ವನದೇವತೆಯ ಮಡಿಲ ಮಕ್ಕಳು ಅಪರಾಧಿಗಳೆಂಬ ಹಣೆಪಟ್ಟಿ ಹೊತ್ತ ಕಥೆ !
ಡಾ.ರೋಹಿಣಾಕ್ಷ ಶಿರ್ಲಾಲು, ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ.
(ಲೇಖನ ೨೫ ಏಪ್ರಿಲ್ ೨೦೨೦ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)
ಅರಣ್ಯಗಳನ್ನೇ ತಮ್ಮ ನೆಲೆಯನ್ನಾಗಿ ಮಾಡಿಕೊಂಡು ಶತಶತಮಾನಗಳಿಂದ ಗಿಡ-ಮರ, ಬೆಟ್ಟ-ಗುಡ್ಡ, ತೊರೆ-ಝರಿಗಳನ್ನು ದೇವರಂತೆ ಕಂಡು , ಪ್ರಕೃತಿಯನ್ನೇ ಪೂಜಿಸಿಕೊಂಡು, ತಾಯಿಯ ಮಡಿಲಾಗಿ ಕಂಡು ಅಲ್ಲಿ ಸಿಗುವ ಆಹಾರೋತ್ಪನ್ನಗಳನ್ನು ಬಳಸುತ್ತಾ, ಬದುಕುತ್ತಾ ಬಂದ ವನದ ಮಕ್ಕಳೇ ವನವಾಸಿಗಳು ಅಥವಾ ಬುಡಕಟ್ಟುಗಳು. ಅರಣ್ಯದೊಳಗೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆಹೋಗುತ್ತಾ, ಬೇಟೆಯಾಡಿದ ಮಾಂಸ ಮತ್ತು ಕಾಡಿನ ಗಡ್ಡೆ ಗೆಣಸುಗಳಿಂದಲೇ ಬದುಕನ್ನು ನಿರ್ವಹಿಸಿಕೊಂಡು ಬಂದರೂ, ಅಕ್ಷಯ ಸಂಪತ್ತಿನ ಸ್ವರೂಪದಲ್ಲಿದ್ದ ಕಾಡನ್ನೆಂದಿಗೂ ತಮ್ಮ ಆಸೆಗೆ ಬಲಿಯಾಗಿಸದೆ ಪರಸ್ಪರ ಹೊಂದಾಣಿಕೆಯಿಂದ ಬದುಕಿದವರು ಈ ವನವಾಸಿಗಳು. ಅವರ ಲೋಕದೃಷ್ಟಿ ನಾಗರಿಕತೆಯ ಮುಖವಾಡ ಧರಿಸಿದವರಿಗಿಂತ ಭಿನ್ನವಾದುದು. ಅವರು ಪ್ರಕೃತಿಯನ್ನು ಕಂಡ, ಪೋಷಿಸಿದ ಜ್ಞಾನ ಒಂದು ಅಪೂರ್ವ ನಿಧಿ ಎನ್ನಬೇಕು.ಅರಣ್ಯದ ಸುತ್ತಲಿನ ಗ್ರಾಮಗಳ ಜತೆ ಒಡನಾಟ ಹೊಂದಿಯೂ ಬದುಕು ಕಟ್ಟಿಕೊಂಡದ್ದು ಮಾತ್ರ ಅರಣ್ಯದೊಳಗೆ. ಪ್ರಕೃತಿಯ ಸಿರಿತನದಲ್ಲಿ ಎಂದೂ ಬದುಕಿಗೆ ಕೊರತೆಯಾಗಲಿಲ್ಲ, ಬದುಕು ಬರಡಾಗಲಿಲ್ಲ. ಹೀಗಿದ್ದ ಬದುಕಿಗೆ ಮೊದಲ ಬಾರಿಗೆ ಸಂಕಟವೊಂದು ಬಂದಪ್ಪಳಿಸಿದ್ದು ವಸಾಹತುಶಾಹಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ.
ಅದು 1871ನೇ ಇಸವಿ. ಅಂದರೆ 150 ವರ್ಷಗಳ ಹಿಂದೆ ಬ್ರಿಟಿಷರು ರೂಪಿಸಿದ ಕಾನೂನೊಂದು ಈ ದೇಶದ ವನವಾಸಿ/ಬುಡಕಟ್ಟುಗಳು/ಅಲೆಮಾರಿಗಳ ಬದುಕಿಗೆ ಕರಾಳ ಕಾನೂನಾಯಿತು. ಈ ಕಾನೂನು ಅರಣ್ಯಗಳ ನಡುವಿನ, ಊರೂರು ಅಲೆದಾಟದ ಅವರ ಬದುಕಿನ ಸ್ವಾತಂತ್ರವನ್ನು ಕಸಿದು ಪುನರ್ವಸತಿ ಕೇಂದ್ರಗಳೆಂದು ಕರೆಯಲಾದ ಬಯಲ ಬಂಧೀಖಾನೆಗಳೊಳಗೆ ಬಂಧಿಸಿತು. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು, ನಿಧಾನವಾಗಿ ಭಾರತದ ಆಡಳಿತ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಇಲ್ಲಿನ ಸಂಪತ್ತನ್ನು ದೋಚುವ ಹಲವು ಮಾರ್ಗಗಳು ಕರಗತವಾಗಿದ್ದವು. ಮಾತ್ರವಲ್ಲ ಅದಕ್ಕಿರುವ ತಡೆಗಳನ್ನೂ ನಿವಾರಿಸಿಕೊಂಡಿದ್ದರು. ಅಂತಹುದೇ ಒಂದು ಉದ್ದೇಶಕ್ಕಾಗಿ ಜಾರಿಗೊಳಿಸಿದ ಕಾನೂನು ಅರಣ್ಯದ ಮಕ್ಕಳ ಪಾಲಿಗೆ ಅಕ್ಷರಶಃ ಉರುಳಾಯಿತು. ಯಾರು ಶತಶತಮಾನಗಳಿಂದ ಕಾಡನ್ನೂ, ನೆಲವನ್ನೂ ತಾಯಿಯ ರೂಪದಲ್ಲಿ ಕಂಡು ಪೋಷಿಸುತ್ತಾ ಬಂದಿದ್ದರೋ ಅಂತಹ ತಾಯಿಯ ಮಕ್ಕಳನ್ನು ತಾಯಿಯಿಂದ ದೂರಗೊಳಿಸಿ ತಬ್ಬಲಿಗಳನ್ನಾಗಿಸಿದ ಕಾನೂನದು. ತಾಯಿಯನ್ನೂ ಮಕ್ಕಳನ್ನೂ ಅನಾಥರನ್ನಾಗಿಸಿ ಸುಧಾರಣ ಕೇಂದ್ರಗಳಿಗೆ ತಳ್ಳಿದ ಕಾನೂನು. ನಾಗರಿಕತೆಯ ಮುಖವಾಡ ಧರಿಸಿ ಬಂದ ಬ್ರಿಟಿಷರು ಬಿಳಿಯರ ಶ್ರೇಷ್ಟತೆಯನ್ನು ಸಾರಲು , ಕರಿಯ ಜನರನ್ನು ಜನಾಂಗೀಯ ತಾರತಮ್ಯಕ್ಕೊಳಪಡಿಸಿ, ಸಾಧ್ಯವಾದೆಡೆಯಲ್ಲಾ ನಿರ್ಮೂಲನಗೊಳಿಸಿ, ನಾಗರಿಕ ಮುಖದ ಕ್ರೌರ್ಯವನ್ನು ಜಗತ್ತಿನಲ್ಲಿ ತಾವು ಹೋದೆಡೆಯೆಲ್ಲಾ ಮೆರೆದಿದ್ದವರು ಭಾರತದ ನೆಲದಲ್ಲಿನ ಮಣ್ಣ ಮಕ್ಕಳ ಬದುಕಿಗೆ ಕೊಳ್ಳಿಯಿಡಲು ರೂಪಿಸಿದ ಕಾನೂನು. ಅದೇ ‘Criminal Tribal Act -1871’
ಈ ಕಾನೂನು ಭಾರತದಲ್ಲಿ ಉಂಟುಮಾಡಿದ ಮಾನಸಿಕ, ದೈಹಿಕ ಕ್ರೌರ್ಯಕ್ಕೆ, ನೋವಿಗೆ ಇಂದೂ ಪೂರ್ಣಪ್ರಮಾಣದ ಬಿಡುಗಡೆ ಸಿಕ್ಕಿಲ್ಲ ಎಂದರೆ ತೀವ್ರತೆ ಅರ್ಥವಾಗಬಹುದು! 150 ವರ್ಷಗಳ ನಂತರವೂ ನಮ್ಮನ್ನಾಳುವ ಕಣ್ಣುಗಳಿಗೆ ಕವಿದ ಪೊರೆ ಪೂರ್ಣ ಬಿಡಿಸಲಾಗದಷ್ಟು ತಳವೂರಿದೆ. ಒಂದಿಡೀ ಜನಾಂಗವನ್ನು ಅಪರಾಧಿಗಳೆಂದು ಹಣೆಪಟ್ಟಿ ಹಚ್ಚಿದ ಕಾನೂನು. ಬುಡಕಟ್ಟು ಜನಾಂಗಗಳನ್ನು/ಅಲೆಮಾರಿ ಸಮುದಾಯಗಳನ್ನು ತಮ್ಮದೇ ನೆಲದಲ್ಲಿ ಕ್ರಿಮಿನಲ್ಗಳೆಂದು ಬ್ರಾಂಡ್ ಮಾಡಲಾಯಿತು. ಇನ್ನೂ ಹೊರಜಗತ್ತನ್ನೇ ನೋಡದ, ತಾಯಿಯ ಗರ್ಭದೊಳಗಿನ ಭ್ರೂಣವೂ ಹುಟ್ಟುತ್ತಲೇ ಅಪರಾಧಿ ಎಂಬ ಹಣೆಪಟ್ಟಿ ಹೊತ್ತೇ ಜನ್ಮಪಡೆಯುವಂತೆ ಮಾಡಿದ ಕಾನೂನದು. ಒಮ್ಮೆ ಅಪರಾಧಿಗಳೆಂದು ಗುರುತಿಸಿಬಿಟ್ಟರೆ ಬದುಕಿನ ಪರ್ಯಂತ ಯಾವಾಗ ಬೇಕಾದರೂ ಕಾನೂನು ಪಾಲನೆಯ ಹೆಸರಿನಲ್ಲಿ ಲಾಠಿ, ಕೋವಿಗಳನ್ನು ಪ್ರಯೋಗಿಸಲು ಅವಕಾಶ, ದಂಡಿಸಲು, ಗುಲಾಮರಾಗಿ ದುಡಿಸಲು ಪರವಾಣಿಗೆ ಕೊಟ್ಟ ಕಾನೂನು. ಎಂಥಾ ಭಯಾನಕ ಚಿತ್ರಣವಿದು? ವನದೇವತೆಯ ಮಡಿಲ ಮಕ್ಕಳಿಗೆ ಕ್ರಿಮಿನಲ್ಗಳೆಂಬ ತುಚ್ಛ ಕಿರೀಟ ! ನಾಗರಿಕತೆಯ ವಾರಸುದಾರರೆಂದು ಬೀಗುತ್ತಿದ್ದ ಬಿಳಿಯರ ನಾಗರಿಕ ಸಂವೇದನೆ ಇದು !!
1871ರಲ್ಲಿ ಜಾರಿಗೊಳಿಸಿದ ಕಾನೂನು 150ಕ್ಕೂ ಹೆಚ್ಚು ಬುಡಕಟ್ಟುಗಳನ್ನು ಅಪರಾಧಿ ಪ್ರವೃತ್ತಿ ಉಳ್ಳವರೆಂದು ನಾಮಕರಣ ಮಾಡಿತು. ಕಾನೂನು ಪಾಲನೆಯ ಹೆಸರಿನಲ್ಲಿ ಪೋಲಿಸರು ಈ ಸಮುದಾಯಗಳ ಯಾರನ್ನೂ, ಯಾವತ್ತೂ ಬಂಧಿಸಬಹುದು, ದಂಡಿಸಬಹುದು. ಅವರ ಸಂಚಾರವನ್ನು ನಿರ್ಬಂಧಿಸಬಹುದು. The law in effect was that anyone born into one of the tribes, under this act , was seen as a criminal” ಇದು ಈ ಕಾನೂನಿನ ವ್ಯಾಖ್ಯಾನ. ಹುಟ್ಟನ್ನೇ ಅಪರಾಧದ ಮಾನದಂಡವನ್ನಾಗಿಸಿದ ಬ್ರಿಟಿಷ್ ಆಡಳಿತಗಾರರನ್ನು ಯಾವ ಮಾನವ ಹಕ್ಕು ಉಲ್ಲಂಘನೆಯ ಭೀತಿಯೂ ಬಾಧಿಸಲಿಲ್ಲ. ಲಕ್ಷಾಂತರ ಸಂಖ್ಯೆಯ ಬುಡಕಟ್ಟು/ಅಲೆಮಾರಿ ಸಮುದಾಯಗಳನ್ನು ಅಪರಾಧಿಗಳೆಂದು ಹೆಸರು ನೋಂದಾಯಿಸಲಾಯಿತು. ವಿಚಾರಣೆಯೆ ಇಲ್ಲದೆ ಅಮಾಯಕರ ಕೊರಳಿಗೆ ಅಪರಾಧದ ತೂಗು ಪಟ್ಟಿ ಹಾಕಲು ಕಾನೂನು ಸಮ್ಮತಿಸಿತು. ಆ ಕಾನೂನು ಹೇಗೆ ಬಲಾಢ್ಯವಾಗಿತ್ತು ಎಂದರೆ,
“ No Court of Justice shall question the validity of any such notification on the ground that the provisions herein before contained , or any of them, have not been complied with,or entertain in any form whatever the question whether they have been complied with;but every such notification shall be conclusive proof that the provision of this Act are applicable to the tribe,gang or class specified therein” “ Any tribe, gang or class , which has been declared to criminal and which has no fixed place of residence, may be settled in a place of residence prescribed, by the Local Government” ಎಂದು ನಿಯಮ ರೂಪಿಸಲಾಗಿತ್ತು.
ಬುಡಕಟ್ಟುಗಳ ಬದುಕನ್ನು ಈ ಕಾನೂನು ನಿಜವಾಗಿಯೂ ಬರ್ಬರಗೊಳಿಸಿತು. ದಂಡನೆ, ಜೈಲುವಾಸಗಳನ್ನು ವರ್ಷಗಳವರೆಗೆ ವಿಸ್ತರಿಸುವ ಅವಕಾಶ ಒದಗಿಸಿತ್ತು. ಅಪರಾಧಿಗಳೆಂದು ಗುರುತಿಸಲಾದ ಸಮುದಾಯಗಳ ಸದಸ್ಯರು ಸ್ಥಳೀಯ ಪೊಲಿಸ್ ಠಾಣೆ, ಗ್ರಾಮ ಮುಖ್ಯಸ್ಥರ ಮುಂದೆ ಹಾಜರಾಗಿ ತಮ್ಮ ಇರುವಿಕೆಯನ್ನು ನಿಯಮಿತವಾಗಿ ತೋರಿಸಿಕೊಳ್ಳಬೇಕಾಗಿತ್ತು. ಸ್ವತಂತ್ರ ಸಂಚಾರ, ಸ್ವತಂತ್ರ ಬದುಕನ್ನು ಕಸಿದುಕೊಂಡು ಸರ್ಕಾರ ನಿಗದಿಪಡಿಸಿದ ಪುನರ್ವಸತಿ ಸ್ಥಾನಗಳಲ್ಲಿ ಬದುಕಬೇಕಾಗಿತ್ತು. ಅರಣ್ಯವನ್ನೇ ತಮ್ಮ ಬದುಕಿನ ಚೈತನ್ಯವಾಗಿಸಿಕೊಂಡಿದ್ದ ಸಮುದಾಯಗಳನ್ನು ಅರಣ್ಯದಿಂದ ಹೊರಗೆ ತೆಗೆದು ಅವರ ಬದುಕನ್ನೇ ನಿಸ್ತೇಜಗೊಳಿಸಲಾಯಿತು. ವಿದ್ವಾಂಸರು ಅಭಿಪ್ರಾಯ ಪಡುವಂತೆ ಈ ಕಾನೂನು “ The Criminal Tribes Act was completely an act of genocide on the Criminal tribes of India” ಆಗಿತ್ತು. ನರಮೇಧಕ್ಕೆ ಸಮಾನವಾದ ಈ ಕಾನೂನನ್ನು ರೂಪಿಸಿದ ಮನಸ್ಥಿತಿಯೇ ಎಷ್ಟು ಭಯಾನಕವಾಗಿತ್ತೆಂದರೆ, ಕಾನೂನು ರೂಪುಗೊಳಿಸಿದ ಜೆ.ಎಚ್. ಸ್ಟಿಫನ್ಸ್ ಎಂಬ ವೈಸರಾಯ್ ಕಾರ್ಯಕಾರಿ ಮಂಡಳಿ ಸದಸ್ಯ “ The special feature of India is the caste system. As it is , traders go by cast; a family of carpenters will be carpenter a century or five century hence, if they last so long. It means a tribe whose ancestors were criminals from time immemorial, who are themselves destined by the usage of cast to commit crimes and whose descendants will be offenders against law,until the whole tribe is exterminated or accounted for in the manner of Thugs. . . . Reform is impossible, for it is his trade, his caste, I may almost say his religion is to commit crime” ಎಂದಿದ್ದನು. ಪರಿಣಾಮವಾಗಿ ಭಾರತೀಯ ಬುಡಕಟ್ಟು ಸಮುದಾಯಗಳು ಹುಟ್ಟಿನಿಂದಲೇ ಅಪರಾಧಿಗಳೆಂಬ ಅವಮಾನಕ್ಕೊಳಗಾಗ ಬೇಕಾಯಿತು.
ಈ ಕಾನೂನು ಬ್ರಿಟಿಷರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಗುಲಾಮರನ್ನು ಒದಗಿಸಿಕೊಟ್ಟಿತು. ಅಕ್ಷರಶಃ ಬಂಧೀಖಾನೆಗಳಂತಿದ್ದ ಪುನರ್ವಸತಿ ಕೇಂದ್ರಗಳು ಬ್ರಿಟಿಷ್ ಸರ್ಕಾರಿ ಯೋಜನೆಗಳಾದ ರಸ್ತೆ, ರೈಲ್ವೆಹಳಿ, ಅಣೆಕಟ್ಟುಗಳನ್ನು ಕಟ್ಟುವ ಸಲುವಾಗಿ ಪುಕ್ಕಟೆಯಾಗಿ ಅಥವಾ ಕಡಿಮೆ ವೇತನಕ್ಕೆ ದುಡಿಯುವ ಕಾರ್ಮಿಕರನ್ನು ಪೂರೈಸುವ ದಾರಿಯಾಯಿತು. ದುಡಿಯುವ ಯಾವ ಅನುಕೂಲತೆಗಳು ಇಲ್ಲದಿದ್ದಾಗಲೂ ಈ ಕಾರ್ಮಿಕರನ್ನು ಬಲಾತ್ಕಾರದಿಂದ ಕೆಲಸಕ್ಕೆ ತೊಡಗಿಸಲು ಅವಕಾಶ ಒದಗಿಸಿತು. ಬಡತನ ಮತ್ತು ಕಳೆದುಹೋದ ಸ್ವಾತಂತ್ರ್ಯದಿಂದ ಅವರು ಗುಲಾಮರೇ ಆಗಿದ್ದರು. ವಸಾಹತುವಿನ ವಿಸ್ತಾರಕ್ಕಾಗಿ ರೂಪಿಸಿದ ಕಾನೂನುಗಳನ್ನು ಮೀರಿಯೂ ಸ್ವತಂತ್ರ ಬದುಕನ್ನು ಕಟ್ಟಿಕೊಂಡಿದ್ದ ಅಲೆಮಾರಿ ಬುಡಕಟ್ಟುಗಳನ್ನು ಈ ಕಾನೂನು ಬಗ್ಗಿಸುವುದರಲ್ಲಿ ಯಶಸ್ಸನ್ನು ಕಂಡಿತು. ಈ ಹಿಂದೆ 1857ರ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಪಸರಿಸುವಲ್ಲಿ ಅಲೆಮಾರಿ ಸಮುದಾಯಗಳ ಪಾತ್ರವನ್ನು ಸ್ವಷ್ಟವಾಗಿ ಗುರುತಿಸಿದ್ದ ಬ್ರಿಟಿಷರು ವನವಾಸಿಗಳನ್ನೇ ಅಪರಾಧಿಗಳೆಂದು ನಿರ್ಬಂಧಿಸಿ ಸಂಚಾರಕ್ಕೆ ತಡೆಹಾಕುವ ಮೂಲಕ ತಮ್ಮ ವಿರುದ್ಧ ನಡೆಯುವ ಹೋರಾಟದ ತೀವ್ರತೆಯನ್ನು ಮಟ್ಟಹಾಕುವ ಷಡ್ಯಂತ್ರದ ಭಾಗವೇ ಆಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಮಾತ್ರವಲ್ಲ ಈ ವಲಸೆ ನಿರ್ಬಂಧಿಸಿ ಕೂಡಿಹಾಕಲಾದ ಪುನರ್ವಸತಿ ಕೆಂದ್ರಗಳು ಕ್ರೈಸ್ತ ಮಿಷನರಿಗಳ ಮತಾಂತರದ ಚಟುವಟಿಕೆಗಳ ಕೇಂದ್ರವೂ ಆಯಿತು. ಈ ಮಿಷನರಿಗಳು ನಡೆಸುತ್ತಿದ್ದ “Salvation Army” ಯು ಸುಧಾರಣೆಯ ಹೆಸರಿನಲ್ಲಿ ಬಲಾತ್ಕಾರದ ಮತಾಂತರವನ್ನು ನಡೆಸುತ್ತಿತ್ತು. ಮತಾಂತರಗೊಂಡವರಿಗೆ ಜೀತದಿಂದ ಮುಕ್ತಿಯ ಆಸೆಯನ್ನೂ ತೋರಿಸಲಾಗುತ್ತಿತ್ತು. ಮುಗ್ಧ ವನವಾಸಿಗಳನ್ನು ಸುಲಭವಾಗಿ ಸರ್ಕಾರಿ ಪೋಷಣೆಯಿಂದಲೇ ಮತಾಂತರಿಸಲಾಯಿತು.ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಲಾಯಿತು. ಚರ್ಮದ ಬಣ್ಣದೊಂದಿಗೆ ನಾಗರಿಕತೆಯನ್ನು ತಳುಕು ಹಾಕಿ ಜಗತ್ತಿನಾದ್ಯಂತ ಜನಾಂಗೀಯ ತಾರತಮ್ಯವನ್ನು ಬೆಳೆಸಿದ ಯುರೋಪಿಯನ್ ಮನಸ್ಥಿತಿಯ ನಾಗರಿಕಗೊಳಿಸುವ ಕ್ರಿಯೆಯ ಭಾಗವಾಗಿಯೇ ಈ ಮತಾಂತರವನ್ನು ನಡೆಸಲಾಯಿತು.
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ಸುಮಾರು 128 ಬುಡಕಟ್ಟು ಸಮುದಾಯಗಳ ಅಂದಾಜು 3.5 ಕೋಟಿಗೂ ಮಿಗಿಲಾದ ಅಂದರೆ ಸರಿಸುಮಾರು ಭಾರತದ ಜನಸಂಖ್ಯೆಯ 1% ಜನರು ಹುಟ್ಟು ಅಪರಾಧಿಗಳೆಂಬ ಹಣೆಪಟ್ಟಿ ಹೊತ್ತು ಬದುಕಿದ್ದರು. ಮುಂದೆ 1952ರಲ್ಲಿ ಭಾರತ ಸರ್ಕಾರ ಈ ಕಾನೂನನ್ನು ಹಿಂಪಡೆದು ಅಪರಾಧಿ ಸಮುದಾಯಗಳನ್ನು ವಿಮುಕ್ತಗೊಳಿಸಿತು.ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಸುಧಾರಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಹೀಗಿದ್ದರೂ ‘ವಿಮುಕ್ತ ಜಾತಿ’ ಅಥವಾ “Denotified tribes” ಎಂದು ಗುರುತಿಸಲಾದ ಈ ಮಾಜಿ ಅಪರಾಧಿ ಬುಡಕಟ್ಟುಗಳಿಗೆ ಕಾನೂನಾತ್ಮಕ ಮಾನ್ಯತೆ ಬದಲಾಯಿತೇ ವಿನಃ ಅವರ ಸಾಮಾಜಿಕ ಬದುಕಿನೊಳಗೆ ಅಂಟಿಕೊಂಡಿದ್ದ ಅಪರಾಧಿಕ ಸಮುದಾಯಗಳೆಂಬ ಹಣೆಪಟ್ಟಿ ಪೂರ್ಣ ಬದಲಾಯಿತೇ ಎಂದು ನೋಡಿದರೆ ದುಃಖವಾಗುತ್ತದೆ.ಇಂದಿಗೂ ಕಾನೂನು ಪಾಲಕರ ಕಣ್ಣಿಗೆ ಅಲೆಮಾರಿಗಳು / ಬುಡಕಟ್ಟುಗಳೆಂದರೆ ಅಪರಾಧಿಗಳಾಗಿಯೇ ಕಾಣುತ್ತಿದ್ದಾರೆ ಎಂದರೆ ಅಂದು ಬ್ರಿಟಿಷರು ಬಿತ್ತಿದ ಒಡಕಿನ ಬೀಜ ಹೇಗೆ ಬೆಳೆದು ಮರವಾಗಿದೆ ಎಂದು ಅರಿವಾಗುತ್ತದೆ.