
ರಾಷ್ಟೀಯ ಸುರಕ್ಷೆಯ ದ್ರಷ್ಟಿಯಿಂದ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲು ಹಾಗೂ 1,000ಕ್ಕೂ ಅಧಿಕ ಮದರಸಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಪ್ರಕಟಿಸಿದೆ.
ಈ ಕುರಿತ ಪ್ರಸ್ತಾವಕ್ಕೆ ಈಗಾಗಲೇ ಸಹಿ ಹಾಕಲಾಗಿದ್ದು, ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು ಎಂದು ಸಾರ್ವ ಜನಿಕ ಭದ್ರತಾ ಸಚಿವ ಶರತ್ ವೀರ ಶೇಖರ ಹೇಳಿದ್ದಾರೆ.
ಬೌದ್ಧ ದೇವಾಲಯ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವೀರಶೇಖರ ಅವರು ಬಾಲ್ಯದಲ್ಲಿ ತಮಗೆ ಸಾಕಷ್ಟು ಜನ ಮುಸ್ಲಿಂ ಗೆಳೆಯರಿದ್ದರು. ಆಗ, ಮುಸ್ಲಿಂ ಮಹಿಳೆಯರಾಗಲಿ, ಬಾಲಕಿಯರಾಗಲಿ ಬುರ್ಖಾ ಧರಿಸುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ಧಾರ್ಮಿಕ ಉಗ್ರವಾದದ ಸಂಕೇತವಾಗಿದೆ. ಹೀಗಾಗಿ, ಬುರ್ಖಾ ಧರಿಸುವುದನ್ನು ನಿಷೇಧಿಸುತ್ತೇವೆ ಎಂದಿದ್ದಾರೆ.
‘ದೇಶದಲ್ಲಿ ಸಾವಿರಕ್ಕೂ ಅಧಿಕ ಮದರಸಾಗಳು ಇವೆ. ಇವು ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಕಾರ್ಯ ನಿರ್ವಹಿಸುತ್ತಿಲ್ಲ. ಸಂಬಂಧಪಟ್ಟ ಪ್ರಾಧಿಕಾರದಲ್ಲಿ ಇವುಗಳು ನೋಂದಣಿಯನ್ನೂ ಮಾಡಿಲ್ಲ. ಹೀಗಾಗಿ ಈ ಮದರಸಾಗಳನ್ನು ಸಹ ಬಂದ್ ಮಾಡಲಾಗುವುದು ಎಂದಿದ್ದಾರೆ.
2019ರಲ್ಲಿ ಈಸ್ಟರ್ ದಿನ ಚರ್ಚ್ ಹಾಗೂ ಹೋಟೆಲ್ಗಳ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 260ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಈ ಘಟನೆ ನಂತರ ಬುರ್ಖಾ ಧರಿಸುವುದನ್ನು ಶ್ರೀಲಂಕಾ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿತ್ತು.