
ಇವತ್ತಿನ ಸ್ಥಿತಿಯಲ್ಲಿ ಒಂದು ಕ್ಲಬ್ ನ ಕಾರ್ಯದರ್ಶಿ ಸ್ಥಾನಕ್ಕೆ ಕೋಟ್ಯಂತರ ಖರ್ಚು ಮಾಡಿ ಚುನಾವಣೆಗೆ ನಿಲ್ಲುವವರು ಇರುವಾಗ ತನಗೆ ವಯಸ್ಸಾಗಿದೆ ಯುವಕರು ನನ್ನ ಹುದ್ದೆ ತೆಗೆದು ಕೊಳ್ಳಲಿ ಎಂದು ಭಯ್ಯಾಜಿ ಜೋಶಿ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ತಂದು ಕೂರಿಸಿರುವುದು ಅಪರೂಪದ ಬೆಳವಣಿಗೆ.
ಭಾರತದ ಇತಿಹಾಸದಲ್ಲಿ ಯಾವುದೇ ಸಂಘಟನೆಗಳು ಒಡೆಯದೇ 100 ವರ್ಷ ನಿಂತ ಉದಾಹರಣೆಗಳು ಕಮ್ಮಿ.ಕಾಂಗ್ರೆಸ್ ನಿಂದ ಹಿಡಿದು ಕಮ್ಯುನಿಸ್ಟರ್ ವರೆಗೆ ಸಮಾಜವಾದಿ ಗಳಿಂದ ಹಿಡಿದು ವೇದಾಂತ ಬೋಧಿಸುವ ಚಿನ್ಮಯ ಮಿಷನ್ ವರೆಗೆ ಬಹುತೇಕರು ವೈಯಕ್ತಿಕ ವೈಚಾರಿಕ ವ್ಯಾವಹಾರಿಕ ಕಾರಣಗಳಿಂದ ಕಿತ್ತಾಡಿ ದೂರವಾಗಿ ವಿಘಟಿಸಿ ಕೊಂಡಿದ್ದಾರೆ.ಆದರೆ ಕಳೆದ 96 ವರ್ಷದಲ್ಲಿ ಆರ್ ಎಸ್ ಎಸ್ ಮಾತ್ರ ಒಡೆಯದೇ ಏಕಶಿಲೆಯಾಗಿ ನಿಂತುಕೊಂಡ ಸಂಘಟನೆ.ತಿಲಕರು ಮಹಾತ್ಮಾ ಗಾಂಧಿ ರವರ ಪುಣ್ಯ ತ್ಯಾಗ ಮತ್ತು ಪರಿಶ್ರಮದಿಂದ ಆಸ್ತಿತ್ವ ಪಡೆದುಕೊಂಡ ಕಾಂಗ್ರೆಸ್ ನ ಎದುರಿಗೆ ಇವತ್ತು ಮೋದಿ ಕಾರಣದಿಂದ ಬಿಜೆಪಿ ಗಟ್ಟಿಯಾಗಿ ಪರ್ಯಾಯದ ರೂಪದಲ್ಲಿ ನಿಂತಿರಬೇಕಾದರೆ ಮುಖ್ಯ ಕಾರಣ ನಿಸ್ಸಂದೇಹವಾಗಿ ಆರ್ ಎಸ್ ಎಸ್ ಎಂಬುದು ವೈಚಾರಿಕ ವಿರೋಧಿಗಳು ಒಪ್ಪುವ ಮಾತು. .ದೇಶದಲ್ಲಿ ಒಂದೊಂದು ಕಾಲಘಟ್ಟದಲ್ಲಿ ಸಕ್ರಿಯರಾಗಿದ್ದ ಎಡ ಪಕ್ಷಗಳು ನಕ್ಸಲೀಯ ಸಂಘಟನೆಗಳು ಸಮಾಜವಾದಿಗಳು ಜನತಾ ಪಕ್ಷ ಜನತಾ ದಳ ಗಳು ಆಗಾಗ ಮತ್ತು ಅಲ್ಲಲ್ಲಿ ನಾಲ್ಕೈದು ವರ್ಷ ಕಾಂಗ್ರೆಸ್ ಗೆ ಪರ್ಯಾಯವಾಗಿ ನಿಂತುಕೊಂಡರು ಕೂಡ ಪ್ರಭಾವಿ ವ್ಯಕ್ತಿಗಳು ಅಳಿದಂತೆ ತಾವು ಕೂಡ ಒಡೆದು ಹೋಳಾಗಿ ಅಸ್ತಿತ್ವ ಕಳೆದುಕೊಂಡಿವೆ.ಅನ್ಯಾನ್ಯ ವಿಚಾರಧಾರೆಯ ಪ್ರಭಾವ ಕೂಡ ಸಾಕಷ್ಟು ಸ್ಥಿತ್ಯಂತರಕ್ಕೆ ಒಳಗಾಗಿ ವೈಚಾರಿಕ ಪ್ರಖರತೆ ಕಳೆದು ಕೊಂಡಿವೆ..ರಾಮ ಮನೋಹರ ಲೋಹಿಯಾ ನಂತರ ಸಮಾಜವಾದಿ ಚಳುವಳಿ ಯಾದವ ಒಕ್ಕಲಿಗರು ಪಟೇಲರಂಥ ಜಮೀನು ಮಾಲೀಕ ಜಾತಿಗಳ ಪಾರ್ಟಿ ಗಳಾಗಿ ರೂಪಾಂತರ ವಾಗಿದ್ದು ನಾವೆಲ್ಲ ನೋಡುತ್ತಿದ್ದೇವೆ. ಆದರೆ ಅಧಿಕಾರ ರಾಜಕಾರಣಕ್ಕೆ ಹತ್ತಿರವಿದ್ದು ವಿದ್ಯಾರ್ಥಿ ಕಾರ್ಮಿಕ ಮಹಿಳೆಯರಿಗೆ ರೈತರಿಗೆ ಶಿಕ್ಷಣಕ್ಕೆ ಸಹಕಾರ ಕ್ಷೇತ್ರಕ್ಕೆ ಅಂತಲೇ ನೂರಾರು ಸಂಘಟನೆಗಳು ಹುಟ್ಟಿಕೊಂಡರು ಕೂಡ ಆರ್ ಎಸ್ ಎಸ್ ಮತ್ತು ಸಂಘ ಪರಿವಾರ 1925 ರಿಂದ ಒಡೆಯದೇ ವಿಘಟಿಸದೆ ನಿಂತುಕೊಂಡಿರುವುದೇ ಇವತ್ತಿನ ಬಲ ಪಂಥೀಯ ವಿಚಾರಧಾರೆಯ ಉಚ್ಛಾಯಕ್ಕೆ ಮುಖ್ಯ ಕಾರಣ.ಶಾಲಾ ಸಹಪಾಠಿ ಯಾಗಿದ್ದ ಹೋ ವೇ ಶೇಷಾದ್ರಿಗಳ ಜೊತೆ ಮುದ್ದೆ ಊಟ ಮಾಡಲು ಕೇಶವಕೃಪಾ ಕ್ಕೆ ಬರುತ್ತಿದ್ದ ಎಚ್ ನರಸಿಂಹಯ್ಯ ನವರು ” ನನ್ನನ್ನು ವೈಚಾರಿಕ ಗಾಂಧಿ ಎಂದೆಲ್ಲ ಹೊಗಳುತ್ತಾರೆ ಆದರೆ ನಾನು ಮಾಡುವ ಕೆಲಸ ಮಾಡಿ ಬನ್ನಿ ಎಂದರೆ ತುಂಬಾ ಜನ ಬರೋಲ್ಲ . ಆದರೆ ಸಂಘದ ಶಾಖೆಗೆ ನಿತ್ಯ ಸಾವಿರಾರು ಹೊಸ ಯುವಕರು ಸೇರ್ಪಡೆ ಆಗುತ್ತಾರೆ.ನಿಮ್ಮ ವಿಚಾರಕ್ಕೆ ಬದ್ಧರಾಗಿದ್ದಾರೆ ಅವರೇನು ನಿಮ್ಮನ್ನು ಹೋಗಳುತ್ತಾ ಕೂರೋಲ್ಲ ನೋಡಿ ” ಎಂದು ಹೇಳಿದ್ದರಂತೆ.
ಪ್ರಚಾರಕ ಎಂಬ ವ್ಯವಸ್ಥೆ:
ಸಂಘದ ಯಶಸ್ಸು ಸ್ಥಿರತೆ ಮತ್ತು ನಿರಂತರತೆ ಗೆ ಮುಖ್ಯ ಕಾರಣ ಸಂಘಕ್ಕಾಗಿ ಜೀವನ ಸವೆಸುವ ಪ್ರಚಾರಕರು.ಮದುವೆ ಆಗದೇ ಬೇರೆ ವೃತ್ತಿ ಜೀವನ ನಡೆಸದೇ ಪೂರ್ಣಾವಧಿ ಸಂಘದ ಕೆಲಸವನ್ನೇ ನಿರ್ವಹಿಸುವ ಪ್ರಚಾರಕ ವ್ಯವಸ್ಥೆಯೇ ಸಂಘ ಇಷ್ಟು ವ್ಯಾಪಕವಾಗಿ ಬೆಳೆಯಲು ಉಳಿಯಲು ಮುಖ್ಯ ಕಾರಣ.ಪ್ರಚಾರಕರು ಎಂದರೆ ಬ್ರಹ್ಮಚರ್ಯ ಕಟ್ಟು ನಿಟ್ಟಾಗಿ ಪಾಲಿಸುವ ಅಧಿಕಾರ ಬಯಸದ 24 ಗಂಟೆ ಸಂಘಟನೆಯನ್ನೇ ಮಾಡುವ ಕಾವಿ ಧರಿಸದೇ ಇರುವ ಸಮೂಹ. ಮಠಗಳಲ್ಲಿ ರಾಮಕೃಷ್ಣ ಆಶ್ರಮ ಚಿನ್ಮಯ ಮಿಷನ್ ನಲ್ಲಿ ಕೂಡ ಸನ್ಯಾಸಿಗಳಿದ್ದಾರೆ..ಆದರೆ ಈ ನಿಯಮವನ್ನು ಸಾಮಾಜಿಕ ಸಂಘಟನೆಗಳಿಗೂ ತಂದಿದ್ದು ಮಾತ್ರ ಸಂಘವೇ ಮೊದಲು. ಕಮ್ಯುನಿಸ್ಟ್ ಸಂಘಟನೆಗಳಲ್ಲಿ ಕೂಡ ಇಂಥ ಪೂರ್ಣ ಅವಧಿಗೆ ಕೆಲಸ ಮಾಡುವ ಜನ ಇದ್ದಾರೆ.ಆದರೆ ಮದುವೆ ಆಗಬಾರದು ಎಂಬ ನಿಯಮ ಅಲ್ಲಿ ಇಲ್ಲ. ಸೋವಿಯತ್ ರಶಿಯಾ ವಿಘಟನೆ ನಂತರ ಕಮ್ಯುನಿಸಂ ತನ್ನ ಆಕರ್ಷಣೆ ಕಳೆದುಕೊಂಡರೆ ಇಸ್ಲಾಮಿಕ ಭಯೋತ್ಪಾದನೆ ಬೆಳೆದಂತೆಲ್ಲ ಬಲಪಂಥೀಯತೆಯ ಜನಪ್ರಿಯತೆ ಏರು ಮುಖದಲ್ಲಿದೆ.ಒಂದು ಕಾಲದಲ್ಲಿ ಸಮಾಜವಾದಿ ಕಮ್ಯುನಿಸ್ಟ್ ಅನ್ನಿಸಿ ಕೊಳ್ಳುವುದು ಫ್ಯಾಶನ್ ಆಗಿತ್ತು ಈಗ ಸಂಘ ಹಿಂದುತ್ವವಾದಿ ಎಂದು ಹೇಳಿಕೊಳ್ಳುವುದು ಟ್ರೆಂಡ್ ಆಗಿದೆ.
ಹೆಡಗೇವಾರ್ ರಿಂದ ಭಾಗವತ್ ವರೆಗೆ :
1920 ರಲ್ಲಿ ತಿಲಕರ ಅವಸಾನದ ನಂತರ ಕಾಂಗ್ರೆಸ್ ನಲ್ಲೇ ಇದ್ದ ನಾಗಪುರದ ಡಾ ಹೆಡಗೇವಾರ್ ಶುರು ಮಾಡಿದ್ದು ಸಂಘ.ಒಂದು ರೀತಿಯಲ್ಲಿ ಹಿಂದೂ ಮಹಾ ಸಭಾ ರಾಜಕೀಯ ಪಕ್ಷವಾದರೆ ಸಂಘ ರಾಜಕೀಯೇತರ ಸಂಘಟನೆ.ಹೀಗಾಗಿ ಎಷ್ಟೇ ಕಾಂಗ್ರೆಸ್ ನಲ್ಲಿದ್ದ ಹಿಂದೂ ವಾದಿ ಗಳು ಮನವೊಲಿಕೆ ಮಾಡಿದರು ಕೂಡ ಡಾ ಹೆಡಗೇವಾರ್ ಮತ್ತು ಗುರೂಜಿ ಗೋಳವಲ್ಕರ ಸಂಘವನ್ನು ಸಕ್ರಿಯ ರಾಜಕಾರಣದಿಂದ ದೂರ ಇಟ್ಟಿದ್ದರು.ಆದರೆ ಗಾಂಧಿ ಹತ್ಯೆಯ ಪ್ರಕರಣದಲ್ಲಿ ಸಾವರಕರ ಜೊತೆಗಿನ ಸಖ್ಯದ ಕಾರಣದಿಂದ ಪಂಡಿತ್ ನೆಹರು ಸಂಘದ ಮೇಲೂ ನಿಷೇಧ ಹೇರಿದರು.ಆಗ ಅನುಭವಿಸಿದ ಕಷ್ಟ ಗಳ ನಂತರ ಸಂಘದಲ್ಲಿ ನಮ್ಮದು ಒಂದು ರಾಜಕೀಯ ಸಂಘಟನೆ ಇರಬೇಕು ಎಂಬ ವಿಚಾರ ರೂಪು ತಳೆಯಿತು. ಅದಕ್ಕೆ ಮುಖ್ಯ ಕಾರಣ ಶ್ಯಾಮಾ ಪ್ರಸಾದ ಮುಖರ್ಜಿ.ಅವರ ಮನವೊಲಿಕೆ ಇಂದಾಗಿಯೇ ಗುರೂಜಿ ದೀನ ದಯಾಳ ಉಪಾಧ್ಯಾಯ ನಾನಾಜಿ ದೇಶ ಮುಖ ಬಲರಾಜ್ ಮುಧೋಕ್ ರಂಥ ಪ್ರಚಾರಕರೆ ಜೊತೆಗೆ ಅಟಲ್ ಮತ್ತು ಅಡ್ವಾಣಿ ರನ್ನು ಕಳುಹಿಸಿದರು. ಆಗ ಜನ್ಮ ತಳೆದದ್ದು ಜನಸಂಘ.ಆದರೆ ಸಂಘದ ಕೆಲಸಕ್ಕೆ ಮತ್ತು ಜನಸಂಘಕ್ಕೆ ಒಂದು ವೇಗ ಉತ್ಕರ್ಷ ಸಿಕ್ಕಿದ್ದು ಬಾಳಾ ಸಾಹೇಬ್ ದೇವರಸ್ ರ ಕಾಲದಲ್ಲಿ.ಸಂಘದಲ್ಲಿ ಪೊಲಿಟಿಕ್ಸ್ ಮತ್ತು ಜಾತಿ ಸಮೀಕರಣ ಅರ್ಥ ಆಗುತ್ತಿದ್ದ ಮೊದಲ ಪ್ರಚಾರಕರು ಎಂದರೆ ದೇವರಸ್ ಅವರು. ಅಟಲ್ ಅಡ್ವಾಣಿ ಸಮಕಾಲೀನ ರಾಗಿದ್ದ ರಜ್ಜು ಭಯ್ಯಾ ಕಾಲದವರೆಗೂ ಸಂಘ ಮತ್ತು ಬಿಜೆಪಿ ಸಂಬಂಧಗಳು ಚೆನ್ನಾಗಿಯೇ ಇದ್ದವು. ಆದರೆ ಯಾವಾಗ ಕುಸೀ ಸುದರ್ಶನ್ ಸರಸಂಘ ಚಾಲಕರಾದರೊ ಸಂಘ ಮತ್ತು ಬಿಜೆಪಿ ನಡುವೆ ಬಿರುಕುಗಳು ಬೀದಿಗೆ ಬಂದವು.ಸುದರ್ಶನ್ ದತ್ತೋ ಪಂತ ಥೇ0ಗಡಿ ಅಶೋಕ ಸಿಂಘಾಲ್ ಬೇರೆ ಬೇರೆ ಕಾರಣಗಳಿಗಾಗಿ ಅಟಲ್ ಜಿ ಮೇಲೆ ಮುಗಿ ಬಿದ್ದರು.ಆದರೆ 2014 ರಲ್ಲಿ ಸಂಘ ಮತ್ತು ಬಿಜೆಪಿ ಇಬ್ಬರು ಆ ತಪ್ಪು ಮಾಡುತ್ತಿಲ್ಲ. ಭಾಗವತ್ ಮತ್ತು ಮೋದಿ ಹೊಸಬಾಳೆ ಮತ್ತು ಅಮಿತ್ ಶಾ ಕೃಷ್ಣ ಗೋಪಾಲ ಮತ್ತು ಜೆ ಪಿ ನಡ್ಡಾ ರ ಸಂಬಂಧಗಳು ಚೆನ್ನಾಗಿದ್ದು ವಿವಾದಗಳು ಹೊರಗಂತು ಕಾಣುತ್ತಿಲ್ಲ.
ಸಮಚಿತ್ತದ ಹೊಸಬಾಳೆ
ಬಲಪಂಥ ಇರಲಿ ಎಡ ಪಂಥ ಇರಲಿ ಇತ್ತೀಚ್ಚಿನ ದಿನಗಳಲ್ಲಿ ಸಮಚಿತ್ತ ಇಟ್ಟುಕೊಂಡು ಮಾತನಾಡುವವರು ವ್ಯವಹರಿಸುವವರು ಕಡಿಮೆ.ಆದರೆ ಸಂಘದ ಹೊಸ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸಾಮರ್ಥ್ಯ ಎಂದರೆ ಸಮಚಿತ್ತದ ಮಾತು ನಡುವಳಿಕೆ ವಿರೋಧಿಗಳಿಗೂ ನೋವಾಗದಂತೆ ಸಂವಾದ ನಡೆಸುವ ಗುಣ.ಒಂದು ಕಡೆ ಪಿ ಲಂಕೇಶ್ ಕಿ ರಂ ನಾಗರಾಜ್ ರು ಹೊಸಬಾಳೆ ಅವರಿಗೆ ಬೆಂಗಳೂರು ವಿವಿ ಯಲ್ಲಿ ಮೇಷ್ಟ್ರು ಆಗಿದ್ದವರು.ಹಿಂದೊಮ್ಮೆ ಅಭಾವಿಪ ದಲ್ಲಿದ್ದು ಈಗ ಬಿಜೆಪಿ ಯನ್ನು ಕಟುವಾಗಿ ಟೀಕಿಸುವ ಪಿ ಜಿ ಆರ್ ಸಿಂಧಿಯಾ ಬಿ ಎಲ್ ಶಂಕರ ಉಗ್ರಪ್ಪ ಪ್ರೊಫೆಸರ್ ರಾಧಾಕೃಷ್ಣ ಈಗಲೂ ದತ್ತಾ ಅವರ ಆತ್ಮೀಯ ಮಿತ್ರರು.ಸಂಘದ ಚಡ್ಡಿಯನ್ನು ಬದಲಾಯಿಸಿ ಪ್ಯಾಂಟ್ ತಂದಿದ್ದು ಸಮ ಲೈಂಗಿಕತೆ ಬಗ್ಗೆ ಸಂಘದ ಬದಲಾದ ನಿಲುವಿನ ಹಿಂದೆ ಹೊಸಬಾಳೆ ಅವರ ನಿರಂತರ ಮನವರಿಕೆ ಕೆಲಸ ಮಾಡಿದೆ ಎಂದು ಸಂಘದ ವಲಯಗಳು ಹೇಳುತ್ತವೆ.ಇಷ್ಟು ದೊಡ್ಡ ಹುದ್ದೆಯಲ್ಲಿದ್ದರು ಬೆಂಗಳೂರಿಗೆ ಬಂದರೆ ಸಾಮಾನ್ಯ ಕಾರ್ಯಕರ್ತ ರೊಂದಿಗೆ ದ್ವಿ ಚಕ್ರ ವಾಹನದಲ್ಲಿ ಓಡಾಡುವ ಹೊಸಬಾಳೆ ಸಮಯ ಸಿಕ್ಕರೆ ಕನ್ನಡ ಮತ್ತು ಇಂಗ್ಲಿಷ್ ಚಿತ್ರಗಳನ್ನು ನೋಡೋದು ತಪ್ಪಿಸೋಲ್ಲ.ಒಟ್ಟಾರೆ ಸಂಘದ ಟಿಪಿಕಲ್ ಪ್ರಚಾರಕರೆ ಮಧ್ಯೆ ಹೊಸಬಾಳೆ ಸ್ವಲ್ಪ ಉದಾರವಾದಿ ಥರ ಅನ್ನಿಸುತ್ತಾರೆ.
ದೇಶ ಸುತ್ತಿದ ಕನ್ನಡಿಗರು:
ಕನ್ನಡಿಗರು ರಾಷ್ಟ್ರ ಮಟ್ಟದ ನಾಯಕರಾಗೋದು ಅಪರೂಪ.ಒಂದು ಭಾಷೆಯ ಕಾರಣದಿಂದ ಇನ್ನೊಂದು ಕೂಪ ಮಂಡೂಕ ತನದಿಂದ ಕಾವೇರಿ ಕೃಷ್ಣೆ ನೇತ್ರಾವತಿ ಬಿಟ್ಟು ದೂರ ಹೋಗುವವರಲ್ಲ.ಜಾರ್ಜ ಫರ್ನಾಂಡಿಸ್ ಆ ರೀತಿ ದೇಶದಲ್ಲೆಡೆ ಓಡಾಡಿ ಹಿಂದಿ ಕಲಿತು ಮಂಗಳೂರಿನಿಂದ ಮುಜಫರ್ ಪುರ ತಲುಪಿದವರು. ನಿಜಲಿಂಗಪ್ಪ ಮತ್ತು ಹೆಗ್ಡೆ ಗೆ ದಿಲ್ಲಿಯಲ್ಲಿ ಗೌರವ ಇತ್ತು.ಆದರೆ ದೇಶದ ಎಲ್ಲ ಜಿಲ್ಲೆಗಳಿಗೂ ಹೋದವರು ಅಲ್ಲ.ದೇವೇಗೌಡರು ಪ್ರಧಾನಿ ಆದರೂ ಕೂಡ ದೇಶ ಸುತ್ತಿದವರೇನು ಅಲ್ಲ . ಖರ್ಗೆ ಮೊಯಿಲಿ ಜಾಫರ್ ಷರೀಫ್ ಬೊಮ್ಮಾಯಿ ಇವರೆಲ್ಲ ಕೇಂದ್ರದ ಪ್ರಭಾವಿ ಸಚಿವರಾಗಿದ್ದರು ಹೌದು ಆದರೆ ರಾಜ್ಯದ ಹೊರಗೆ ಪ್ರಭಾವ ಸಂಬಂಧ ಸಂಪರ್ಕ ಅಷ್ಟಕಷ್ಟೇ.ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದರಿಂದ ಅನಂತ ಕುಮಾರ ಗೆ ದೇಶದಲ್ಲೆಡೆ ಸಂಬಂಧ ಇತ್ತು. ಸಂಘದಲ್ಲೇ ಸರ ಕಾರ್ಯವಾಹ ರಾಗಿದ್ದ ಹೋ ವೇ ಶೇಷಾದ್ರಿಗಳು ದೇಶ ಸುತ್ತಿದ್ದಕ್ಕಿಂತ ಕೋಶ ಓದಿ ಬರೆದದ್ದು ಜಾಸ್ತಿ.ಈಗ.ಆದರೆ ದತ್ತಾತ್ರೇಯ ಹೊಸಬಾಳೆ ಹೆಚ್ಚು ಕಡಿಮೆ 1983 ರಿಂದ ಅವ್ಯಾಹತವಾಗಿ ದೇಶದ ಎಲ್ಲ ಜಿಲ್ಲಾ ಕೇಂದ್ರಗಳನ್ನು ವರ್ಷಕ್ಕೊಮ್ಮೆ ಯಂತೆ ಸುತ್ತಿದ್ದಾರೆ.ಉತ್ತರ ಭಾರತಿಯರಿಗಿಂತ ಶುದ್ಧ ಹಿಂದಿ ಮಾತನಾಡುತ್ತಾರೆ.ಎಲ್ಲಕ್ಕಿಂತ ಹೆಚ್ಚು ದೇಶದ ಭೂಗೋಳದ ಒಟ್ಟು ಪರಿಸ್ಥಿತಿಯ ಅರಿವಿದೆ.
ಹೊಸಬಾಳೆ ಸವಾಲುಗಳೇನು?
1925 ರಲ್ಲಿ ಹುಟ್ಟಿದ ಸಂಘಕ್ಕೆ 1990 ರ ರಾಮ ಮಂದಿರ ಆಂದೋಲನ ಶುರು ಆಗುವವರೆಗೂ ಬಹಕಷ್ಟು ವಿಷಯಗಳ ಕೊರತೆ ಇತ್ತು.ಆದರೆ ಈಗ ಅಧಿಕಾರ ಸಂಪರ್ಕ ಸ್ವೀಕರಾರ್ಹತೆ ದುಡ್ಡು ಸೌಕರ್ಯಗಳು ಯಾವುದರ ಕೊರತೆಯು ಇಲ್ಲ.ಆದರೆ ಸಂಘಟನೆ ಮತ್ತು ವಿಚಾರ ಉಚ್ಛಾಯಕ್ಕೆ ಏರಿದ ನಂತರ ಅದನ್ನು ಸ್ಥಿರ ಗೊಳಿಸುವ ಪುನರಪಿ ಕೆಳಕ್ಕೆ ಬೀಳದಂತೆ ನೋಡಿಕೊಳ್ಳುವ ಸವಾಲು ಗಳಿವೆ.ಜಾತಿ ಮತ್ತು ಭಾಷೆಯ ಅಸ್ಮಿತೆ ಜಾಸ್ತಿ ಆಗುತ್ತಿರುವ ವೇಳೆಯಲ್ಲಿ ಸಂಘ ಅದನ್ನು ಹೇಗೆ ಎದುರಿಸುತ್ತಿದೆ ಎಂಬ ಸವಾಲು ಇದೆ.ಸಂಘ ಮತ್ತು ಹಿಂದುತ್ವದ ಆಕರ್ಷಣೆಯೇನೋ ಇದೆ.ಆದರೆ ಅದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರನ್ನು ಬಯ್ಯುವುದಕಷ್ಟೇ ಸೀಮಿತರಾವಾಗದೆ ರಚನಾತ್ಮಕ ಸೈದ್ಧಾಂತಿಕ ಬದ್ಧತೆ ಯಾಗಿ ಬದಲಾಯಿಸುವ ಸವಾಲು ಇದೆ.2024 ರ ಆಸುಪಾಸು ಸಂಘ ಮತ್ತು ಬಿಜೆಪಿ ಯ ಒಂದು ತಲೆಮಾರು ನಿವೃತ್ತಿಯ ಅಂಚಿಗೆ ಬರುತ್ತದೆ.ಅದನ್ನು ಒಡಕಿಲ್ಲದೆ ಹೊಸಬಾಳೆ ನಿಭಾಯಿಸುತ್ತಾರಾ ಎಂಬ ಆಂತರಿಕ ಸವಾಲು ಕೂಡ ಇದೆ.