
ವಿಶ್ವಾದ್ಯಂತ ಮತ್ತುವಿಶೇಷವಾಗಿ ಭಾರತದಲ್ಲೂ ಕೊರೊನಾ ಮಹಾಮಾರಿ ಭೀಕರವಾಗಿ ವ್ಯಾಪಿಸಿ ಮಹಾವಿಪತ್ತನ್ನು ಎದುರಿಸುವಂತಾಗಿದೆ. ಸಹಸ್ರಾರು ಜನ ಈಗಾಗಲೇ ಈ ವ್ಯಾಧಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ಮತ್ತು ಕೋಟ್ಯಂತರ ಜನ ಈ ವಿಪತ್ತಿನಿಂದ ಸಂಕಷ್ಟವನ್ನು ಎದುರಿಸುವಂತಾಗಿರುವುದು ತೀರಾ ವಿಷಾದನೀಯ .
ವಿಶ್ವಾದ್ಯಂತ ಅನೇಕ ದೇಶಗಳು, ನಮ್ಮಲ್ಲೂ ಕೇಂದ್ರ ಸರಕಾರ ಹಾಗೂ ಎಲ್ಲಾ ರಾಜ್ಯ ಸರಕಾರಗಳು, ವಿಜ್ಞಾನಿಗಳು, ವೈದ್ಯರು, ನೂರಾರು ಸಮಾಜ ಸೇವಾ ಸಂಘ ಸಂಸ್ಥೆಗಳು ಕೊರೊನಾ ವಿರುದ್ಧ ನಿಶಿಹಗಲು ಸಮರಸಾರಿ ಅದನ್ನು ಹಿಮ್ಮೆಟ್ಟಿಸಲು ಹೋರಾಟ ನಡೆಸುತ್ತಿದ್ದಾರೆ .
ಈ ಸಂಕಟಮಯ ಪರಿಸ್ಥಿತಿಯಲ್ಲಿ ಕೊರೊನಾ ವಿಪತ್ತಿನ ಮುಕ್ತಿಗಾಗಿ ಮತ್ತು ನಮ್ಮೆಲ್ಲರ ವೈಯಕ್ತಿಕ ಆತ್ಮವಿಶ್ವಾಸ ವೃದ್ಧಿಗಾಗಿ ಅಧ್ಯಾತ್ಮಿಕ ಅನುಷ್ಠಾನಗಳ ಬಗ್ಗೆಯೂ ವಿವಿಧೆಡೆಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ .
ಇದನ್ನು ಮನಗಂಡು ನಮ್ಮದೇಶದ ವಿವಿಧ ಮತಪಂಥಗಳ ವೈವಿಧ್ಯಮಯ ಧಾರ್ಮಿಕ ನಂಬಿಕೆ ಆಚರಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು *ವಿಶ್ವಹಿಂದು ಪರಿಷತ್ ಇದೇ ಬರುವ ಮೇ 20 ಗುರುವಾರದಂದು ದೇಶಾದ್ಯಂತ ಸಮಸ್ತ ಹಿಂದೂ ಸಮಾಜ ಕೊರೊನಾ ಮಾರಿಗೆ ಪ್ರಾಣಕಳೆದುಕೊಂಡವರ ಸದ್ಗತಿ ಮತ್ತು ಅತೀಶೀಘ್ರ ಈ ರೋಗದಿಂದ ಜಗತ್ತಿಗೆ ಮುಕ್ತಿ ದೊರೆತು ಕ್ಷೇಮಸಿದ್ಧಿಗಾಗಿ ಸಂಕಲ್ಪ ವಿಧಿ ಸಹಿತ ತಮ್ಮ ತಮ್ಮ ಇಷ್ಟ ದೇವರ ವಿಶೇಷ ಜಪ ಸ್ತೋತ್ರಗಳ ಅನುಷ್ಠಾನ ಮಾಡುವಂತೆ ಕರೆನೀಡಿದೆ ಎಂದು ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ಮಿಲಿಂದ್ ಪರಾಂಡೆ ತಿಳಿಸಿದ್ದಾರೆ .
ಈ ಸಂಬಂಧ ಎಲ್ಲರೂ ಆ ದಿನ ಶುಭ್ರ ವಸ್ತ್ರ ತೊಟ್ಟು ದೇವರ ಮುಂಭಾಗ ದೀಪಬೆಳಗಿ ಸಂಸ್ಕೃತ ಅಥವಾ ತಂತಮ್ಮ ಮಾತೃಭಾಷೆಯಲ್ಲಿ ದೇಶ ಕಾಲ ತಿಥಿ ವಾರಗಳನ್ನು ( ಪ್ಲವ ಮವತ್ಸರ , ಉತ್ತರಾಯಣ ಸೌರ ವೃಷಭ ಮಾಸ ವೈಶಾಖ ಶುದ್ಧ ಅಷ್ಟಮೀ ಗುರುವಾರ ) ಹೇಳಿಕೊಂಡು ಕೊರೊನಾದಿಂದ ಅಸುನೀಗಿದ ಸಮಸ್ತ ಬಂಧುಗಳ ಆತ್ಮಕ್ಕೆ ಸದ್ಗತಿ ಮತ್ತು ಕೊರೊನಾ ರೋಗದಿಂದ ಲೋಕಕ್ಕೆ ಶೀಘ್ರಮುಕ್ತಿ ದೊರೆತು ಶಾಂತಿ ನೆಮ್ಮದಿ ಕ್ಷೇಮ ಸುಭಿಕ್ಷೆಗಾಗಿ ಇಷ್ಟ ದೇವರಲ್ಲಿ ಪ್ರಾರ್ಥಿಸಿ ವಿಶೇಷವಾಗಿ ಜಪ ಸ್ತ್ರೋತ್ರಾನುಷ್ಠಾನವನ್ನು ಮಾಡುತ್ತೇನೆ ಎಂದು ಶ್ರದ್ಧೆ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಈ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ವಿಹಿಂಪ ನೀಡಿರುವ ಈ ಕರೆಗೆ ಪೇಜಾವರ ಶ್ರೀ ಸಹಿತ ಅನೇಕ ಮಠಾಧೀಶರ ಬೆಂಬಲ
ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಹಿತ ಉಡುಪಿಯ ಅಷ್ಟ ಮಠಾಧೀಶರು , ಮಂತ್ರಾಲಯ , ಸುತ್ತೂರು , ಸಿದ್ಧಗಂಗಾ ಆದಿಚುಂಚನಗಿರಿ , ಸಿರಿಗೆರೆ ಶ್ರೀ , ಉತ್ತರಾದಿ ಮಠಾಧೀಶರು , ಮೂಡಬಿದಿರೆ ಜೈನ ಮಠಾಧೀಶರು , ಸುಬ್ರಹ್ಮಣ್ಯ , ಒಡೆಯೂರು , ಮಾಣಿಲ , ವಜ್ರದೇಹಿ , ಎಡನೀರು , ಚಿತ್ರಾಪುರ , ಆನೆಗೊಂದಿ,ಕೊಂಡೆವೂರು , ಬಾಳೆಗಾರು , ಭೀಮನಕಟ್ಟೆ , ಬಾಳ್ಕುದ್ರು , ಜೋಗಿ ಮಠ , ಸೇರಿದಂತೆ ನಾನಾ ಮಠಾಧೀಶರು ಸ್ವಾಮೀಜಿ ಸಾಧು ಸಂತರು ಬೆಂಬಲ ವ್ಯಕ್ತಪಡಿಸಿದ್ದು ಎಲ್ಲರೂ ವಿಹಿಂಪ ಸೂಚನೆಯಂತೆ ಮೇ 20 ರಂದು ಇಷ್ಟದೇವರ ಜಪಾನುಷ್ಠಾನ ಮಾಡಿ ಪ್ರಾರ್ಥಿಸುವಂತೆ ತಿಳಿಸಿದ್ದಾರೆ .
ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಈ ಜಪಾನುಷ್ಠಾನ ನಡೆಸುವಂತೆ ವಿಹಿಂಪ ಕರೆ ನೀಡಿದೆ.