗೆ ಬಲಿಯಾದದ್ದು ಬಹಳ ಬೇಸರ ತರುವಂತಹದ್ದು. ಗಾಳಿಯಲ್ಲಿ ಗುಂಡು ಹಾರಿಸಿಕೊಂಡು ಹೋದಾಗ ಬೆದರಿ, ಶಸ್ತ್ರ ಕೈಚೆಲ್ಲಿ ಶರಣಾಗತರಾಗುವರನ್ನೇ ಕಂಡಿದ್ದ ಇವರಿಗೆ, ಪ್ರಾಣವನ್ನು ಲೆಕ್ಕಸದೇ ಎ.ಕೆ.೪೭ ಬಂದೂಕಿನಿಂದ ಗುಂಡಿನ ಬೆಂಕಿಯುಗುಳುತ್ತ ಮುಂದೆ ನುಗ್ಗಿದ್ದ ಉಗ್ರರ ರಕ್ಕಸರೂಪ ಅರ್ಥ ಆಗುವದರೊಳಗೇ ಎಲ್ಲವೂ ಮುಗಿದುಹೋಗಿತ್ತು. ಅವರು ಹೋರಾಡಲು, ತಮ್ಮ ಸಾಹಸ ಪ್ರದರ್ಶಿಸಲು ಪ್ರಾಣ ಉಳಿಸಿಕೊಳ್ಳಲು ಒಂದು ಸಣ್ಣ ಅವಕಾಶ ಕೂಡ ಸಿಗಲಿಲ್ಲ. ಅದು ಬಹಳ ದುಃಖ ತರುವಂತಹದ್ದು. ಯೋಧ ಅಥವಾ ಪೊಲೀಸ್ ಅಧಿಕಾರಿ ಹೋರಾಟದಲ್ಲಿ ಪ್ರಾಣ ಲೆಕ್ಕಿಸಲಾಗದು. ಆದರೆ ಇಲ್ಲಿ ಪರಿಸ್ಥಿತಿಯ ಸರಿಯಾದ ಅಂದಾಜು ಮಾಡದೆ ಹೋದದ್ದು ಮತ್ತು ಸ್ವಲ್ಪಮಟ್ಟಿನ ಹುಂಬತನ ಕೂಡ ಈ ಭಾರೀ ನಷ್ಟಕ್ಕೆ ಕಾರಣವಾಯಿತೇನೋ ಎಂಬುದು ಕೆಲವರ ಅನಿಸಿಕೆ. ಏನೇ ಆಗಲಿ, ಮುಂಬೈನ ಒಳಹೊರಗು ಎಲ್ಲವನ್ನು ನಿಖರವಾಗಿ ಬಲ್ಲ ಮೂರು ಜನ ಅನುಭವಿ ಪೊಲೀಸ್ ಅಧಿಕಾರಿಗಳ ಸಾವು ಆ ಗಳಿಗೆಯಲ್ಲಿ ಬಹಳ ದುಬಾರಿಯಾಗಿ ಕಾಡಿತು.
ಮಾಹಿತಿಗಳ ತೀರ್ವ ಕೊರತೆ
ತಾಜ್ ಮುಂತಾದ ಆಯಕಟ್ಟಿನ ತಾಣಗಳಲ್ಲಿ ಅಡಗಿ ಕುಳಿತ ಉಗ್ರರನ್ನು ಹೊರಹಾಕಲು ತಂತ್ರಗಳನ್ನು ರೂಪಿಸುವಾಗ ಬೇಕಾದ ಅಗತ್ಯ ನೆಲ ಅಂದಾಜು, ಅನುಭವಗಳ ಕೊರತೆ ಅಲ್ಲಿ ಉಂಟಾಗಿತ್ತು. ಇಂತಹ ವಿಷಮ ಸನ್ನಿವೇಷದಲ್ಲಿ ರಾಜ್ಯದ ರಕ್ಷಣೆಯ ಹೊಣೆ ಹೊತ್ತ ಗೃಹ ಸಚಿವ ನಡೆದುಕೊಂಡ ರೀತಿ ಒಬ್ಬ ಸಾಮಾನ್ಯ ಪೇದೆಗೂ ಅಪಮಾನ ತರುವ ರೀತಿಯದ್ದು. ಅಲ್ಲರೀ, ನೂರಾರು ವಿದೇಶಿಯರು ಸೇರಿದಂತೆ ೬೦೦ ಜನ ಉಗ್ರರ ಒತ್ತೆಯಾಳುಗಳಾಗಿ ೬೦ ಗಂಟೆಗಳ ಕಾಲ ಇದ್ದು ಒದ್ದಾಡಿ, ೧೭೦ ಜನ ಬಲಿಯಾಗಿ, ೨೦ ವೀರಯೋಧರು ಮಡಿದು, ಇಡೀ ದೇಶವೆ ಕಣ್ಬಿಟ್ಟು ನೋಡುತ್ತಿರುವ, ೫೦,೦೦೦ ಕೋಟಿ ರೂ.ಗಳ ನಷ್ಟವನ್ನು, ೧೦,೦೦೦ ಕೋಟಿ ರೂ.ಗಳ ವಿದೇಶಿವಿನಿಮಯವನ್ನು ಕಳೆದುಕೊಂಡು ಹೋದಾಗಲೂ ಅಯೋಗ್ಯ ಆರ್.ಆರ್.ಪಾಟೀಲ್ ನೀಡುವ ಹೇಳಿಕೆಯೇನು ? “ಮುಂಬೈಯಂತಹ ಭಾರೀ ನಗರಗಳಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ” ಇಂತಹವರನ್ನು ರಾಜ್ಯದ ಗೃಹ ಮಂತ್ರಿ ಮಾಡಿರುವ ವ್ಯವಸ್ಥೆಯಿದೆಯಲ್ಲ ಅದರ ಬಗ್ಗೆ ನಮಗೆ ಕನಿಕರ ದುಃಖ ಎರಡೂ ಆಗುತ್ತವೆ. ಹೋಗಲಿ ಗೃಹ ಸಚಿವ ದಡ್ಡ ಎಂದು ಭಾವಿಸಿದಾಗಲೂ ಮುಖ್ಯಮಂತ್ರಿ ನಡೆದುಕೊಂಡ ರೀತಿ ಹೇಗಿತ್ತು ? ಕೇರಳ ಪ್ರವಾಸದಲ್ಲಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ರಾತ್ರಿ ೧೧.೩೦ಕ್ಕೆ ಪರಿಸ್ಥಿತಿಯ ಗಂಭೀರತೆಯ ಅರಿವು ಆಗಿ ಕೇಂದ್ರದಿಂದ ಎನ್.ಎಸ್.ಜಿ. ಕಮ್ಯಾಂಡೋ ಪಡೆ ತರಿಸಲು ಯೋಚನೆ ಬಂದಿದ್ದು. ಅದೂ ರಾಜ್ಯದ ಉಗ್ರ ದಮನ ಪಡೆಯ ಮುಖ್ಯಸ್ಥ ತೀರಿಹೋದ ಮೇಲೆ ಅರಿವಾಯಿತೇ ? ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ಹೇಗಿತ್ತು ? ೨೬ರ ರಾತ್ರಿ ೯.೩೦ಕ್ಕೆ ದಾಳಿ ಆರಂಭವಾಗಿದ್ದರೆ, ಕೇಂದ್ರ ಮಂತ್ರಿಮಂಡಲದ ಎಂದಿನಂತೆ ಸಹಜ ಸಭೆ ಸೇರಿದ್ದು ಯಾವಾಗ ? ೨೭ರ ಮಧ್ಯಾಹ್ನ ೨ಕ್ಕೆ. ಆಗ ಪ್ರಧಾನಿ ಮನಮೋಹನ್ಜೀ ಅವರಿಗೆ ಇದರ ತೀವ್ರತೆಯೆಷ್ಟು ಎಂಬ ಅರಿವಾಗಿದ್ದು.
ವಿಳಂಬಕ್ಕೆ ಕಾರಣವಾದ ಅಧಿಕಾರಶಾಹಿ
ಇಂತಹ ಯಾವುದೇ ದಾಳಿ ಸಮಯದಲ್ಲಿ ಒಂದೊಂದು ಕ್ಷಣವೂ ಅಮೂಲ್ಯ. ಕೇವಲ ಅರ್ಧಗಂಟೆ ತಡವಾದರೂ ಸಾಕು, ಉಗ್ರರು ಆಯಕಟ್ಟಿನ ಸ್ಥಳಗಳನ್ನು ಹುಡುಕಿ ನೆಲೆಯೂರಿಬಿಡುತ್ತಾರೆ. ಅವರನ್ನು ನಂತರ ಅಲ್ಲಾಡಿಸುವುದು ಕಷ್ಟವಾಗುತ್ತದೆ. ಕೇಂದ್ರಕ್ಕೆ ಎನ್.ಎಸ್.ಜಿ. ಕಮ್ಯಾಂಡೋ ಸಹಾಯ ಕೇಳಿದ್ದು ಸುಮಾರು ರಾತ್ರಿ ೧೧.೩೦ಕ್ಕೆ. ನಮ್ಮ ಅಧಿಕಾರಶಾಹೀ ಆಡಳಿತದ ಕೆಂಪು ಪಟ್ಟಿಯ ಕಾರಣದಿಂದ ಅದು ತಲುಪಿದ್ದು ೧೦ಗಂಟೆ ತಡವಾಗಿ. ತಮಗೆ ಆದೇಶ ಬಂದಾಗ ನಡುರಾತ್ರಿಯಾದರೂ ಯೋಧರು ಕೆಲವೇ ನಿಮಿಷಗಳಲ್ಲಿ ಸಿದ್ಧರಾಗಿ ಕುಳಿತರು. ನಿದ್ದೆಗೆಟ್ಟು ಕಾದು ಕುಳಿತರು. ವಿಮಾನ ಹೊರಡಲಿಲ್ಲ. ಕ್ಷಣಗಳು ತಡವಾದಷ್ಟೂ ಬಲಿಯಾಗುವ ಯೋಧರ ಸಂಖ್ಯೆ ಹೆಚ್ಚುತ್ತದೆ. ಅಲ್ಲಿ ಕಾದಾಡಬೇಕಾದವರು, ಸಂದರ್ಭ ಬಂದಾಗ ಪ್ರಾಣ ಕೊಡಬೇಕಾದವರು ಇದೇ ಬಡಪಾಯಿ ಯೋಧರು. ಅಧಿಕಾರಶಾಹಿಗೆ ಏನು ಗೊತ್ತು ಪ್ರಾಣದ ಬೆಲೆ?
ಧೀರ ಯೋಧರು
ಇಲ್ಲಿ ಮೆಚ್ಚಬೇಕಾದ್ದು ಎನ್. ಎಸ್.ಜಿ. ಕಮ್ಯಾಂಡೋಗಳು ಕಾರ್ಯಾಚರಿಸಿದ ರೀತಿ. ತಾಜ್ ಹೋಟೆಲ್ನ ಒಟ್ಟು ನೆಲರಚನೆಯ ಚಿತ್ರ ಯಾರ ಬಳಿಯೂ ಇಲ್ಲ. ಅದಿರುವುದು ಉಗ್ರರ ಬಳಿ ಮಾತ್ರ. ಅದನ್ನು ಅವರು ಅಧಿಕೃತವಾಗಿ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಪಡೆದುಕೊಂಡಿದ್ದರಂತೆ. ಇದು ನಿಜಕ್ಕೂ ದುರಂತ. ತಾಜ್ನಂತಹ ಹೋಟೆಲ್ಗಳಲ್ಲಿ ಉಗ್ರರ ಗುಡಿಸುವಿಕೆ ಸುಲಭವಲ್ಲ ಎಂಬುದು ತಜ್ಞರ ಅಭಿಮತ. ಅಲ್ಲಿನ ರಚನೆ ಕಲಾತ್ಮಕವಾಗಿ ಕಂಡರೂ ಕಾರ್ಯಾಚರಣೆಗೆ ಕಷ್ಟವಂತೆ. ಒಂದೊಂದು ಕೋಣೆಗೆ ಹಲವಾರು ಬಾಗಿಲುಗಳು. ನಡು-ನಡುವೆ ಕಂಬಗಳು, ಕೆಲವೆಡೆ ವೃತ್ತಾಕಾರದ ರಚನೆಗಳು ಇವೆಲ್ಲಾ ಕಮ್ಯಾಂಡೋಗಳಿಗೆ ಸವಾಲಾಗಿದ್ದವು. ಉಗ್ರ ಮುಂದಿನಿಂದಲೇ ಎದುರಿಸಿ ಮುಗಿಸಬೇಕಾದ ಅನಿವಾರ್ಯತೆ ಈ ಕಾರ್ಯಾಚರಣೆಯಲ್ಲಿ ಕಂಡುಬಂದಿದ್ದು. ನಿಜಕ್ಕೂ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಪಾತ್ರವನ್ನು ಇಲ್ಲಿ ಮೆಚ್ಚಲೇಬೇಕು. ಈ ಸಂಕೀರ್ಣ ರಚನೆಯ ಕಟ್ಟಡದಲ್ಲಿ ೬೦೦ ಜನ ಒತ್ತೆಯಾಳುಗಳನ್ನು ಸರ್ವಸಜ್ಜಿತ ಭಯೋತ್ಪಾದಕರ ತೆಕ್ಕೆಯಿಂದ ಹೊರತರುವುದು ಕೇವಲ ಎನ್.ಎಸ್.ಜಿ. ಪಡೆಗಲ್ಲ, ದೇಶದ ಸುರಕ್ಷಾ ಪಡೆಗಳ ಗೌರವದ ಪ್ರಶ್ನೆ ಆಗಿತ್ತು. ಆ ಕಠಿಣ ಪರಿಸ್ಥಿತಿಯಲ್ಲಿ ಸಮತೋಲನ ಕಳೆದುಕೊಳ್ಳದೇ ಜೀವವನ್ನು ಪಣಕ್ಕಿಟ್ಟು ಹೋರಾಡುವುದನ್ನು ಕೊನೆಯ ಓವರಿನಲ್ಲಿ ಪಂದ್ಯ ಗೆಲ್ಲಿಸಿಕೊಡುವ ಒತ್ತಡಕ್ಕೆ ಹೋಲಿಸಲಾಗದು. ಅಂತಹ ಕ್ಷಣದಲ್ಲಿ ತನ್ನ ಕಮ್ಯಾಂಡೋ ಬಳಗವನ್ನು ಸೂಕ್ತವಾಗಿ ಯೋಚಿಸಿ, ಯೋಜಿಸಿ, ಪ್ರೇರೇಪಿಸಿ, ಪ್ರತಿಯೊಬ್ಬನಿಗೂ ತನ್ನ ಪಾಲಿನ ಕೆಲಸವನ್ನು ಹಂಚಿಕೊಟ್ಟು, ಪ್ರತ್ಯಕ್ಷ ಕಾರ್ಯಾಚರಣೆಗೆ ಧುಮುಕಿ ತಾನೇ ಸ್ವತಃ ನೂರಕ್ಕಿಂತ ಹೆಚ್ಚು ಜನರನ್ನು ಉಪಾಯವಾಗಿ ಹೊರಗೆ ಕಳುಹಿಸಿ, ಉಗ್ರರ ಗುಂಡಿಗೆ ಬಲಿಯಾದ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ಕಾರ್ಯ ಸದಾ ನೆನಪಿಡುವಂತಹದ್ದು.
ಸ್ವಾರ್ಥಿ ರಾಜಕಾರಣಿಗಳು
ಭಯೋತ್ಪಾದನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಬಿಜೆಪಿಯಿಂದ ಆರಂಭಗೊಂಡು ಎಲ್ಲ ರಾಜಕೀಯ ಪಕ್ಷಗಳು ಮುಂಬೈ ಸ್ಫೋಟದ ವಿಷಯದಲ್ಲಿ ಬಟ್ಟ ಬಯಲಾಗಿವೆ. ಉಗ್ರರ ಗುಂಡಿಗೆ ಬಲಿಯಾದ ಹೇಮಂತ್ ಖರಖರೆಯವರ ಕುಟುಂಬಕ್ಕೆ ಒಂದು ಕೋಟಿ ರೂ. ನೀಡುವುದಾಗಿ ಮೋದಿ ಘೋಷಿಸಿದ್ದನ್ನು ಅವರ ಕುಟುಂಬ ತಿರಸ್ಕರಿಸಿದಾಗ ಪೆಚ್ಚಾದದ್ದು ಮೋದಿಯವರೇ. ಸ್ವಲ್ಪ ನಿಧಾನಿಸಿ, ಕಸಬ್ ಎಂಬ ಉಗ್ರನನ್ನು ತನ್ನ ಪ್ರಾಣ ಹೋದರೂ ಹಿಡಿದುಕೊಂಡು ಬಂಧಿಸಲು ಕಾರಣರಾದ ಒಂಬಾಳೆಯವರಿಗೆ ನಿಜಕ್ಕೂ ಅಂತಹ ಗೌರವ ನೀಡಬಹುದಾಗಿತ್ತು. ಒಂದು ದೃಷ್ಟಿಯಲ್ಲಿ ಇನ್ಸ್ ಪೆಕ್ಟರ್ ಒಂಬಾಳೆಯವರ ಸಾವು ಸಾರ್ಥಕ. ಈಗ ಮುಂಬೈ ದಾಳಿಯ ತನಿಖೆಯಲ್ಲಿ ಸಿಗುತ್ತಿರುವ ಎಲ್ಲ ಅಂಶಗಳು ಕಸಬ್ ಹೊರಹಾಕಿದ್ದೇ. ಇಷ್ಟೊಂದು ಸಾವು ನೋವಿನ ನಂತರವೂ ಒಬ್ಬ ಭಯೋತ್ಪಾದಕನೂ ಸಿಕ್ಕದೇ ಹೋಗಿದ್ದಲ್ಲಿ ಅದೊಂದು ದೇಶಕ್ಕೆ ಅಪಮಾನಕರ ಸ್ಥಿತಿ ಆಗಿರುತ್ತಿತ್ತು. ಇನ್ನು ದೆಹಲಿಯ ಚುನಾವಣೆ ಪಲಿತಾಂಶ ಹೊರಬೀಳುತ್ತಿದ್ದಂತೆ ’ಮುಂಬೈ ಘಟನೆ ಇನ್ನು ಹತ್ತು ದಿನ ಮೊದಲೇ ಆಗಿರಬೇಕಿತ್ತು’ ಅಂತ ಯಾರೋ ಬಿಜೆಪಿಯವರು ಹೇಳಿದರು ಎಂಬ ವರದಿ ಇತ್ತು. ನಿಜಕ್ಕೂ ಅದಾಗಿದ್ದರೆ, ಅದು ಬಹಳ ಖೇದಕರ. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ವಿಳಂಬ ಮಾಡುತ್ತಿರುವ ಮುಸ್ಲಿಂ ತುಷ್ಟೀಕರಣದ ರಾಜನೀತಿಗಿಂತ ಇದು ಹೆಚ್ಚು ಅಪಾಯಕಾರಿಯಾದ ಬೆಳವಣಿಗೆ.
ಇನ್ನು ಕಾಂಗ್ರೆಸ್ ಯುವ ನೇತಾರ ಭವಿಷ್ಯದ ಕಣ್ಮಣಿ ರಾಹುಲ್ ಗಾಂಧಿಯವರು ಮುಂಬೈ ಘಟನೆ ನಡೆದ ಇಡೀ ರಾತ್ರಿ ಎಚ್ಚರವಾಗಿದ್ದರಂತೆ. ಒತ್ತೆಯಾಳುಗಳಿಗೆ ಏನಾಯಿತೋ ಎಂಬ ಆತಂಕದಿಂದ ಅಲ್ಲ. ಗೆಳೆಯನ ಮದುವೆಯ ಪಾರ್ಟಿಯಲ್ಲಿ ಬೆಳಗಿನ ಜಾವ ೫ಗಂಟೆಯವರೆಗೆ ಆನಂದವಾಗಿ ಕಾಲ ಕಳೆದರು ಎನ್ನುತ್ತದೆ ಮುಂಬೈನ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು.
ಇನ್ನು ಮೃತರಾದ ಯೋಧರನ್ನು ನಡೆಸಿಕೊಂಡ ರೀತಿ ಹೇಗಿತ್ತು ? ಒಲಂಪಿಕ್ ಕ್ರೀಡೆಯಲ್ಲಿ ಶೂಟಿಂಗ್ ನಡೆಸಿ ಪದಕ ತಂದ ಕ್ರೀಡಾಪಟುವಿಗೆ ೩ ಕೋಟಿ, ನಿಜ ಜೀವನದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ಮಾಡಿದ ಶೂಟರ್ ಗೆ ೫ ಲಕ್ಷ. ಇದು ಯೋಧರ ಬಗ್ಗೆ ನಾವು ಕೊಡುವ ಗೌರವವೇ ಎಂಬ ಒಂದು ಇ-ಮೇಲ್ ಎಲ್ಲ ಕಡೆ ಪ್ರಸರಣಗೊಳ್ಳುತ್ತಿದೆ. ನಿಜಕ್ಕೂ ನಮಗೆ ಆ ಬಗ್ಗೆ ಗಮನವಿಲ್ಲ. ಮುಂಬೈಗೆ ಆವರಿಸಿದ್ದ ಆತಂಕವನ್ನು ತಡೆದು ಎಲ್ಲ ಉಗ್ರರ ನಾಶ ಮಾಡಿ ಹೊರಬಂದ ಎನ್.ಎಸ್.ಜಿ. ಕಮ್ಯಾಂಡೋಗಳನ್ನು ಮುಂಬೈ ಜನ ಭಾವುಕರಾಗಿ ಬೀಳ್ಕೊಟ್ಟರು. ಆದರೆ ಅವರನ್ನು ವಾಪಾಸು ಕೊಂಡೊಯ್ಯಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಕೊನೆಗೆ ವೀರ ಯೋಧರನ್ನು ಅತ್ಯಂತ ಸಾಮಾನ್ಯವಾದ ಮುಂಬೈ ಸಾರಿಗೆಯ ಕೆಂಪು ಬಸ್ನಲ್ಲಿ ಎನ್.ಎಸ್.ಜಿ. ಕಮ್ಯಾಂಡೋಗಳನ್ನು ಕಳುಹಿಸಿಕೊಟ್ಟಿದ್ದು. ಮೋಜು, ದುಡ್ಡು, ಕೀರ್ತಿಗಾಗಿ ಆಡುವ ನಮ್ಮ ಕ್ರಿಕೆಟ್ ಕಲಿಗಳನ್ನು ಬೀಳ್ಕೊಡುವುದು ಹವಾನಿಯಂತ್ರಿತ ವಿಶೇಷ ಬಸ್ಸುಗಳಲ್ಲಿ. ಸಾಮಾನ್ಯ ದಿನಗಳಲ್ಲಿ ಇದು ವಿಶೇಷ ಎನಿಸುವುದಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಜನ ಇದನ್ನು ಗಮನಿಸುತ್ತಾರೆ. ಹೀಗೆ ಹೆಜ್ಜೆ ಹೆಜ್ಜೆಗೆ ನಮ್ಮ ನಿಲುವು-ನೀತಿ, ದೌರ್ಬಲ್ಯಗಳು ಮುಂಬೈ ಘಟನೆಗಳಲ್ಲಿ ಹೊರಬಿದ್ದಿವೆ.
ಪರಿಸ್ಥಿತಿಯ ದುರ್ಬಳಕೆ
ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ರಾವ್ ದೇಶಮುಖ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೀತಿ ವಿಶೇಷ ಟೀಕೆಗೆ ಗುರಿಯಾಯಿತು. ತಮ್ಮ ಮಗ ನಟ ರಿತೇಶ್ ಜೊತೆಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ಕರೆದೊಯ್ದಿದ್ದರು. ಇದರ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈ ದಾಳಿಯ ಘಟನೆಯ ಮೂಲಕ ಒಂದು ಸಿನೆಮಾ ವಿಷಯ ವಸ್ತು ಸಿಕ್ಕಂತಾಯಿತು ಎಂಬುದು ಆಕ್ಷೇಪಕ್ಕೆ ಕಾರಣ. ಇದು ಈಗ ರಹಸ್ಯವೇನಲ್ಲ. ವಿಕಿಪಿಡಿಯಾದಲ್ಲಿ ರಾಮ್ ಗೋಪಾಲ ವರ್ಮಾ ಪುಟಗಳಲ್ಲಿ ’ದಿ ಶೂಟ್ ಔಟ್ ಅಟ್ ಮುಂಬೈ’ ಎಂಬ ಚಲನಚಿತ್ರದ ಹೆಸರನ್ನು ಉಲ್ಲೇಖಿಸಲಾಗಿದೆ. ಎಂತಹ ದುರಂತ ನೋಡಿ. ಇನ್ನೊಬ್ಬರ ಮನೆಗೆ ಹತ್ತಿದ ಬೆಂಕಿಯಲ್ಲಿ ಬೀಡಿ ಸೇದುವವರು ಇವರು.
ದೆಹಲಿಯಲ್ಲಿ ಕೇಂದ್ರ ಮಂತ್ರಿ ಮಂಡಲ ಸಭೆಯಲ್ಲಿ ಮುಖ್ಯಮಂತ್ರಿ ವಿಲಾಸರಾವ್ ದೇಶ್ಮುಖ್ ಘಟನೆಯ ವಿವರಗಳನ್ನು ತಿಳಿಸುವಾಗ ಪ್ರತಿ ಅಂಕಿ ಅಂಶವನ್ನು ಪ್ರಧಾನಿ ಮನಮೋಹನರು ತಿದ್ದಿ ಹೇಳುತ್ತಿದ್ದರಂತೆ. ಮುಖ್ಯಮಂತ್ರಿಗಿಂತ ಪ್ರಧಾನಿಗೆ ಘಟನೆಯ ತಾಜಾ ಮಾಹಿತಿ ಹೆಚ್ಚು ನಿಖರವಾಗಿ ಗೊತ್ತಿತ್ತು. ದೇಶಮುಖ್ ರಾಜೀನಾಮೆ ಪಡೆಯಲು ಇಂತಹ ಬೇಜವಾಬ್ದಾರಿ ಪ್ರವೃತ್ತಿ ಕಾರಣವಾಗಿದೆ.
ಸಲ್ಲದ ನಡವಳಿಕೆ
ಅಚ್ಯುತಾನಂದರದ್ದು ಇನ್ನೊಂದು ರೀತಿಯ ಅಸಹನೀಯ ನಡವಳಿಕೆ. ಅವರು ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದು ಸ್ವಯಂಪ್ರೇರಿತರಾಗಿ ಅಲ್ಲ. ಮೂರು ದಿನ ಕಳೆದ ಮೇಲೆ ಅನೇಕ ಕಡೆಗಳಿಂದ ಒತ್ತಡಗಳು ಬಂದ ನಂತರ ಬೆಂಗಳೂರಿಗೆ ಧಾವಿಸಿದ್ದು. ಪುತ್ರ ಶೋಕದ ಒತ್ತಡದಲ್ಲಿದ್ದ ಸಂದೀಪ್ರ ತಂದೆ ಉನ್ನಿಕೃಷ್ಣನ್ರು ಬಾಗಿಲು ಹಾಕಿ ಮುಖ್ಯಮಂತ್ರಿ ಭೇಟಿಗೆ ನಿರಾಕರಿಸಿದರು. ಅದೇನೇ ಕಾರಣವಿರಲಿ, ಉನ್ನಕೃಷ್ಣನ್ ಆ ರೀತಿ ಮಾಡಬಾರದಿತ್ತು. ಆದರೆ ಅದಕ್ಕಿಂತ ಕೀಳಾಗಿ ಆದ ಘಟನೆಯನ್ನು ತಮ್ಮ ವೈಯಕ್ತಿಕ ನೆಲೆಯಲ್ಲಿ ಒಂದು ಅಪಮಾನೆಂದು ಪರಿಗಣಿಸಿದ ಮುಖ್ಯಮಂತ್ರಿ ಅಚ್ಯುತಾನಂದರು ’ತಾನಲ್ಲದಿದ್ದರೆ ಆ ಮನೆಗೆ ನಾಯಿಯೂ ಹೋಗುತ್ತಿರಲಿಲ್ಲ’ ಎಂಬ ಮಾತುಗಳನ್ನು ಆಡಿದರು. ಇದು ಕೇರಳ ಆದಿಯಾಗಿ ಇಡೀ ದೇಶದಲ್ಲಿ ಆಕ್ರೋಶ ನಿರ್ಮಾಣಕ್ಕೆ ಕಾರಣವಾಯಿತು. ಕೊನೆಗೆ ಮುಖ್ಯಮಂತ್ರಿ ಅಚ್ಯುತಾನಂದರು ವಿಷಾದ ವ್ಯಕ್ತಪಡಿಸಬೇಕಾಯಿತು. ಒಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್, ಇನ್ನೊಂದೆಡೆ ಗೃಹಸಚಿವ ಆರ್.ಆರ್.ಪಾಟೀಲ್, ಮತ್ತೊಂದು ಕಡೆ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದರು ಎಲ್ಲರೂ ದುಡುಕಿದ ಹೇಳಿಕೆ ನಡವಳಿಕೆಗಳಿಂದ ಜನರ ಕೋಪಕ್ಕೆ ಬಲಿಯಾದರು. ಪಾಪ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಇವರ ಸಣ್ಣತನಕ್ಕೆ ಇನ್ನೂ ಕುಬ್ಜರಾಗಿ ನಿಲ್ಲಬೇಕಾಯಿತು.
ಉಗ್ರರಿಗೆ ಮತವಿಲ್ಲವೇ ?
ಇನ್ನೊಂದು ವಿಚಿತ್ರ ಘಟನೆಯನ್ನು ಅಂಕಣಕಾರ ಎಸ್. ಗುರುಮೂರ್ತಿ ಬರೆದಿದ್ದಾರೆ. ಉಗ್ರರಿಗೆ ಯಾವುದೇ ಮತ-ಧರ್ಮವಿಲ್ಲ ಎಂದು ಹೇಳುತ್ತಾರೆ. ಇದು ಮುಸ್ಲಿಂ ಉಗ್ರರ ವಿಷಯ ಬಂದಾಗ ಮಾತ್ರ. ಒಂದೆಡೆ ಬಾಂಬ್ ಸ್ಫೋಟಕ್ಕೆ ಹಿಂದುಗಳು ಕಾರಣರೆಂಬ ಒಂದೆರಡು ಮೇಲ್ನೋಟದ ಸುಳಿವು ದೊರೆತ ಕೂಡಲೇ; ಇನ್ನೂ ಅದು ತನಿಖೆಯಾಗಿ, ವಿಚಾರಣೆ ಮುಗಿದು ತೀರ್ಪು ಬರುವ ಮೊದಲೇ ಹಿಂದು ಉಗ್ರನಾಗಿಹೋಗಿತ್ತು. ಆದರೆ ಮುಂಬೈ ದಾಳಿಯ ಸಮಯದಲ್ಲಿ ತಾಜ್ ಹೋಟೆಲಿನಿಂದ ಹೊರಬರುತ್ತಿದ್ದ ಟರ್ಕಿಯ ಮುಸ್ಲಿಮರನ್ನು ಉಗ್ರರು ಕಿಂಚಿತ್ತೂ ತೊಂದರೆ ಮಾಡದೆ ಹೊರಗೆ ಕಳುಹಿಸಿಕೊಟ್ಟರಂತೆ. ಇದನ್ನು ಇಸ್ಲಾಮಿಕ್ ಭಯೋತ್ಪಾದನೆ ಎನ್ನಲು ಇದಕ್ಕಿಂತ ನಗ್ನ ಚಿತ್ರ ಇನ್ನೊಂದು ಬೇಕೇ ? ಅಂದರೆ ಮುಸ್ಲಿಮರ ಜೀವಕ್ಕೆ ಮಾತ್ರ ಬೆಲೆ. ಉಳಿದ ಮತೀಯರು ಮುಸ್ಲಿಂ ಉಗ್ರರಿಗೆ ಬಲಿಯಾಗಬೇಕೆಂದು ಹರಕೆ ಹೊತ್ತ ಕುರಿಗಳೇ ? ಈ ಘಟನೆ ಕುರಿತಂತೆ ಯಾಕೆ ಯಾವುದೇ ಮುಸ್ಲಿಂ ಆಗಲಿ, ಅಥವಾ ಬುದ್ಧಿಜೀವಿಯಾಗಲಿ ಖಂಡಿಸಲಿಲ್ಲ. ಇಂತಹ ನಡವಳಿಕೆಗಳು ನಿಶ್ಚಿತವಾಗಿ ಇಸ್ಲಾಂ ಮತಕ್ಕೆ ಅಪಾಯ ತರುವಂತಹವು. ಯಾವುದೇ ಮತ-ಸಂಪ್ರದಾಯ ಜೀವ ವಿರೋಧಿಯಾಗಿರಲು ಸಾಧ್ಯವಿಲ್ಲ. ಮಾನವ ವಿರೋಧಿಯಾಗಿ ನಡೆಯಲು ಅಸಾಧ್ಯ. ಏಕೆಂದರೆ ಈ ಜೀವಿಗಳನ್ನು, ಮಾನವನನ್ನು ಸೃಷ್ಟಿಸಿದವನು ಅವನೇ. ಅವನನ್ನು ಮೀರಿ ಯಾವುದೇ ಮತದ ಹೆಸರಲ್ಲಿ ಜನರ ಹತ್ಯೆಯನ್ನು ಅವನು ಸಹಿಸಲಾರ.
ವಿಳಂಬವಾದ ವಿವೇಕ
ಈ ವಿಚಾರ ಸ್ವಲ್ಪ ತಡವಾಗಿಯಾದರೂ, ಕೆಲವು ಕಡೆಯಾದರೂ ಅರ್ಥವಾಗಿ ಮುಸ್ಲಿಮರು ಈ ಬಾರಿ ಮುಂಬೈ ದಾಳಿಯನ್ನು ಖಂಡಿಸಿ ಬೀದಿಗೆ ಇಳಿದಿದ್ದು ಕಾಣುತ್ತಿತ್ತು. ಬಕ್ರಿದ್ ಹಬ್ಬವನ್ನು ಕೆಲವೆಡೆ ಕಪ್ಪು ಬಟ್ಟೆ ಕಟ್ಟಿಕೊಂಡು ಆಚರಿಸಿದ್ದಾರೆ. ಸತ್ತ ಉಗ್ರರ ಶವಗಳನ್ನು ಹೂಳಲು ತಮ್ಮ ಖಬ್ರಸ್ಥಾನಗಳಲ್ಲಿ ಅವಕಾಶ ನೀಡದೆ ಇರುವುದು, ಮುಸ್ಲಿಮ್ ಮಹಿಳೆಯರು ಸೇರಿದಂತೆ ಕೆಲವು ಮೌಲ್ವಿಗಳ ಭಾಗವಹಿಸಿದ್ದ ಪ್ರತಿಭಟನೆಗಳು ವ್ಯಕ್ತವಾದವು. ಸೆರೆ ಸಿಕ್ಕಿರುವ ಉಗ್ರ ಕಸಬ್ನ ಪರ ವಕಾಲತ್ತು ವಹಿಸಲು ಯಾವುದೇ ಮುಸ್ಲಿಂ ವಕೀಲ ಮುಂದೆ ಬರದಿರುವುದು. ಈ ಎಲ್ಲ ಬೆಳವಣಿಗೆಗಳು ಒಳ್ಳೆಯ ಸಂಕೇತಗಳಾದರೂ ಕೂಡಾ ಅವು ಎಷ್ಟು ಪ್ರಾಮಾಣಿಕ ಎಂಬುದನ್ನು ಸಿದ್ಧಪಡಿಸುವ ಹೊಣೆ ಅದೇ ಮುಸ್ಲಿಂ ಸಮಾಜಕ್ಕೆ ಸೇರಿದ್ದು. ಇದು ಪರಿಸ್ಥಿತಿಯ ಅನಿವಾರ್ಯತೆಯ ಕಾರಣದಿಂದ ಎಂಬ ಮಾತೂ ಇದೆ. ಏಕೆಂದರೆ ಮುಂಬೈ ಉಗ್ರರ ದಾಳಿಯ ನಂತರ ಸಾಮಾನ್ಯ ಜನರ ಆಕ್ರೋಶ ಹೆಚ್ಚಿದೆ. ನಿಧಾನವಾಗಿ ಮುಸ್ಲಿಂ ಸಮಾಜ ತನ್ನ ಇದ್ದ ಸಹಾನುಭೂತಿಯನ್ನು ಉಳಿದ ದೇಶಬಾಂಧವರಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಈಗ ಮುಸ್ಲಿಂ ಸಮಾಜದಲ್ಲಿ ಎದ್ದಿರುವ ಕಳಕಳಿಯು ಎಷ್ಟು ಆಳದ್ದು ಮತ್ತು ಅವರ ಒಳಗಿನ ಹಿಂಸಾ ಸಮರ್ಥಕ ಶಕ್ತಿಗಳು ಈ ದೇಶಹಿತಕಾರೀ ಬೆಳವಣಿಗೆಗಳನ್ನು ಹೇಗೆ ನೋಡುತ್ತವೆ ಎಂಬುದು ಸಹ ಈಗ ಮುಖ್ಯವಾಗುತ್ತದೆ.
ಮಾಧ್ಯಮಗಳ ವಿಕೃತಿ
ಮುಂಬೈ ಘಟನೆಯ ಸಂದರ್ಭದಲ್ಲಿ ಎಲ್ಲರಿಗೆ ನಷ್ಟವಾಯಿತು ಎಂದು ಭಾವಿಸಿದರೂ ಪತ್ರಿಕೆಗಳ ಪ್ರಸಾರಕ್ಕೆ ಮತ್ತು ಟಿ.ವಿ.ಚಾನೆಲ್ಗಳ ಟಿ.ಆರ್.ಪಿ. (ಟೆಲಿವಿಷನ್ ರೇಟಿಂಗ್ ಪಾಯಿಂಟ್)ಗೆ ಲಾಭವಾಯಿತು. ಎನ್ಡಿಟಿವಿ ೨೪x೭ ಚ್ಯಾನೆಲ್ ಒಟ್ಟು ಪ್ರಸಾರದ ೩೦% ವೀಕ್ಷಕರನ್ನು ಗಳಿಸಿಕೊಂಡರೆ, ೨೮% ವೀಕ್ಷಕರನ್ನು ಟೈಮ್ಸ್ ನೌ ಒಲಿಸಿಕೊಂಡಿತ್ತು. ಆದರೆ ಈ ಗಂಭೀರ ಸನ್ನಿವೇಶವನ್ನು ಮಾಧ್ಯಮಗಳು ಹೇಗೆ ಸ್ವೀಕರಿಸಿದವು ಎನ್ನುವದನ್ನು ವಿವರಿಸಲು ನಾಚಿಕೆಯಾಗುತ್ತದೆ. ಒತ್ತೆಯಾಳುಗಳಾಗಿದ್ದವರು ಹೊರಬರುತ್ತಿರುವಾಗ ಟಿ.ವಿ.ಚಾನೆಲ್ನ ಪತ್ರಕರ್ತನೊಬ್ಬ ಮೈಕ್ ಹಿಡಿದು ” ಈ ಪರಿಸ್ಥಿತಿಯಲ್ಲಿ ನಿಮ್ಮ ಗಂಡ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದಿದ್ದರೆ ತಮಗೆ ಈಗ ಏನೆನ್ನಿಸುತ್ತಿತ್ತು ಹೇಳಿ” ಎಂದು ಕೇಳಿದರೆ ಹೇಗೆ? ಅದಿರಲಿ, ಅದಕ್ಕೂ ಮುಂದೆ ಹೋಗಿ ” ಬೇಗ ಹೇಳಿ, ನನ್ನ ವಾರ್ತೆಯ ಸಮಯವಾಗುತ್ತಿದೆ”. ಇದು ಯಾವ ಸೀಮೆಯ ಮಾಧ್ಯಮ ಪ್ರವೃತ್ತಿ? ನಮ್ಮ ಉತ್ಸಾಹಿ ಕ್ಯಾಮರಾಮೆನ್ ಮತ್ತು ಚಾನೆಲ್ ಪತ್ರಕರ್ತರು ನಾರಿಮನ್ ಕಟ್ಟಡದ ಮೇಲೆ ಹೆಲಿಕಾಪ್ಟರ್ ಸುತ್ತುವುದನ್ನು, ಆಯಕಟ್ಟಿನ ಸ್ಥಳಕ್ಕೆ ಯೋಧರು ಅದರಿಂದ ಇಳಿಯುವುದನ್ನು ನಿರಂತರ ತೋರಿಸುತ್ತಿದ್ದರು. ಇದನ್ನು ತಾಜ್ ಹೋಟೆಲ್ ಒಳಗಿನಿಂದ ವೀಕ್ಷಸುತ್ತಿದ್ದ ಉಗ್ರರು ಎಚ್ಚರಗೊಳ್ಳುತ್ತಿದ್ದರು ಎನ್ನಲಾಗಿದೆ. ಎನ್.ಎಸ್.ಜಿ ಪಡೆಗಳ ಕಾರ್ಯತಂತ್ರವು ಒಳಗಿನ ಉಗ್ರರಿಗೆ ಚಾನೆಲ್ ಪ್ರಸಾರದ ಮೂಲಕ ರವಾನೆಯಾಗುತಿತ್ತು.
ತಾನು ಮೊದಲು ಪ್ರಸಾರ ಮಾಡಿದೆ ಎಂಬ ಕೀರ್ತಿಗೆ ಪಾತ್ರನಾಗಲು ಸಿಎನ್ನೆನ್-ಐಬಿಎನ್ ಸಂಪಾದಕ ರಾಜದೀಪ್ ಸರ್ದೇಸಾಯಿ ಒಂದು ದುಡುಕಿನ ಸುದ್ದಿ ಭಿತ್ತರಿಸಿದರು.” ಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ಮತ್ತೆ ಹೊಸದಾಗಿ ಗುಂಡಿನ ಚಕಮಕಿ”. ಅದು ಸುಳ್ಳು ಎಂದು ತಿಳಿಯಲು ಬಹಳ ಹೊತ್ತು ಹಿಡಿಯಲಿಲ್ಲ. ಆದರೆ ಆ ಅಕ್ಷಮ್ಯ ತಪ್ಪಿಗೆ ಸರ್ದೇಸಾಯಿ ಕೂಡಲೇ ಕ್ಷಮೆ ಕೇಳಬೇಕಿತ್ತು. ಕೆಲ ದಿನಗಳ ನಂತರ ಕೇಳಿದ್ದು ಬೇರೆ ಮಾತು. (ಅದಾದ ಕೆಲವೇ ದಿನಗಳಲ್ಲಿ ದೇಶದ ಎಡಿಟರ್ಸ್ ಗಿಲ್ಡ್ ಗೆ ಅಧ್ಯಕ್ಷ ಪಟ್ಟದ ಜವಾಬ್ದಾರಿಯುತ ಸ್ಥಾನ ಅಲಂಕರಿಸಿದರು, ಸರ್ದೇಸಾಯಿ.) ಈ ಪ್ರವೃತ್ತಿ ಮಾಧ್ಯಮಗಳ ಗೌರವವನ್ನು ನಾಶ ಮಾಡೀತು. ಮಾಧ್ಯಮಗಳು ವಿಘ್ನಸಂತೋಷಿಗಳು ಎಂಬ ಆಪಾದನೆಗೆ ಒಳಗಾಗಬೇಕಾದೀತು ಎಂಬ ಎಚ್ಚರ ಎಲ್ಲ ಪತ್ರಕರ್ತರಿಗಿರಬೇಕು. ಅದಕ್ಕಾಗಿ ಸೂಕ್ತ ತರಬೇತಿ ಮತ್ತು ವೀಕ್ಷಕರ ವಿಮರ್ಶೆಗಳು ಅತ್ಯವಶ್ಯಕ.
ಒಟ್ಟಾರೆ ಮುಂಬೈ ದಾಳಿಗೆ ನೂರಾರು ಪ್ರಾಣಗಳು ಬಲಿಯಾಗಿದ್ದರ ಜೊತೆಗೆ ಅದು ಕೆಲವು ಪಾಠಗಳನ್ನು ಕಲಿಸಿದೆ. ಆ ನೀತಿಗಳನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ಇಂತಹ ದಾಳಿ ನಡೆಯದಂತೆ; ಅಕಸ್ಮಾತ್ ನಡೆದಾಗ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಭವಿಷ್ಯದಲ್ಲಿ ಕಾದು ನೋಡಬೇಕಾಗಿದೆ.
೨೬/೧೧ರ ನಂತರದ ಪರಿಣಾಮಗಳು
· ಸುಮಾರು ೫೦,೦೦೦ ಕೋಟಿ ರೂ. ವ್ಯಾಪಾರದಲ್ಲಿ ನಷ್ಟ.
· ಸುಮಾರು ೧೦,೦೦೦ಕೋಟಿ ರೂ. ವಿದೇಶೀ ವಿನಿಮಯದ ನಷ್ಟ.
· ತಾಜ್, ಟ್ರಿಡೆಂಟ್, ಒಬೇರಾಯಿ ಹೋಟೆಲ್ ದುರಸ್ತಿಗೆ ೬೪೦ ಕೋಟಿ ರೂ.
· ದೆಹಲಿ ಮತ್ತು ಮುಂಬೈ ಹೋಟೆಲ್ಗಳಲ್ಲಿ ೧೫ರಿಂದ ೧೮,೦೦೦ ಐಷಾರಾಮಿ ಹೊಟೆಲ್ ಕೋಣೆಗಳು ಖಾಲಿ.
· ಸಿಕ್ಕಿ ಹಾಕಿಕೊಂಡ ಪಾಕ್. ಪಾಕಿಸ್ತಾನವು ಮುಂಬೈ ದಾಳಿಯ ಸಂಚು ರೂಪಿಸಿತ್ತು ಎಂಬ ಬಲವಾದ ಸಾಕ್ಷ್ಯಗಳು
ಅಮೇರಿಕದ ಬಳಿ.
· ಅಮೇರಿಕದ ಮಾಜಿ ಗೃಹ ಕಾರ್ಯದರ್ಶಿ ಆಲ್ಬ್ರೆಟ್ ಪ್ರಕಾರ ಪಾಕ್ಗೆ ’ಅಂತಾರಾಷ್ಟ್ರೀಯ ಮೈಗ್ರೇನ್’ ಎಂಬ ಪಟ್ಟ.
· ಭಾರತವು ಉಗ್ರರ ಪೀಡೆಯಿಂದ ಪ್ರವಾಸಿಗಳಿಗೆ ಅಪಾಯಕಾರಿ ತಾಣ ಎಂಬ ೨೦ ದೇಶಗಳ ಪಟ್ಟಿಗೆ ಸೇರ್ಪಡೆ.
· ಪಾಕಿಸ್ಥಾನಕ್ಕೆ ’ಅಂತಾರಾಷ್ಟ್ರೀಯ ಪೀಡೆ’ ಎಂಬ ಬಿರುದು.
· ಉಗ್ರರನ್ನು ದಮನಗೊಳಿಸಲು ಅಮೇರಿಕದ ಇನ್ನಿಲ್ಲದ ಒತ್ತಡ.
· ಪೋಟದ ಇನ್ನೊಂದು ರೂಪದ ಕಾನೂನು ರಚನೆಯ ಘೋಷಣೆ.ರಾಷ್ಟ್ರೀಯ ತನಿಖಾ ತಂಡದ ರಚನೆ.