• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಅವರು ಮರಳಿ ಬಂದರು, ಏಕೆಂದರೆ ಕೇರಳ ಉಳಿಯಬೇಕಿತ್ತು: ಹಿರಿಯ ಆರೆಸ್ಸೆಸ್ ಪ್ರಚಾರಕ ಪಿ ಪರಮೇಶ್ವರನ್ ಕುರಿತಾದ ಸಂತೋಷ್ ತಮ್ಮಯ್ಯ ಲೇಖನ

Vishwa Samvada Kendra by Vishwa Samvada Kendra
February 9, 2020
in Articles
250
0
ಅವರು ಮರಳಿ ಬಂದರು, ಏಕೆಂದರೆ ಕೇರಳ ಉಳಿಯಬೇಕಿತ್ತು: ಹಿರಿಯ ಆರೆಸ್ಸೆಸ್ ಪ್ರಚಾರಕ ಪಿ ಪರಮೇಶ್ವರನ್ ಕುರಿತು ಸಂತೋಷ್ ತಮ್ಮಯ್ಯ ಲೇಖನ
491
SHARES
1.4k
VIEWS
Share on FacebookShare on Twitter

ಅವರು ಮರಳಿ ಬಂದರು, ಏಕೆಂದರೆ ಕೇರಳ ಉಳಿಯಬೇಕಿತ್ತು: ಹಿರಿಯ ಆರೆಸ್ಸೆಸ್ ಪ್ರಚಾರಕ ಪಿ ಪರಮೇಶ್ವರನ್ ಕುರಿತಾದ ಸಂತೋಷ್ ತಮ್ಮಯ್ಯ ಲೇಖನ

ಇಂದು ನಮ್ಮನ್ನಗಲಿದ ಶ್ರೀ ಪರಮೇಶ್ವರನ್ ಅವರ ಕುರಿತಾಗಿ ಪತ್ರಕರ್ತ, ಲೇಖಕ ಸಂತೋಷ್ ತಮ್ಮಯ್ಯ ಹಿಂದೊಮ್ಮೆ ಬರೆದ ಲೇಖನವನ್ನು ಮರು ಪ್ರಕಟಿಸಲಾಗಿದೆ.

ಇನ್ನು ತಾನು ಕಲಿಸಿದ್ದು ಸಾಕು ಎಂದುಕೊಂಡ ಗುರುವೊಬ್ಬ ಶಿಷ್ಯನನ್ನು ಕರೆದು ಪರೀಕ್ಷೆಗೊಡ್ಡುತ್ತಾನೆ. ಕಠಿಣ ಲಕ್ಷ್ಯಕ್ಕೆ ಗುರಿ ಇಡಲು  ಆತನಿಗೆ ಸೂಚಿಸುತ್ತಾನೆ. ಶಿಷ್ಯ ಆಯಕಟ್ಟಿನ ಜಾಗದಲ್ಲಿ ನಿಂತು ಲಕ್ಷ್ಯಕ್ಕೆ ಬಾಣ ಹೂಡುತ್ತಾನೆ. ಲಕ್ಷ್ಯ ಛೇದನವಾಗುತ್ತದೆ. ಶಿಷ್ಯ ಆನಂದಿತನಾಗುತ್ತಾನೆ. ಆದರೆ ಗುರು ಭೇಷ್ ಅನ್ನಲಿಲ್ಲ. ಕಲಿಸುವುದಿನ್ನೂ ಉಳಿದಿದೆ ಎಂದುಕೊಂಡ ಗುರು ಶಿಷ್ಯನನ್ನು ಕರೆದು ಮತ್ತೊಂದು ಗುರಿ ತೋರುತ್ತಾನೆ. ಮತ್ತು ಆ ಗುರಿಯನ್ನು ಇನ್ನೇನು ಆಗಲೋ ಈಗಲೋ ಮುರಿದು ಬೀಳಲಿರುವ ಸೇತುವೆ ಮೇಲಿಂದ ನಿಂತು ಬಾಣ ಹೂಡುವಂತೆ ಹೇಳುತ್ತಾನೆ. ಆ ಸೇತುವೆಯನ್ನು ನೋಡುತ್ತಲೇ ಶಿಷ್ಯನ ಮೈ ಜುಮ್ಮೆನ್ನುತ್ತದೆ. ಏಕೆಂದರೆ ಅಲ್ಲಿಂದ ಬಾಣ ಹೂಡುವುದು ಹಾಗಿರಲಿ, ಏರುವುದೇ ದುಸ್ತರ, ಏರಿದರೂ ತನ್ನ ಭಾರವನ್ನೂ ಕೂಡಾ ಆ ಸೇತುವೆ ಸಹಿಸಿಕೊಳ್ಳದು. ಶಿಷ್ಯ ಬಾಣ ಹೂಡಲು ಹಿಂಜರಿಯುತ್ತಾನೆ. ಗುರು ಲಕ್ಷ್ಯ ಮುಟ್ಟುವುದಕ್ಕಿಂತಲೂ ಎಲ್ಲಿಂದ ಬಾಣ ಹೂಡಿದೆ ಎನ್ನುವುದೂ ಕೂಡಾ ಮುಖ್ಯ, ತನ್ನ ಕಾಲ ಬುಡ ಗಟ್ಟಿಯಾಗಿದ್ದಾಗ ಎಲ್ಲವೂ ಗಟ್ಟಿಯಾಗಿರುತ್ತದೆ ಎಂಬ ಗುಟ್ಟನ್ನು ಶಿಷ್ಯನಿಗೆ ಭೋದಿಸುತ್ತಾನೆ. ಶಿಷ್ಯನ ಅಹಂಕಾರ ಕುಗ್ಗುತ್ತದೆ.
ಇದು ಕಥೆಯೋ, ನೀತಿ ಕಥೆಯೋ ಅಥವಾ ಕಟ್ಟುಕಥೆಯೋ ಗೊತ್ತಿಲ್ಲ. ಆದರೆ ಇದನ್ನು ಕೇಳಿದಾಗಲೆಲ್ಲಾ ಕೇರಳ ನೆನಪಾಗುತ್ತದೆ. ರಾಕ್ಷಸರಂಥಾ ಕಮ್ಯುನಿಸ್ಟರ ಮಧ್ಯೆ ನಿರಂತರ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಕೇರಳದ ಆರೆಸ್ಸೆಸ್ಸಿಗರ ಶ್ರದ್ಧೆ ನೆನಪಾಗುತ್ತದೆ. ಬೆರಗು ಹುಟ್ಟಿಸುತ್ತದೆ. ಒಂದೆಡೆ ಅರಬ್ ರಾಷ್ಟ್ರೀಯವಾದಿಗಳ ಅಬ್ಬರ, ಇನ್ನೊಂದೆಡೆ ಕಮ್ಯುನಿಸ್ಟರ ಅಕಾರ ಪ್ರೇರಿತ ಹತ್ಯೆಗಳು. ಆರೆಸ್ಸೆಸ್ ನೆಲಕಚ್ಚಿ ಮಣ್ಣಾಗುವ, ನೆಪ ಹೇಳುವ ಎಲ್ಲಾ ಅವಕಾಶಗಳೂ ಕೇರಳದಲ್ಲಿವೆ. ಆದರೆ ಬೆಳಗ್ಗೆ ಶಾಖೆಗೆ ಹೋದ ಹುಡುಗ ಮನೆಗೆ ಮರಳುವ ನಂಬಿಕೆ ಸ್ವತಃ ಆ ಹುಡುಗನಿಗೇ ಇಲ್ಲ, ಆತನನ್ನು ಶಾಖೆಗೆ ಕಳುಹಿಸಿದ ಮನೆಯವರಿಗೂ ಆ ನಂಬಿಕೆ ಇಲ್ಲ. ಅಂಥಲ್ಲಿ ಕೇರಳದ ಶಾಖೆಗಳ ಪ್ರಮಾಣ ದೇಶದಲ್ಲೇ ಹೆಚ್ಚು! ಅಲ್ಲದೆ ಶತಮಾನಗಳ ಕಾಲ ನಿರಂತರ ಮತಾಂಧರ, ವ್ಯಾಪಾರಿಗಳ ನೇರ ಆಕ್ರಮಣಗಳಿಗೆ ತುತ್ತಾದರೂ ಕೇರಳ ಇನ್ನೂ ಕೇರಳವಾಗಿಯೇ ಇದೆ! ದೇವರ ಸ್ವಂತ ನಾಡಾಗಿಯೇ ಇದೆ. ಶ್ರೀಮಂತವಾಗಿಯೇ ಇದೆ. ಕಮ್ಯುನಿಸ್ಟ್ ಆಡಳಿತವಿದ್ದರೂ ಕೇರಳದಲ್ಲಿ ಸಂಸ್ಕೃತಿ ಗಾಢವಾಗಿಯೇ ಇದೆ. ಇದಕ್ಕೆಲ್ಲಾ ಒಂದೇ ಒಂದು ಕಾರಣ ಕೇರಳದ ಆರೆಸ್ಸೆಸ್ ಸ್ವಯಂಸೇವಕರ ದಣಿವರಿಯದ ಶ್ರಮ. ಸ್ವಾರ್ಥವಿಲ್ಲದ, ದೊಡ್ಡವರ ಪಾದಕ್ಕೆ ಉಧೋ ಎಂದು ಬಿದ್ದು ನಾಟಕ ಮಾಡದ ಕೇರಳ ಕಾರ್ಯಕರ್ತರ ಬದ್ಧತೆ. ಧರ್ಮಕ್ಕಾಗಿ ಪ್ರಾಣವನ್ನಾದರೂ ಕೊಟ್ಟೇನು ಎಂಬ ಧೈರ್ಯ. ಮಲಯಾಳಿಗಳ ಈ ಗುಣವೇ ಕೇರಳವನ್ನು ಉಳಿಸಿದೆ. ಅದನ್ನು ರೂಪಿಸಿದೆ. ಆ ಗುಣವೇ ಇಂದಿನ ವಿಷಮ ಪರಿಸ್ಥಿತಿಯಲ್ಲೂ ರಾಜ್ಯವನ್ನು ದೇವರ ಸ್ವಂತ ನಾಡಾಗಿಯೇ ಕಾಪಾಡಿದೆ.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಕೇರಳದ ಸ್ವಯಂಸೇವಕರಲ್ಲಿ ಅಂಥ ಗುಣವನ್ನು ರೂಪಿಸಿದ ಹಲವು ವ್ಯಕ್ತಿತ್ವಗಳಿದ್ದವು. ಹೋರಾಟದ ವಾತಾವರಣದಲ್ಲಿ ಪ್ರತಿರೋಧ ಮತ್ತು ಆಕ್ರೋಶ ಮಾತ್ರ ಹುಟ್ಟುತ್ತದೆ. ಮತ್ತು ಅವು ಯಾರ ಪ್ರೇರಣೆಯಿಲ್ಲದೆಯೂ ಹುಟ್ಟುತ್ತವೆ ಎಂಬುದನ್ನು ಕೇರಳದ ಆರೆಸ್ಸೆಸ್ ನಾಯಕರು ಅರಿತಿದ್ದರು. ಪ್ರತಿರೋಧ ಮತ್ತು ಆಕ್ರೋಶ ಸಂಘಟನೆಯನ್ನು ಬಲಪಡಿಸಬಹುದೇ ಹೊರತು ಕೇರಳವನ್ನು ರೂಪಿಸಲಾರದು ಎಂಬ ಸತ್ಯ ಅವರಿಗೆ ತಿಳಿದಿತ್ತು. ಹಾಗಾಗಿ ಹೋರಾಟದ ಹಾದಿಯಲ್ಲಿಯೂ ಸ್ವಯಂಸೇವಕರಲ್ಲಿ ಚಿಂತನೆಯನ್ನು ರೂಪಿಸಿದ ಹಲವು ಮಹಾನ್ ನಾಯಕರು ಕೇರಳದಲ್ಲಿ ಹುಟ್ಟಿದರು. ಮತ್ತು ಪುಣ್ಯವಶಾತ್ ಅಂಥವರೇ ಕೇರಳಕ್ಕೆ ಬಂದರು. ಒಂದು ಕಾಲಕ್ಕೆ ನಾರಾಯಣಗುರುಗಳು ರಾಜ್ಯದಲ್ಲಿ ಮಾಡಿದ್ದ ಸಾಮಾಜಿಕ ಕ್ರಾಂತಿಯನ್ನೂ ಜನ ಮರೆತು ಸಾಕ್ಷಾತ್ ನಾರಾಯಣ ಗುರುಗಳನ್ನೇ ಸುವರ್ಣದ ಚೌಕಟ್ಟಿನಲ್ಲಿಟ್ಟು ಪೂಜಿಸಲಾರಂಭಿಸಿದ್ದರು. ಅಲ್ಲಿಗೆ ನಾರಾಯಣಗುರುಗಳ ಚಿಂತನೆಯನ್ನೂ ಜನ ಹಳ್ಳ ಹಿಡಿಸಿದ್ದರು. ಅದೇ ಹೊತ್ತಿಗೆ ಕಮ್ಯುನಿಸಂ ಎಂಬ ಭಯಂಕರ ಹಾಲಾಹಲ ರಾಜ್ಯವನ್ನು ಕೊಲ್ಲಲಾರಂಭಿಸಿತು. ಆ ಹೊತ್ತಲ್ಲಿ ನಾರಾಯಣ ಗುರುಗಳ ಚಿಂತನೆಗೆ ಜೀವ ಕೊಟ್ಟವರೂ ಇದೇ ಆರೆಸ್ಸೆಸ್ ಕಾರ್ಯಕರ್ತರು. ಅದೇ ಹೊತ್ತಿಗೆ ಮಹಾರಾಷ್ಟ್ರಿಂದ ಬಂದ ಪಿ. ಮಾಧವಜೀ ಎಂಬ ಆರೆಸ್ಸೆಸ್ ಮುಖಂಡರೊಬ್ಬರು ನಾರಾಯಣಗುರುಗಳ ಚಿಂತನೆಯಾಧಾರದಲ್ಲಿ ತಂತ್ರ ವಿದ್ಯಾಪೀಠ ಸ್ಥಾಪಿಸಿ ಶೂದ್ರರನ್ನೂ ಅರ್ಚಕರನ್ನಾಗಿ ನೇಮಕ ಮಾಡುವ  ಕಾರ್ಯಕ್ಕಿಳಿದರು.

ಎಂದಿನಂತೆ ಕಮ್ಯುನಿಸ್ಟರು ವಿರೋಸಿದರೆ, ಅವರ ಜೊತೆಗೆ ನಾರಾಯಣ ಗುರುಗಳನ್ನು ಜಾತಿ ಮುಖಂಡರನ್ನಾಗಿ ಕಟ್ಟಿಹಾಕಿದ ಜನಗಳೂ ವಿನಾ ಕಾರಣ ಮಾಧವಜೀ ಧೋರಣೆಯನ್ನು ವಿರೋಸಲಾರಂಭಿಸಿದರು! ಎಂ.ಎ ಕೃಷ್ಣನ್ ಎಂಬ ಮತ್ತೊಬ್ಬರು ಪ್ರಚಾರಕರ ಶ್ರಮದಿಂದ ಇಂದು ಕೇರಳದಲ್ಲಿ  ಕೃಷ್ಣವೇಷ ಧರಿಸಿದ ಮಕ್ಕಳ ಮೆರವಣಿಗೆಗಳು ವರ್ಷಕ್ಕೆ ಸುಮಾರು ಮೂರು ಸಾವಿರದಷ್ಟು ನಡೆಯುತ್ತವೆ. ಇದರ ಪ್ರೇರಣೆಯಿಂದ ಬಾಲಗೋಕುಲಂ ಎಂಬ ಪ್ರಕಲ್ಪವೇ ಅಸ್ತಿತ್ವಕ್ಕೆ ಬಂದಿದೆ. ಈ ಬಾಲಗೋಕುಲಂನ ಶಕ್ತಿ ಎಷ್ಟಿದೆಯೆಂದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಕ್ಕಳೂ ಇದರಲ್ಲಿ ಭಾಗವಹಿಸುತ್ತಾರೆ. ಇದರಿಂದ ಕಣ್ಣು ಕೆಂಪಾಗಿಸಿಕೊಂಡ ಕಮ್ಯುನಿಸ್ಟರು ಬಾಲಸಂಗಮಂ ಆರಂಭಿಸಿದ್ದಾರೆ! ಕೇರಳದಲ್ಲಿ ಆರೆಸ್ಸೆಸ್ ಆಡಳಿತದಿಂದ ದೂರವಿರವಿರಬಹುದು, ಆದರೆ ಸಮಾಜಕ್ಕೆ ಹತ್ತಿರದಲ್ಲಿದೆ. ಕಮ್ಯುನಿಸ್ಟರು ಆಡಳಿತ ನಡೆಸುತ್ತಿರಬಹುದು, ಆದರೆ ಸಮಾಜದಿಂದ ದೂರವಿದೆ. ಅದಕ್ಕೆ ಕಾರಣ ಆರೆಸ್ಸೆಸ್ಸಿನ ಸಂಘರ್ಷದ ಪರಿಸ್ಥಿತಿಯಲ್ಲೂ ಮರೆಯದ ತಮ್ಮ ಚಿಂತನಾ ಶಕ್ತಿ.
ಕೇರಳದಲ್ಲಿ ಅಂಥ ಚಿಂತನೆಯನ್ನು ಹುಟ್ಟುಹಾಕಿದ ಮತ್ತೊಬ್ಬ ಮಹಾವ್ಯಕ್ತಿ ಪಿ. ಪರಮೇಶ್ವರನ್.
ಕೇರಳದಲ್ಲಿ ಹಲವು ಸಾಮಾಜಿಕ ಬದಲಾವಣೆಗೆ ಕಾರಣರಾದವರು ಈ ಪರಮೇಶ್ವನ್‌ಜೀ. ಕೇರಳದಂಥ ವಿಚಿತ್ರ ಸಾಮಾಜಿಕ ವಾತಾವರಣದಲ್ಲಿ ಆರೆಸ್ಸೆಸಿಗೆ ಪ್ರತಿರೋಧ ಮತ್ತು ಅಸ್ತಿತ್ವಗಳೇ ಮುಖ್ಯವಾಗುತ್ತಿದ್ದ ಹೊತ್ತಲ್ಲಿ ಸಾಮಾಜಿಕ ಚಿಂತಕನಾಗಿ ಸಮಸ್ತ ಕೇರಳದ ಭಾವನೆಗಳನ್ನು ಪುನರುಜ್ಜೀವಿತಗೊಳಿಸಿದ ಮಹಾತ್ಮ ಈ ಪಿ.ಪರಮೇಶ್ವರನ್‌ಜೀ. ಇವರು ಆರೆಸ್ಸೆಸಿಗೆ ಮಾತ್ರವಲ್ಲ, ಸಮಸ್ತ ಕೇರಳಕ್ಕೇ ಮರುಭೂಮಿಯಲ್ಲಿ ದಿಢೀರನೆ ಸಿಕ್ಕ ನೀರಿನ ಸೆಲೆಯಂತೆ. ಹುಟ್ಟಿದ ಹೊಸ ಭರವಸೆಯಂತೆ. ಏಕೆಂದರೆ ಪಿ.ಪರಮೇಶ್ವರನ್ ಆರೆಸ್ಸೆಸಿನ ಪ್ರಚಾರಕರಾದರೂ ಕೇರಳದ ಖ್ಯಾತ ಚಿಂತಕ ಎಂದೇ ಹೆಸರಾದವರು. ಕೇರಳದಲ್ಲಿ ಅವರನ್ನು ಬರೆಯದ ಪತ್ರಿಕೆಗಳಿಲ್ಲ, ಮಾತಾಡಿಸದ ಟಿವಿಗಳಿಲ್ಲ. ಹೊಗಳದ ಕಮ್ಯುನಿಸ್ಟನೂ ಇಲ್ಲ. ಇಂಥ ಚಿಂತಕ ಆರೆಸ್ಸೆಸ್ ಬಿಟ್ಟರೆ ಇನ್ನಾವ ಸಂಘಟನೆಯಲ್ಲಿ ಸಿಕ್ಕಾನು? ಪರಮೇಶ್ವನ್‌ಜೀ ದಕ್ಷಿಣದ ಗಡಿಯಿಂದ ಉತ್ತರದ ಕಾಸರಗೋಡಿನವರೆಗೂ ಮನೆಮನೆಗಳಲ್ಲಿ ಮಾತಾಡಿಕೊಳ್ಳುವಂತಾಗಲು ಮುಖ್ಯ ಕಾರಣ ಅವರ ಚಿಂತನೆಯ ಆಳ ಮತ್ತು ಅವರ ಬದುಕು. ಸ್ವಂತದ್ದೆನ್ನುವುದು ಏನೂ ಇಲ್ಲದ, ಕನಿಷ್ಟ ಮನೆಯೂ ಇಲ್ಲದ ಆ ಮನುಷ್ಯ ಕೆಲವೇ ವರ್ಷಗಳಲ್ಲಿ ಕೇರಳದ ಸ್ವರೂಪವನ್ನೇ ಬದಲಿಸಿ ಉತ್ತರ ಭಾರತದ ಕಡೆಗೆ ನೋಡಿದ. ಆ ವ್ಯಕ್ತಿಯ ಚಿಂತನೆಯ ಬಿಸಿಗೆ ಕಮ್ಯುನಿಸ್ಟರು ತಮ್ಮ ಮನೆ ದೇವರು ಮಾರ್ಕ್ಸ್‌ನನ್ನು ಬಿಟ್ಟು ವಿವೇಕಾನಂದರ ಫೋಟೋ ಹಾಕಿ ಕಾರ್ಯಕ್ರಮ ಮಾಡತೊಡಗಿದರು! ಪಿ.ಪರಮೇಶ್ವನ್ ಜೀ ಎಂದರೆ ಒಂದು ಗ್ರಂಥಾಲಯ. ಹಲವು ಮೌಲ್ಯಗಳ ಮೂಟೆ. ಭಾರತೀಯ ತತ್ತ್ವಗಳ ಖಜಾನೆ. ಅವರ ಸಾಧನೆಗಳ ಪಟ್ಟಿಯನ್ನು ಮಾಡತೊಡಗಿದರೆ ಅದೇ ಒಂದು ಸಂಪುಟವಾದೀತು. ಕಳೆದ ಆರು ದಶಕಗಳಿಂದ ಅವರು ಉಸಿರಾಡಿದ್ದು ಸಮಾಜವನ್ನು. ಧರ್ಮವನ್ನು ಮತ್ತು ಭಾರತವವನ್ನು ಮಾತ್ರ.
ಇದು ಅವರ ಸಮಾಜ ಪರಿವರ್ತನಾ ಮಾದರಿಗೆ ಒಂದು ಉದಾಹರಣೆ ಮಾತ್ರ.
ಕೇರಳದಲ್ಲಿ ಕರ್ಕಟಕಂ ಮಾಸ ಎಂದರೆ ಧೋ ಎಂದು ಸುರಿಯುವ ಮಳೆ, ಉಕ್ಕುಕ್ಕಿ ಬರುವ ಸಮುದ್ರ, ಕಡಲ ಕಡೆಯಿಂದ ಬೀಸುವ ಕುಳಿರ್ಗಾಳಿ. ಶುಭ ಸಮಾರಂಭಗಳಿಲ್ಲ. ಇದುವರೆಗೆ ಕಾಣದ ರೋಗ ರುಜಿನಗಳು ಕರ್ಕಟಕಂ ಮಾಸಕ್ಕಾಗಿಯೇ ಕಾದಿದೆಯೋ ಎನ್ನುವಂತೆ ದಾಳಿ ಮಾಡುತ್ತವೆ. ರೋಗಿಷ್ಠರಿಗೆ ಹೆಚ್ಚೆಚ್ಚು ಕಾಡುವ ಮರಣದ ಭಯ. ಅಲ್ಲಲ್ಲಿ ಭೂಕುಸಿತ, ಕಡಲ್ಕೊರೆತ, ಸಾವುನೋವು. ಮಾಡಲು ಕೆಲಸವಿಲ್ಲ. ಎಲ್ಲೆಲ್ಲೂ ಅಪಶಕುನ. ಜೊತೆಗೆ ಸೂರ್ಯನ ದರ್ಶನವಿಲ್ಲ. ಒಟ್ಟಾರೆ ಮಲಯಾಳಿಗಳ ಪಾಲಿಗೆ ಕರ್ಕಟಕಂ ಮಾಸವೆಂದರೆ ಅಶುಭ ಮಾಸ. ಎಷ್ಟೋ ಸಾವಿರ ವರ್ಷಗಳಿಂದ ಅವರಲ್ಲಿ ಬಲಿತಿದ್ದ ಆ ಭಾವನೆ ಕ್ರಮೇಣ ಪದ್ಧತಿಯಾಗಿ ಬದಲಾಗಿಬಿಟ್ಟಿತ್ತು. ಕೆಲವು ಆಚರಣೆಗಳನ್ನು ಮಾಡಬಾರದೆಂಬ ನಿಯಮ ಸೇರಿಹೋಗಿತ್ತು. ಶುಭ ಸಮಾರಂಭಗಳು ನಡೆಯಬಾರದೆಂಬ ಕಟ್ಟಳೆಗಳನ್ನು ಹಾಕಿಕೊಳ್ಳಲಾಗಿತ್ತು. ಕರ್ಕಟಕಂ ಮಾಸದಲ್ಲಿ ಹೊಸ ಕೆಲಸ ಆರಂಭಿಸಲು ಮಲಯಾಳಿಗಳು ಹೆದರಲಾರಂಭಿಸಿದರು.

ಕೇರಳದಲ್ಲಿ ಎಂಥೆಂಥಾ ಸುಧಾರಕರು ಬಂದರೂ ಈ ಅಶುಭ ಮಾಸವನ್ನು ಶುಭ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕಮ್ಯುನಿಸ್ಟರು ವರ್ಷಗಟ್ಟಲೆ ಆಳಿದರೂ ಅವರೂ ಸೋಗಲಾಡಿಗಳಾಗಿ ಅಶುಭ ಮಾಸವನ್ನು ಮತ್ತಷ್ಟು ಅಶುಭವಾಗಿಟ್ಟರು. ವಿಚಿತ್ರವೆಂದರೆ ಹೊಸ ಕಾಲ ಬಂದಂತೆ ಕರ್ಕಟಕಂ ಮಾಸಕ್ಕೆ ಹೊಸ ಕಟ್ಟುಪಾಡುಗಳೂ ಸೇರ್ಪಡೆಗೊಳ್ಳತೊಡಗಿತು. ಕೆಲವು ದೇವಸ್ಥಾನಗಳಲ್ಲಿ ಕೆಲವು ಪೂಜೆಗಳನ್ನು ನಡೆಸಬಾರದು ಎಂಬ ನಿಯಮ ಕೂಡ ಸೇರ್ಪಡೆಯಾಯಿತು.
ಆದರೆ ಕೆಲವು ವರ್ಷಗಳಿಂದೀಚೆಗೆ ಕರ್ಕಟಕಂ ಮಾಸದ ಬಗೆ ಇದ್ದ ಆ ಭಾವನೆ ಬದಲಾಗಿದೆ. ಅಶುಭವೆಂದುಕೊಳ್ಳುತ್ತಿದ್ದ ಕರ್ಕಟಕಂ ತಿಂಗಳೀಗ ಕೇರಳದಲ್ಲಿ ರಾಮಾಯಣ ಮಾಸಂ. ಕೇರಳದ ಪ್ರತೀ ಹಿಂದೂ ಮನೆ, ಪ್ರತೀ ಸಣ್ಣ ಮತ್ತು ದೊಡ್ಡ ದೇವಸ್ಥಾನಗಳಲ್ಲಿ ಕರ್ಕಟಕಂ ಮಾಸ ಪೂರ್ತಿ ರಾಮಾಯಣ ಪಠಣ ಆರಂಭವಾಗುತ್ತದೆ. ತಿಂಗಳಾಂತ್ಯಕ್ಕೆ ಪಠಣ ಮುಗಿಯುತ್ತದೆ. ಹಲವು ಸಂಘ ಸಂಸ್ಥೆಗಳು ಸಾರ್ವಜನಿಕ ರಾಮಾಯಣ ಪಠಣವನ್ನು ಆಯೋಜಿಸುತ್ತವೆ. ರಾಮಾಯಣ ಪಠನದಿಂದ ಈ ವೊದಲು ಜನರಲ್ಲಿ ಮನೆಮಾಡಿದ್ದ ಅಶುಭ ಎಂದುಕೊಂಡಿದ್ದ ಎಲ್ಲಾ ನಿಯಮಗಳೂ ಮಾಯವಾಗಿವೆ. ಕ್ಯಾಲೆಂಡರಿನಲ್ಲಿ ಕೂಡಾ ಕರ್ಕಟಕಂ ತಿಂಗಳನ್ನು ರಾಮಾಯಣ ಮಾಸಂ ಎಂದು ಛಾಪಿಸಲಾಗುತ್ತದೆ. ಈ ಬದಲಾವಣೆಗೆ ಕಾರಣರಾದವರು ಪಿ.ಪರಮೇಶ್ವರನ್ ಜೀ.
ಭಾರತೀಯ ವಿಚಾರ ಕೇಂದ್ರದ ನಿರ್ದೇಶಕರಾಗಿ ಕೇರಳದ ಬೌದ್ಧಿಕ ವಲಯವನ್ನು ವಿಸ್ತರಿಸುವ ಕಾರ್ಯಕ್ಕೂ ಪರಮೇಶ್ವರನ್‌ಜೀ ಇಳಿದರು. ಭಾರತೀಯ ವಿಚಾರ ಕೇಂದ್ರ ಇಂದು ಕೇರಳದ ವೈಚಾರಿಕ ಮತ್ತು ಸಂಶೋಧನಾ ಕ್ಷೇತ್ರದ ಕಾಶಿ ಎಂದೇ ಖ್ಯಾತವಾಗಿದೆ. ಜಾತಿ ತಾರತಮ್ಯವಿಲ್ಲದೆ, ಸಿದ್ಧಾಂತಗಳ ಹಗಿಲ್ಲದೆ ವಿಚಾರ ಕೇಂದ್ರದಲ್ಲಿ ಪ್ರತೀ ವರ್ಷ ಸಾವಿರಾರು ಯುವಕರು ಇತಿಹಾಸ, ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ, ಶಿಕ್ಷಣ, ಪರಿಸರ, ಅಭಿವೃದ್ಧಿ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ. ಕೇರಳಾದ್ಯಂತ ವಿಚಾರ ಕೇಂದ್ರದ ೩೦ ಘಟಕಗಳಿವೆ. ಕೇರಳದ ಆರೆಸ್ಸೆಸಿಗೆ ವಿಚಾರಕೇಂದ್ರವನ್ನು ಮತಾಂತರ ಕೇಂದ್ರವಾಗಿಯೂ ಮಾಡಬಹುದಿತ್ತು, ಕಮ್ಯುನಿಸ್ಟರ ತಲೆತಿರುಗಿಸುವ ಕೇಂದ್ರವಾಗಿಯೂ ರೂಪಿಸಬಹುದಿತ್ತು. ಆದರೆ ವಿಚಾರ ಕೇಂದ್ರ ಕೇವಲ ಭಾರತೀಯತೆಯನ್ನು ಮಾತ್ರ ಪಸರಿಸುವ ಕೆಲಸವನ್ನು ಮಾಡುತ್ತಿದೆ. ಪ್ರಾಮಾಣಿಕವಾದ ಸೆಕ್ಯುಲರಿಸಂ ಸಂಸ್ಕೃತಿಯನ್ನು ಕೊಲ್ಲುವುದಿಲ್ಲ, ಹಿಂದುತ್ವ ಅಂಥ  ನಿಜವಾದ ಸೆಕ್ಯುಲರಿಸಮ್ಮಿನ ಪೋಷಕ. ಹಾಗಾಗಿ ಅದು ಸಂಸ್ಕೃತಿಯನ್ನು ಆರಾಸುತ್ತದೆ ಎನ್ನುವ  ಸತ್ಯವನ್ನು ವಿಚಾರಕೇಂದ್ರ ಅದೆಷ್ಟೋ ಕಮ್ಯುನಿಸ್ಟ್ ಚಿಂತಕರಿಗೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಮಾರ್ಕ್ಸ್ ಮತ್ತು ವಿವೇಕಾನಂದ, ಮಾರ್ಕ್ಸ್ ನಿಂದ ಮಹರ್ಷಿವರೆಗೆ, ಹಿಂದೂ ರಾಷ್ಟ್ರದ ಹೃದಯಬಡಿತ ಸಹಿತ ೧೨ ಪುಸ್ತಕಗಳನ್ನು ಬರೆದಿರುವ ಪರಮೇಶ್ವರನ್ ಅವರ ಎಲ್ಲಾ ಪುಸ್ತಕಗಳು ಕೇರಳದ ಚಿಂತಕ ವಲಯದಲ್ಲಿ ಚರ್ಚೆಗೊಳಗಾಗಿವೆ. ಆದರೆ ಯಾವ ಪುಸ್ತಕಗಳೂ ವಿವಾದಗಳಾಗಿಲ್ಲ. ಏಕೆಂದರೆ ಪರಮೇಶ್ವರನ್‌ಜೀ ಅವರ ಚಿಂತನೆಗಳನ್ನು ಒರೆಗೆ ಹಚ್ಚಬಲ್ಲ ಕಮ್ಯುನಿಸ್ಟರು ಇನ್ನೂ ಹುಟ್ಟಿಲ್ಲ.
ಕಳೆದ ೧೫ ವರ್ಷಗಳಿಂದ ವಿವೇಕಾನಂದ ಕೇಂದ್ರದ ಅಧ್ಯಕ್ಷರಾಗಿರುವ ಪರಮೇಶ್ವರನ್ ಕೇಂದ್ರವನ್ನು ರಾಷ್ಟ್ರಕಟ್ಟುವ ಅಸ್ತ್ರವಾಗಿ ಮಾರ್ಪಡಿಸಿದರು. ಕೇರಳ ಮತ್ತು ತಮಿಳುನಾಡುಗಳಲ್ಲಿ ವಿವೇಕಾನಂದ ಕೇಂದ್ರದ ಚಟುವಟಿಕೆಗಳಿಂದ ಮತಾಂತರದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಅಷ್ಟೇ ಅಲ್ಲ, ಚರ್ಚಿಗೆ ಹೋಗುವ ಜನರೂ ಇದೀಗ ಭಾನುವಾರ ದಿನ ವಿವೇಕಾನಂದ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ಉತ್ತರದ ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಅಂಡಾಮಾನ್‌ಗಳಲ್ಲೂ ವಿವೇಕಾನಂದ ಕೇಂದ್ರ ಶಾಲೆಗಳನ್ನು, ಬಾಲವಾಡಿಗಳನ್ನು, ವನವಾಸಿ ಕ್ಷೇತ್ರಗಳಲ್ಲಿ ಆನಂದಾಲಯಗಳನ್ನು ನಡೆಸುತ್ತಿದೆ. ಇವೆಲ್ಲವೂ ಒಬ್ಬ ಪಿ. ಪರಮೇಶ್ವರನ್‌ಜೀ ಅವರ ಕನಸ್ಸು. ಕೇರಳದ ಕೌಡಿಯಾರ್ ಉದ್ಯಾನವನ್ನು ಗುತ್ತಿಗೆ ತೆಗೆದುಕೊಂಡು ವಿವೇಕಾನಂದ ಕೇಂದ್ರ ಅದನ್ನು ವಿವೇಕಾನಂದ ಉದ್ಯಾನವನ್ನಾಗಿ ರೂಪಿಸುತ್ತಿದೆ. ವಿವೇಕಾನಂದರು ಮಲಗುತಿದ್ದ  ಗ್ರಾನೈಟಿನ ಮಂಚವನ್ನು ಸುಂದರಂ ಪಿಳ್ಳೈ ಅವರ ಕುಟುಂಬಸ್ಥರಿಂದ ತಂದು ಅದನ್ನು ಪ್ರೇರಣೆಯ ವಸ್ತುವನ್ನಾಗಿ ಮಾಡುವ ಹೊಣೆಯನ್ನೂ ವಹಿಸಿಕೊಂಡಿದೆ. ಇವೆಲ್ಲದರ ಹಿಂದಿನ ಚಿಂತನೆ ಪರಮೇಶ್ವರನ್‌ಜೀಯವರದ್ದು. ಇಂಥ ಪರಮೇಶ್ವನ್‌ಜೀ ಎಲ್ಲೇ ಮಾತಾಡಲು ನಿಂತರೂ ಸಭಿಕರು ವಿವೇಕಾನಂದರನ್ನು ತಮಗರಿವಿಲ್ಲದಂತೇ ಆವಾಹಿಸಿಕೊಳ್ಳುತ್ತಾರೆ. ಭಾರತವನ್ನು ತುಂಬಿಕೊಂಡು ಹೋಗುತ್ತಾರೆ. ತಾವು ಕಮ್ಯುನಿಸ್ಟರು ಎಂಬುದನ್ನೇ ಮರೆಯುತ್ತಾರೆ.
೧೯೨೭ರಲ್ಲಿ ಹುಟ್ಟಿದ ಪರಮೇಶ್ವರನ್‌ಜೀ ಇತಿಹಾಸದ ಪದವೀಧರರು. ೧೯೫೭ರಲ್ಲಿ ಭಾರತೀಯ ಜನಸಂಘಕ್ಕೆ ಸೇರ್ಪಡೆಯಾದರು. ೬೮ರಲ್ಲಿ ಕೇರಳ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದರು. ಮುಂದೆ ಅಖಿಲ ಭಾರತೀಯ ಕಾರ್ಯದರ್ಶಿಗಳಾದರು. ಜನಸಂಘದ ಅಧ್ಯಕ್ಷರೂ ಆದರು. ತುರ್ತುಪರಿಸ್ಥಿತಿಯ ನಂತರ ರಾಜಕೀಯದಿಂದ ವಿಮುಖರಾಗಿ ತವರು ನೆಲ ಕೇರಳಕ್ಕೆ ಮರಳಿದರು. ಏಕೆಂದರೆ ಮತ್ತೊಮ್ಮೆ ಯಾರೂ ಕೇರಳವನ್ನು ಹುಚ್ಚರ ಸಂತೆ ಎಂದು ಕರೆಯುವುದು ಪರಮೇಶ್ವರನ್ ಅವರಿಗೆ ಇಷ್ಟವಿರಲಿಲ್ಲ. ಕಮ್ಯುನಿಸ್ಟರು  ರಕ್ತ ಚೆಲ್ಲುವಲ್ಲೇ ಮಾಡುವ ಅನೇಕ ಕೆಲಸಗಳು ಬಾಕಿ ಉಳಿದಿದ್ದವು. ಅದರ ಫಲವೇ ಇಂದಿನ ಕೇರಳ. ಕೇರಳ ಇಂದು ದೇವರ ಸ್ವಂತ ನಾಡಾಗಿ ಉಳಿಯಲು ಪರಮೇಶ್ವರನ್ ಕೇರಳಕ್ಕೆ ಮರಳಲೇ ಬೇಕಿತ್ತು.
ಅಂಥ ಪರಮೇಶ್ವರನ್‌ಜೀ ಅವರಿಗೀಗ ೯೦. ಕೇರಳದ ಕಾರ್ಯಕರ್ತರು ತಮ್ಮ ಪ್ರೀತಿಯ ಪರಮೇಶ್ವರನ್‌ಜೀ ಅವರಿಗೆ ನವತಿ ಉತ್ಸವವನ್ನು ಆಯೋಜಿಸಿದ್ದಾರೆ. ಉತ್ಸವ ವರ್ಷಪೂರ್ತಿ ನಡೆಯಲಿದೆ. ಜೀವಂತವಿರುವ ವ್ಯಕ್ತಿಯೊಬ್ಬರಿಗೆ ಸಲ್ಲುತ್ತಿರುವ ದೊಡ್ಡ ಗೌರವವನ್ನು ಕೇರಳದ ಆರೆಸ್ಸೆಸಿಗರು ಶಿಷ್ಟಾಚಾರವನ್ನು ಮೀರಿ ನಡೆಸುತ್ತಿರುವುದು ಆ ವ್ಯಕ್ತಿಯ ಮಹತ್ವವನ್ನು ತೋರಿಸುತ್ತದೆ.  ಆ ಪ್ರೀತಿ-ಗೌರವ ಮುರುಕು ಸೇತುವೆ ಮೇಲಿಂದ ಲಕ್ಷ್ಯಕ್ಕೆ ಬಾಣ ಹೂಡಿದ ಪರಮೇಶ್ವರನ್ ಅವರಿಗಲ್ಲದೆ ಇನ್ನಾರಿಗೆ ತಾನೇ ಸಲ್ಲುತ್ತದೆ?

ಲೇಖನ: ಸಂತೋಷ್ ತಮ್ಮಯ್ಯ

  • email
  • facebook
  • twitter
  • google+
  • WhatsApp
Tags: P Parameshwaran

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
Celebrating 25 Years of Sambhashana Sandesha, the Samskrita monthly

Celebrating 25 Years of Sambhashana Sandesha, the Samskrita monthly

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS Sarakaryavah Bhaiyyaji Joshi inaugurated ‘Vishwamitra Bahal Marg’ at New Delhi

RSS Sarakaryavah Bhaiyyaji Joshi inaugurated ‘Vishwamitra Bahal Marg’ at New Delhi

August 12, 2016

Nationalism in the age of Globalisation- Seminar at Bengaluru Oct 2, 2006

October 2, 2010
Guruji terming Bharat as Hindu Rashtra was a profound Adhyatmik thought: Mukul Kanitkar

Guruji terming Bharat as Hindu Rashtra was a profound Adhyatmik thought: Mukul Kanitkar

January 5, 2020
Self-Reliance, the way forward for a New and Strong 21st Century India – PM Modi

Self-Reliance, the way forward for a New and Strong 21st Century India – PM Modi

May 13, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In