• Samvada
  • Videos
  • Categories
  • Events
  • About Us
  • Contact Us
Tuesday, March 21, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಸುದರ್ಶನ್‌ಜೀ- ಕಣ್ಮರೆಯಾದ ಬೌದ್ಧಿಕ ಕ್ಷತ್ರಿಯ

Vishwa Samvada Kendra by Vishwa Samvada Kendra
September 22, 2012
in Articles, News Digest
252
0
494
SHARES
1.4k
VIEWS
Share on FacebookShare on Twitter

ರಾಯಪುರದಲ್ಲಿ ಹುಟ್ಟಿ ಮೊದಲ ಉಸಿರನ್ನು ತನ್ನೊಳಗೆ ತುಂಬಿದ್ದ ಆ ದೇಹ, ರಾಷ್ಟ್ರವೇ ಗುರುತಿಸುವ ಮೇರು ವ್ಯಕ್ತಿತ್ವವಾಗಿ ಬೆಳೆದು, ದೇಶ-ವಿದೇಶ ಸುತ್ತಾಡಿ 82ರ ದೀರ್ಘ ಬಾಳಪಯಣದ ಬಳಿಕ, ಅದೇ ರಾಯಪುರದಲ್ಲಿ ತನ್ನ ಕೊನೆಯ ಉಸಿರನ್ನು ಬಿಟ್ಟಿತು. ಇಂಜಿನಿಯರಿಂಗ್ ಓದಿದ್ದ ಆ ಸಾಧಕ, ವಿದ್ವಾಂಸ, ಸಂಘಟಕ ‘ಇಂಜಿನಿಯರ‍್ಸ್ ಡೇ’ ದಿನವೇ ಇಹಲೋಕಕ್ಕೆ ವಿದಾಯ ಹೇಳಿದರು. ದೇಶದ ಆರ್ಥಿಕತೆ, ಕೃಷಿ, ಸಾಂಸ್ಕೃತಿಕ ವೈಶಾಲ್ಯತೆ, ಹಿಂದೂ ಜೀವನ ಶೈಲಿ ಇತ್ಯಾದಿ ವಿಷಯಗಳ ಕುರಿತು ತಳಮಟ್ಟದ ಪರಿಜ್ಞಾನ ಹೊಂದಿದ್ದ  ಜ್ಞಾನಶಿಖರವೊಂದು ಇದೀಗ ಕಣ್ಮರೆಯಾಗಿದೆ. ಮೊನ್ನೆ ಸೆಪ್ಟೆಂಬರ್ 15ರಂದು ನಿಧನರಾದ ಕೆ.ಎಸ್. ಸುದರ್ಶನ್ ಎಂಬ ಮೇರುವ್ಯಕ್ತಿಯ ಕುರಿತು ಒಂದಷ್ಟು ಮೆಲುಕುಗಳನ್ನು ಇಲ್ಲಿ ನೀಡಲಾಗಿದೆ.

KS Sudarshan, The Intellectual Warrior

ಆರೆಸ್ಸೆಸ್‌ನಂತಹ ಬೃಹತ್ ಸಂಘಟನೆಯ ಸಾರಥ್ಯ ವಹಿಸುವುದು ಸಣ್ಣಮಾತೇನಲ್ಲ. ಸರಸಂಘಚಾಲಕ ರಾಗಿದ್ದಾಗ ಸುದರ್ಶನ್‌ಜೀಯವರು ಮಾಡಿದ ಭಾಷಣಗಳೆಲ್ಲವೂ ಸ್ವಯಂಸೇವಕರಿಗೆ, ವರದಿ ಮಾಡಲು ಬಂದ ಪತ್ರಕರ್ತರನೇಕರಿಗೆ ನೆನಪಲ್ಲಿ ಉಳಿಯುವಂತದ್ದು. 2008ರಲ್ಲಿ ನಾಗಪುರದಲ್ಲಿ ಸುದರ್ಶನ್‌ಜೀ ಮಾಡಿದ ವಿಜಯದಶಮಿ ಭಾಷಣದ ಕುರಿತು ಟೈಮ್ಸ್ ಆಫ್ ಇಂಡಿಯಾ ಮುಕ್ತಕಂಠದ ಶ್ಲಾಘನೆ ವ್ಯಕ್ತಪಡಿಸಿ ಅಕ್ಟೋಬರ್ 8, 2008ರ ಸಂಚಿಕೆಯಲ್ಲಿ ಈ ರೀತಿ ಬರೆದಿತ್ತು. “ಭಾರತದ ಆರ್ಥಿಕ ವಿದ್ಯಮಾನಗಳ ಬಗ್ಗೆ ಮಾತ್ರವಲ್ಲ, ಬಂಡವಾಳಶಾಹಿ ದೈತ್ಯ ಅಮೇರಿಕಾದ ಅರ್ಥನೀತಿಯ ಆಳವಾದ ವಿಶ್ಲೇಷಣೆಯೊಂದಿಗೆ ಆರೆಸ್ಸೆಸ್ ಮುಖ್ಯಸ್ಥ ಸುದರ್ಶನ್ ಅವರು ಮಾಡಿದ ವಿಜಯದಶಮಿ ಭಾಷಣ ಕೇಳಿ ಸಭಿಕರು ಬೆರಗಾದರು. ಅಮೇರಿಕಾ ತನ್ನ ಆರ್ಥಿಕ ಕುಸಿತವನ್ನು ತಡೆದುಕೊಳ್ಳಲು ಪ್ರತಿನಿತ್ಯ ತರಿಸಿಕೊಳ್ಳಬೇಕಾಗಿರುವ ೧೦೦೦ ಕೋಟಿ ರೂ.ಗಳ ಮೊತ್ತದ ವಿಷಯ ಯಾರಿಗೂ ತಿಳಿದಿರಲಿಲ್ಲ!” ಆರೆಸ್ಸೆಸ್ ಕುರಿತು ಕೆಲವೊಮ್ಮೆ ವಿಚಿತ್ರವಾಗಿ – ಮನಬಂದಂತೆ ಬೈದು ಬರೆಯುವ ಪತ್ರಿಕೆಗಳೂ ಸುದರ್ಶನ್‌ಜೀಯವರ ಪಾಂಡಿತ್ಯ, ತರ್ಕಪೂರ್ಣವಾದ ವಿಷಯ ಮಂಡನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದವು.

ವಿಪುಲವಾದ ಮಾಹಿತಿ ಸಂಗ್ರಹ, ಯಥೇಚ್ಛವಾದ ವಾಗ್ಝರಿ, ಸರಳ ಉದಾಹರಣೆಗಳು, ತಿಳಿಯಾದ ಹಾಸ್ಯಪ್ರಜ್ಞೆಗಳಿಂದ ಕೂಡಿದ ಉಪನ್ಯಾಸಗಳ ಮೂಲಕ ಅನೇಕ ರಾಷ್ಟ್ರೀಯ ವಿಚಾರಗಳನ್ನು ಸಮರ್ಪಕವಾಗಿ ಕೇಳುಗನ ಮುಂದಿಡುತ್ತಿದ್ದರು. ಸ್ವದೇಶೀ ಜೀವನ ಶೈಲಿ ಹಾಗೂ ಹಿಂದೂ ವಿಚಾರಗಳ ಕುರಿತು ಅತ್ಯಂತ ಪ್ರಬಲವಾಗಿ ವಿಚಾರ ಮಂಡನೆ ಮಾಡುತ್ತಿದ್ದರು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಂಧುಗಳಲ್ಲೂ ರಾಷ್ಟ್ರೀಯ ಭಾವ ಬೆಳೆಸಲು ಪ್ರಯತ್ನಶೀಲರಾದವರು. 2000ನೇ ಇಸವಿಯಲ್ಲಿ ಸರಸಂಘಚಾಲಕರಾದ ತರುವಾಯ ಉಡುಪಿಗೆ ಭೇಟಿಯಿತ್ತಾಗ ಮಂಗಳೂರು ವಿಭಾಗದ ಗಣವೇಷಧಾರಿ ಸ್ವಯಂಸೇವಕರ ಬೃಹತ್ ಸಮಾವೇಶದಲ್ಲಿ ಸುದರ್ಶನ್‌ಜೀಯದ್ದು ಮುಖ್ಯಭಾಷಣ. ಮಂಗಳೂರು ಕ್ರೈಸ್ತ ಸೆಮಿನರಿಯ ಪ್ರಾಂಶುಪಾಲರಾಗಿದ್ದ ಜಾನ್ ಫೆರ್ನಾಂಡಿಸ್ ಅಧ್ಯಕ್ಷರಾಗಿ ಆಗಮಿಸಿದ್ದರು. ಸುದರ್ಶನ್‌ಜೀಯವರು ‘ಚರ್ಚ್‌ಗಳ ಭಾರತೀಕರಣರಾಗಬೇಕು’ ಎಂದು ಹೇಳಿದ್ದರ ಕುರಿತು ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು ಜಾನ್ ಫೆರ್ನಾಂಡಿಸ್. 2010ರಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ಮುಸ್ಲಿಂ ರಾಷ್ಟ್ರೀಯ ಮಂಚ್‌ನ ಕಾರ‍್ಯಕ್ರಮವೊಂದರಲ್ಲಿ ‘ಇಸ್ಲಾಂ ಸಾಹಿತ್ಯಗಳು ಮತ್ತು ರಾಷ್ಟ್ರೀಯತೆ’ ಕುರಿತು ಉಪನ್ಯಾಸ ನೀಡಿದ್ದರು. ಇಸ್ಲಾಂ ಧಾರ್ಮಿಕ ಗ್ರಂಥಗಳಲ್ಲಿ ರಾಷ್ಟ್ರೀಯತೆಯ ಉಲ್ಲೇಖವಾಗಿರುವ ಬಗ್ಗೆ ಸುದರ್ಶನ್‌ಜೀ ಮಾಡಿದ ಭಾಷಣ ಕೇಳಿ ನೆರೆದಿದ್ದ ಮುಸ್ಲಿಂ ವಿದ್ವಾಂಸರು ನಿಬ್ಬೆರಗಾಗಿದ್ದರು. ಕಾರ‍್ಯಕ್ರಮ ಮುಗಿದ ಮೇಲೆ ಸುದರ್ಶನ್‌ಜೀಯವರ ಬಳಿ ಹೋಗಿ ಅವರ ಪಾಂಡಿತ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

‘ಸುದರ್ಶನ್‌ಜೀ’ ಎಂದಾಕ್ಷಣ ಸ್ವಯಂಸೇವಕರಿಗೆ ನೆನಪಾಗುವುದೇ ಅವರ ಸರಳತೆ. ಝಡ್ ಶ್ರೇಣಿಯ ಭದ್ರತೆ ಹೊಂದಿದ್ದರೂ, ದಿನಪೂರ್ತಿ ಬ್ಯುಸಿ ಶ್ಯೆಡ್ಯೂಲ್ ಇದ್ದರೂ, ಆರೆಸ್ಸೆಸ್‌ನ ದೈನಂದಿನ ಶಾಖೆಗೆ ಎಂದೂ ತಪ್ಪಿದವರಲ್ಲ. ಇತ್ತೀಚೆಗೆ ಆಗಸ್ಟ್ ೩ರಂದು ಬೆಳಗ್ಗೆ ಮೈಸೂರಿನಲ್ಲಿ ವಾಯು ವಿಹಾರಕ್ಕೆ ತೆರಳಿ ಒಂದಷ್ಟು ಸಮಯ ಕಣ್ಮರೆಯಾಗಿ ಆತಂಕ ಮೂಡಿದ್ದ ಅದೇ ದಿನ ಸಂಜೆ ಮೈಸೂರಿನ ಸಂಜೆ ಶಾಖೆಯೊಂದಕ್ಕೆ ತೆರಳಿ ಅಲ್ಲಿ ಮಕ್ಕಳಿಗೆ ಧ್ವಜಕ್ಕೆ ಪ್ರಣಾಮ್ (ವಂದನೆ) ಸಲ್ಲಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಯಾವುದೇ ಒತ್ತಡವಿಲ್ಲದೆ, ನಿರಾಳವಾಗಿ ಕಲಿಸಿದ್ದರು.

ಕರ್ನಾಟಕವೇ ಒಂದರ್ಥದಲ್ಲಿ ಅವರ ತವರು. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕುಪ್ಪಳ್ಳಿಯವರಾದ ಸೀತಾರಾಮಯ್ಯನವರು ಸುದರ್ಶನ್‌ರ ತಂದೆ. ಆದರೆ ರಾಯಪುರಕ್ಕೆ (ಆಗ ಮಧ್ಯಪ್ರದೇಶದ ಭಾಗ, ಈಗ ಛತ್ತೀಸ್‌ಗಢಕ್ಕೆ ಸೇರಿದೆ) ತೆರಳಿದ ಮೇಲೆ, ಅಲ್ಲೇ ಸುದರ್ಶನ್‌ಜೀ ಜನಿಸಿದ್ದರು. ಆದರೂ ಇಂಜಿನಿಯರಿಂಗ್ ಮುಗಿಸಿ, 1954ರಲ್ಲಿ ಆರೆಸ್ಸೆಸ್ ಪ್ರಚಾರಕರಾದ ಮೇಲೆ ಕರ್ನಾಟಕಕ್ಕೆ ಬಂದಾಗಲೆಲ್ಲ ಒಂದಷ್ಟು ಕನ್ನಡ ಮಾತನಾಡುತ್ತಿದ್ದರು. ಮಂಗಳೂರು – ಬೆಂಗಳೂರಿನಲ್ಲಿ ನಡೆದ ಸಾಮರಸ್ಯ ಸಂಗಮ, ಸಮರಸತಾ ಸಂಗಮ ಮೊದಲಾದ ದೊಡ್ಡ ಶಿಬಿರಗಳು ಸೇರಿದಂತೆ ನೂರಾರು ಸಭೆ – ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಕನ್ನಡ ನೆಲದಲ್ಲಿ ಓಡಾಡಿದವರು. ಉತ್ತರ ಕರ್ನಾಟಕದಲ್ಲಿ ನೆರೆಸಂತ್ರಸ್ತರಿಗೆ ಸೇವಾಭಾರತಿ ಕಟ್ಟಿಕೊಟ್ಟಿದ್ದ ಮನೆಗಳ ಹಸ್ತಾಂತರ ಮಾಡಿದ್ದರು.

ದೇಶದ ಆರ್ಥಿಕತೆ, ಕೃಷಿ, ಸಾಂಸ್ಕೃತಿಕ ವೈಶಾಲ್ಯತೆ, ಹಿಂದೂ ಜೀವನ ಶೈಲಿ ಇತ್ಯಾದಿ ವಿಷಯಗಳ ಕುರಿತು ತಳಮಟ್ಟದ ಪರಿeನ ಹೊಂದಿದ್ದ eನಶಿಖರವೊಂದು ಇದೀಗ ಕಣ್ಮರೆಯಾಗಿದೆ.

ಬಾಳಹಾದಿಯ ಮೈಲಿಗಲ್ಲುಗಳು

  • 1931, ಜೂನ್ 18 : ಮಧ್ಯಪ್ರದೇಶದ ಭಾಗವಾಗಿದ್ದ ರಾಯ್‌ಪುರ (ಈಗ ಚತ್ತೀಸ್‌ಗಢಕ್ಕೆ ಸೇರಿದೆ)ದಲ್ಲಿ ಸುದರ್ಶನ್‌ಜೀ ಜನನ. ತಂದೆ ಸೀತಾರಾಮಯ್ಯ ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕುಪ್ಪಳ್ಳಿಯವರು. ಸರಕಾರೀ ಸೇವೆಯಲ್ಲಿದ್ದು ರಾಯಪುರಕ್ಕೆ ವರ್ಗವಾಗಿದ್ದರು. ಸುದರ್ಶನ್‌ಜೀಗೆ ಇಬ್ಬರು ತಮ್ಮಂದಿರು, ಒಬ್ಬಳು ತಂಗಿ.
  • 1940:     9ನೇ ವಯಸ್ಸು, ಆರೆಸ್ಸೆಸ್ ಸಂಪರ್ಕಕ್ಕೆ ಬಾಲಕ ಸುದರ್ಶನ್.
  • 1954 :     ಜಬಲ್‌ಪುರದ ಪ್ರತಿಷ್ಠಿತ ಸಾಗರ್ ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕದೊಂದಿಗೆ ದೂರಸಂಪರ್ಕ ಇಂಜಿನಿಯರಿಂಗ್ ಪದವಿ.
  • 1954:     ರಾಷ್ಟ್ರೀಯ ವಿಚಾರಗಳತ್ತ ತೀವ್ರ ಆಸಕ್ತಿ, ಸಾಮಾಜಿಕ ಕಾರ‍್ಯಕ್ಕೋಸ್ಕರ ತುಡಿದ ಯುವ ಮನಸ್ಸು, ಆರೆಸ್ಸೆಸ್ ಪ್ರಚಾರಕರಾಗಿ ಹೊರಟ 23ರ ತರುಣ ಸುದರ್ಶನ್, ರಾಯಪುರ ಜಿಲ್ಲಾ ಪ್ರಚಾರಕ್ ಜವಾಬ್ದಾರಿ, ಜೀವನಪೂರ್ತಿ ಅವಿವಾಹಿತರಾಗಿರುವ ಸಂಕಲ್ಪ.
  • 1964:     ಪ್ರಚಾರಕ್ ಆದ ಹತ್ತೇ ವರ್ಷಗಳಲ್ಲಿ ಆರೆಸ್ಸೆಸ್ ಸಂಘಟನೆಯ ದೃಷ್ಟಿಯಿಂದ ಅತಿಪ್ರಮುಖವಾದ ‘ಪ್ರಾಂತ ಪ್ರಚಾರಕ್’ ಜವಾಬ್ದಾರಿ, ಮಧ್ಯಭಾರತದಲ್ಲಿ ಆರೆಸ್ಸೆಸ್ ಬೇರುಗಳನ್ನು ಗಟ್ಟಿಗೊಳಿಸಿದ ಸುದರ್ಶನ್.
  • 1969 :     38ರ ಹರೆಯದಲ್ಲಿ ಆರೆಸ್ಸೆಸ್‌ನ ರಾಷ್ಟ್ರೀಯ ಜವಾಬ್ದಾರಿ, ಅಖಿಲ ಭಾರತೀಯ ಶಾರೀರಿಕ ಪ್ರಮುಖ್ ಆಗಿ ದೇಶಾದ್ಯಂತ ಪ್ರವಾಸ.
  • 1975 :     ತುರ್ತು ಪರಿಸ್ಥಿತಿ ವೇಳೆ ಇಂದೋರ್‌ನ ಸೆರೆಮನೆಯಲ್ಲಿ ಜೈಲುವಾಸ.
  • 1977 :     ಅಸ್ಸಾಂ, ಬಂಗಾಳ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಆರೆಸ್ಸೆಸ್ ಕ್ಷೇತ್ರ ಪ್ರಚಾರಕ್ ಜವಾಬ್ದಾರಿ.
  • 1979:     ವಿದ್ವಾಂಸರೂ, ಆಳವಾದ ಅಧ್ಯಯನಶೀಲರೂ, ಉತ್ತಮ ವಾಗ್ಮಿಯೂ ಆಗಿದ್ದ ಸುದರ್ಶನ್‌ರಿಗೆ ಅಖಿಲ ಭಾರತ ಬೌದ್ಧಿಕ್ ಪ್ರಮುಖ್ ಜವಾಬ್ದಾರಿ.
  • 1990:     ಆರೆಸ್ಸೆಸ್‌ನ ೩ನೇ ಅತಿದೊಡ್ಡ ಸ್ಥಾನಕ್ಕೆ ಸುದರ್ಶನ್, ಸಹ ಸರಕಾರ‍್ಯವಾಹರಾಗಿ ನಿಯುಕ್ತಿ.
  • 2000,      ಮಾರ್ಚ್ 10 : ಆರೆಸ್ಸೆಸ್‌ನ ಪರಮೋಚ್ಚ ಪದವಿ ‘ಸರಸಂಘಚಾಲಕ್’ ಆಗಿ ಸರ್ವಾನುಮತದ ಆಯ್ಕೆ, ಆರೆಸ್ಸೆಸ್‌ನ ೫ನೇ ಹಾಗೂ ಆಯ್ಕೆಯಾದ ಕನ್ನಡ ಮೂಲದ ಮೊದಲ ಸರಸಂಘಚಾಲಕ್.
  • 2000, ಅಕ್ಟೋಬರ್ : ಆರೆಸ್ಸೆಸ್‌ಗೆ 75ತುಂಬಿದ ಸಂಭ್ರಮ, ಐತಿಹಾಸಿಕ ‘ರಾಷ್ಟ್ರ ಜಾಗರಣ ಅಭಿಯಾನ’, ದೇಶಾದ್ಯಂತ ಮನೆಬಾಗಿಲಿಗೆ ತಲುಪಿದ ಆರೆಸ್ಸೆಸ್.
  • 2006:     ಆರೆಸ್ಸೆಸ್ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರ್ ಜನ್ಮಶತಾಬ್ದಿ ವರ್ಷ, ದೇಶಾದ್ಯಂತ ವೈವಿಧ್ಯಮಯ ಸಾಮಾಜಿಕ ಚಟುವಟಿಕೆಗಳಿಗೆ ಚಾಲನೆ ನೀಡಿದ ಸುದರ್ಶನ್‌ಜೀ.
  • 2009,      ಮಾರ್ಚ್ : ಸರಸಂಘಚಾಲಕರಾಗಿ ನಿವೃತ್ತಿ, ಮಧ್ಯಪ್ರದೇಶದ ಭೋಪಾಲ್ ಕೇಂದ್ರವಾಗಿರಿಸಿ ವಿಶ್ರಾಂತ ಜೀವನ; ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ. ಆರೆಸ್ಸೆಸ್ ಅಖಿಲ ಭಾರತೀಯ ಕಾರ‍್ಯಕಾರಿಣಿ ಸಭೆಯ ಸದಸ್ಯರಾಗಿ ಪ್ರಮುಖ ಬೈಠಕ್‌ಗಳಲ್ಲಿ ಪಾಲ್ಗೊಳ್ಳುವಿಕೆ.
  • 2012,      ಸೆಪ್ಟೆಂಬರ್ 15 : 82 ವರ್ಷ ಹಿಂದೆ ಹುಟ್ಟಿದ್ದ ಅದೇ ರಾಯ್‌ಪುರದಲ್ಲಿ ಬೆಳಗ್ಗೆ ವಾಕಿಂಗ್, ನಂತರ ಪ್ರಾಣಾಯಾಮ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ನಿಧನ.
Sudarshan ji Funeral at Nagpur-September-16-2012 , attended by Mohan Bhagwat, LK Advani and several other leaders.

ಹೀಗೆನ್ನುತ್ತಿದ್ದರು… ಸುದರ್ಶನ್‌ಜೀ

  •   ಪಶ್ಚಿಮದ ದೃಷ್ಟಿಯು ಜಗತ್ತನ್ನು ಒಂದು ಮಾರುಕಟ್ಟೆಯನ್ನಾಗಿ, ಮತ್ತು ಮನುಷ್ಯನನ್ನು ಒಂಟಿ ವ್ಯಕ್ತಿಯೆಂಬಂತೆ ನೋಡುತ್ತದೆ. ಅವರು ಕುಟುಂಬ, ಗ್ರಾಮ, ಸಮಾಜ ಅಥವಾ ವ್ಯಾಪಾರಿ ಸಮುದಾಯ ಇತ್ಯಾದಿ ಯಾವುದೇ ಸಂಬಂಧಗಳನ್ನು ಬೆಳೆಸಿಕೊಳ್ಳುವುದಿಲ್ಲ. ಅವರ ಘೋಷಣೆ ಪ್ರತ್ಯೇಕ ವ್ಯಕ್ತಿ ಆಧಾರಿತ ಬೆಳವಣಿಗೆಯದಾದರೆ, ನಮ್ಮದು ಕುಟುಂಬ ಮತ್ತು ಜನಾಂಗ ಆಧಾರಿತ ವಿಕಾಸ. ಮಾರುಕಟ್ಟೆಯ ವಿದ್ಯಮಾನದಲ್ಲಿ ಹಣವೇ ಸರ್ವಸ್ವ. ಆದರೆ ಸಮುದಾಯದಲ್ಲಿ ಮಾನಸಿಕ ಪಾರಸ್ಪರಿಕತೆಯಿರುತ್ತದೆ. ಹಣಕ್ಕೆ ಹೆಚ್ಚು ಮಹತ್ವ ನೀಡಿದಾಗ ವ್ಯಕ್ತಿ ಅಲಕ್ಷಿತನಾಗುತ್ತಾನೆ. ಆದರೆ ಭಾವನಾ ಪ್ರಧಾನ ಸಂಬಂಧಗಳು ಹೆಚ್ಚಿದಾಗ ನಾವು ಬೆಳೆಯುವುದೂ ಹೆಚ್ಚುತ್ತದೆ. ಪಶ್ಚಿಮದ ಮತ್ತು ಭಾರತೀಯ ಮಾದರಿಗಳ ನಡುವಿನ ಅಂತರವನ್ನು ನಾವು ತಿಳಿದಿರುವುದು ಉಚಿತ.
  • ಅಧಿಕಾರಕ್ಕೇರಿದವನಿಗೆ ಅಧಿಕಾರದ ಮದ ಇರುತ್ತದೆ. ಇದರಿಂದಾಗಿ ಆತ ಭ್ರಷ್ಟನಾಗುತ್ತಾನೆ. ಸರಕಾರದಲ್ಲಿ ಸ್ಥಾಯಿ ಸೇವೆಗಳಿರುವ ಆಡಳಿತ ಯಂತ್ರದಲ್ಲಿ ಪ್ರವೇಶ ಪಡೆದರೆ ೩೦ ವರ್ಷ ಕೆಲಸ ಮಾಡುವ ಅವಕಾಶ ಲಭಿಸುತ್ತದೆ. ಇದರಿಂದ ವ್ಯಕ್ತಿ ಸ್ವಾರ್ಥಿಯಾಗುವ ಸಂಭವವಿದೆ. ಈ ಪರಿಸ್ಥಿತಿಯನ್ನು ಪ್ರಜಾ ಪ್ರತಿನಿಧಿಗಳು ನಿಯಂತ್ರಿಸಬೇಕು. ತುಂಬಾ ಸಮಯದವರೆಗೆ ಒಬ್ಬರೆ ಅಧಿಕಾರದಲ್ಲಿ ಉಳಿದರೆ ಅವರೂ ಆಡಳಿತ ಯಂತ್ರದವರೊಂದಿಗೆ ಸೇರಿ ಭ್ರಷ್ಟರಾಗುವ ಸಾಧ್ಯತೆ ಇದೆ. ಕಳೆದ ೫೩ ವರ್ಷಗಳ ಪೈಕಿ ೪೩ ವರ್ಷಗಳ ಕಾಲ ಒಂದೇ ಪಕ್ಷ ಆಡಳಿತ ನಡೆಸಿದೆ (೨೦೦೧ರಲ್ಲಿ ಹೇಳಿದ ಮಾತು). ಇದರಿಂದಾಗಿ ಭ್ರಷ್ಟಾಚಾರ ಅತ್ಯಂತ ಕೆಳಹಂತದವರೆಗೆ ಮುಟ್ಟಿದೆ. ಈಗಿರುವ ಸರಕಾರವೂ ಹಲವು ಪPಗಳಿಂದ ಕೂಡಿದ ಸಮ್ಮಿಶ್ರ ಸರ್ಕಾರ. ಅವರಲ್ಲೂ ಎಲ್ಲರೂ ಪರಿಶುದ್ಧರಲ್ಲ. ಸಿಕ್ಕಿರುವ ಅವಕಾಶದ ಸಂಪೂರ್ಣ ಲಾಭ ಪಡೆಯುವ ಆಸೆ ಅವರಲ್ಲಿ ಅನೇಕರಿಗೆ ಇರುವ ಸಾಧ್ಯತೆ ಇದೆ. ಭಾ.ಜ.ಪ.ದ ಕೆಲವು ವ್ಯಕ್ತಿಗಳಲ್ಲೂ ಇಂತಹ ಆಸೆ ಆಕಾಂಕ್ಷೆಗಳಿರುವ ಸಾಧ್ಯತೆ ಇದೆ. ಭ್ರಷ್ಟಾಚಾರಕ್ಕೆ ಅವಕಾಶ ಸಿಗುವುದು ಅಸಹಾಯಕತೆಯಿಂದ. ಅಸಹಾಯಕ ಪರಿಸ್ಥಿತಿಗೆ ಕಾರಣವಾಗುವುದು ನಮ್ಮ ಆರ್ಥಿಕ ನೀತಿ. ಇಂದಿಗೂ ಬ್ರಿಟೀಷರ ಆರ್ಥಿಕ ನೀತಿಯನ್ನೇ ನಾವು ಅನುಸರಿಸುತ್ತಿದ್ದೇವೆ. ಭ್ರಷ್ಟಾಚಾರವನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಜನಜಾಗೃತಿ. ಭ್ರಷ್ಟಾಚಾರಿಗಳ ವಿರುದ್ಧ ಇಡೀ ಸಮಾಜ ಎದ್ದು ನಿಲ್ಲುವಂತೆ ಮಾಡಬೇಕು. ಕೇವಲ ಸಂಘದ ಕಾರ್ಯಕರ್ತರಿಂದ ಮಾತ್ರ ಭ್ರಷ್ಟಾಚಾರವನ್ನು ನಿಲ್ಲಿಸುವ ಕೆಲಸ ಆಗಲಾರದು. ಸಮಾಜದಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕೆಲಸವನ್ನು ನಾವು ಮಾಡೋಣ.
  • ರಾಜನೀತಿಯೂ ಧರ್ಮದ ಆಧಾರದಿಂದಲೇ ಜರಗಬೇಕು. ಏಕೆ ? ಧರ್ಮವು ಎಲ್ಲ ವ್ಯವಸ್ಥೆಗಳ ಮೂಲವಾದ್ದರಿಂದ. ರಾಜಧರ್ಮ-ರಾಜನ ಕರ್ತವ್ಯ, ಧರ್ಮದೊಳಗೇ ಬರುತ್ತದೆ. ಆದರೆ ರಾಜಕೀಯವು ಉಪಾಸನಾ ಪದ್ಧತಿಯೊಡನೆ ಜತೆಗೂಡಿರಬಾರದು, ಎಂದು ಮಾತ್ರ ನಾವು ಹೇಳುತ್ತೇವೆ. ಮತದೊಡನೆ ರಾಜಕೀಯ ಸಂಬಂಧಿಸಿರಬಾರದು, ಧರ್ಮವೇ ರಾಜನೀತಿಯ ಆಧಾರವಾಗಬೇಕು ಎಂದೇ ನಾವು ರಾಜ್ಯವು ಧರ್ಮ ಸಾಪೇP, ಸಂಪ್ರದಾಯ ನಿರಪೇP ಆಗಿರಬೇಕೆಂದು ಹೇಳುತ್ತೇವೆ. ಏಕೆಂದರೆ ಧರ್ಮವಿಲ್ಲದೇ ಪ್ರಪಂಚದಲ್ಲಿ ಯಾವುದೂ ನಡೆಯದು. ಧರ್ಮದ ಆಧಾರದ ಮೇಲೆಯೇ ಇಡೀ ವಿಶ್ವವೂ ಚಲಿಸುತ್ತದೆ.

ಯಾರೂ ಅಲ್ಪಸಂಖ್ಯಾತರಲ್ಲ…

ರಾಷ್ಟ್ರೀಯ ಸಮಾಜದಲ್ಲಿ ಒಡಕು ಮೂಡಿಸಲು ಅಲ್ಪಸಂಖ್ಯಾತ, ಬಹುಸಂಖ್ಯಾತ ಇತ್ಯಾದಿ ಹಲವಾರು ಭ್ರಮೆಗಳನ್ನು ಬ್ರಿಟಿಷರು ಸೃಷ್ಟಿಸಿದರು. ನಮ್ಮ ನಾಯಕರು ಸ್ವಂತದ ಬುದ್ಧಿಯನ್ನು ಉಪಯೋಗಿಸದೇ ಈ ಎಲ್ಲಾ ಭ್ರಾಂತಿಗಳನ್ನು ಒಪ್ಪಿಕೊಂಡಿದ್ದರಿಂದ ಅಲ್ಪಸಂಖ್ಯಾತರ ಹಕ್ಕುಗಳು ಎಂಬ ಹೊಸ ಘರ್ಷಣೆ ಆರಂಭವಾಯಿತು. ಯಾರನ್ನು ಅಲ್ಪಸಂಖ್ಯಾತರು ಎಂದು ಕರೆಯಬೇಕು? ಎಂಬ ಮೂಲಭೂತ ಪ್ರಶ್ನೆಯನ್ನು ಕುರಿತು ನಾವು ಯೋಚಿಸೋಣ. ವಾಸ್ತವವಾಗಿ ಯಾರು ತಮ್ಮ ದೇಶ ಬಿಟ್ಟು ಬೇರೆ ದೇಶಕ್ಕೆ ವಲಸೆ ಬಂದು ಅಲ್ಲಿ ನೆಲೆಸುತ್ತಾರೋ ಅವರು ಅಲ್ಪಸಂಖ್ಯಾತರು. ಈ ಅರ್ಥದಲ್ಲಿ ಯಹೂದಿಗಳು ಮತ್ತು ಪಾರ್ಸಿಗಳು ಮಾತ್ರ ಇಲ್ಲಿ ಅಲ್ಪಸಂಖ್ಯಾತರ ಗುಂಪಿಗೆ ಸೇರುತ್ತಾರೆ. ಆದರೆ ಅವರು ತಮ್ಮನ್ನು ತಾವು ಅಲ್ಪಸಂಖ್ಯಾತರೆನ್ನುವುದನ್ನು ತಿರಸ್ಕರಿಸಿದರು ಮತ್ತು ಇಲ್ಲಿನ ರಾಷ್ಟ್ರೀಯ ಮುಖ್ಯಪ್ರವಾಹದಲ್ಲಿ ತಮ್ಮನ್ನು ಜೋಡಿಸಿಕೊಂಡರು. ಭಾರತದಲ್ಲಿರುವ ೯೯% ಮುಸಲ್ಮಾನರು ಮತ್ತು ೯೯.೯%ರಷ್ಟು ಕ್ರೈಸ್ತರು ಹೊರಗಿನಿಂದ ಬಂದವರೇನಲ್ಲ. ಅವರು ಇಲ್ಲಿನವರೇ. ಕೆಲವು ಪೀಳಿಗೆಗಳ ಹಿಂದೆ ಅವರು ತಮ್ಮ ಮತವನ್ನು ಬದಲಾಯಿಸಿರಬಹುದು. ಆದರೆ ಅದರಿಂದ ಅವರು ಅಲ್ಪಸಂಖ್ಯಾತರಾಗಲು ಹೇಗೆ ಸಾಧ್ಯ?

ಒಂದು ವೇಳೆ ನಾವು, ಅಲ್ಪಸಂಖ್ಯಾತರು ಯಾರು? ಎಂಬ ಪ್ರಶ್ನೆಗೆ ಮತವನ್ನೇ ಆಧಾರವಾಗಿಟ್ಟುಕೊಂಡಲ್ಲಿ ಆಗ ಬಹುಸಂಖ್ಯಾತರಾರು? ಎಂಬ ಪ್ರಶ್ನೆಯೂ ಏಳುತ್ತದೆ. ಸಹಜವಾಗಿ ‘ಹಿಂದು’ಗಳು ಬಹುಸಂಖ್ಯಾತರು ಎಂದು ಯಾರಾದರೂ ಹೇಳಬಹುದು. ಆದರೆ ‘ಹಿಂದು’ ಎನ್ನುವುದು ಯಾವುದೇ ಮತವನ್ನು ಸೂಚಿಸುವುದಿಲ್ಲ; ಬದಲಾಗಿ ಅದೊಂದು ಹಲವು ಮತ ಪಂಗಡಗಳನ್ನು ಒಳಗೊಂಡ ಒಂದು ಜೀವನ ಪದ್ಧತಿ ಎಂದು ಸರ್ವೋಚ್ಚ ನ್ಯಾಯಾಲಯ ಕನಿಷ್ಠ ಮೂರು ಬಾರಿ ತೀರ್ಪುಗಳನ್ನು ನೀಡಿದೆ. ಒಂದೊಮ್ಮೆ ಮತವೇ ಅಲ್ಪಸಂಖ್ಯಾತರನ್ನು ನಿರ್ಧರಿಸುವ ಆಧಾರವಾದಲ್ಲಿ ಭಾರತದಲ್ಲಿರುವ ಎಲ್ಲ ಮತ ಪರಂಪರೆಗಳು ಅಲ್ಪಸಂಖ್ಯಾತ ಎಂದು ಘೋಷಿಸಬೇಕಾಗುತ್ತದೆ. ಅದಕ್ಕಾಗಿ ನಾವೆಲ್ಲ ಸೇರಿ ಒಂದು ರಾಷ್ಟ್ರೀಯ ಸಮಾಜವಾಗಿದ್ದೇವೆ ಮತ್ತು ನಾವೆಲ್ಲಾ ಸಮಾನ ಮಾತೃಭೂಮಿ, ಸಮಾನ ಸಂಸ್ಕೃತಿ ಮತ್ತು ಸಮಾನ ಪೂರ್ವಜರನ್ನು ಹೊಂದಿದ್ದವರು ಎಂಬುದನ್ನು ದೃಢವಾಗಿ ಘೋಷಿಸೋಣ. ಸಂಘವು ‘ಹಿಂದು ರಾಷ್ಟ್ರ’ವೆಂದು ಕರೆಯುವುದು ಇದನ್ನೇ. ನಾವು ಬೇರೆ ಬೇರೆ ಮತ ಪಂಥಗಳನ್ನು ಅನುಸರಿಸುತ್ತಿರಬಹುದು. ಆದರೂ ರಾಷ್ಟ್ರೀಯತೆಯ ವಿಷಯದಲ್ಲಿ ನಾವೆಲ್ಲ ಹಿಂದುಗಳೇ. ‘ವಿವಿಧತೆಯಲ್ಲಿ ಏಕತೆ’ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿರುವಂತಹ ಹಿಂದು ವಿಶ್ವದೃಷ್ಟಿಯು ಸೃಷ್ಟಿಯಲ್ಲಿನ ವೈವಿಧ್ಯವನ್ನು ಗುರುತಿಸುವುದರೊಂದಿಗೆ ಎಲ್ಲ ರೀತಿಯ ವಿವಿಧತೆಗಳನ್ನು ಸಮಾವೇಶಗೊಳಿಸಿ ಪ್ರಪಂಚದಲ್ಲೆ ಒಂದು ಅನುಪಮವಾದ ಜೀವನ ಪದ್ಧತಿಯಾಗಿದೆ. ಹಿಂದು ರಾಷ್ಟ್ರದಲ್ಲಿ ಸ್ವಂತಿಕೆಯನ್ನು ಕಳೆದುಕೊಳ್ಳುವ ಭೀತಿಗೆ ಯಾರೂ ಒಳಪಡಬೇಕಾಗಿಲ್ಲ. ಆದರೆ ಎಲ್ಲಾ ಮತಗಳನ್ನು ಸಮಾನ ಗೌರವದಿಂದ ಕಾಣುವಂತಹ ಉದಾರ ದೃಷ್ಟಿಯನ್ನು ಮೈಗೂಡಿಸಿಕೊಂಡು ಎಲ್ಲಾ ಮತಗಳು ಸತ್ಯವೆಂಬುದನ್ನು ಒಪ್ಪಬೇಕಾದುದು ಮಾತ್ರ ಇಲ್ಲಿನ ಏಕಮಾತ್ರ ಅನಿವಾರ್ಯತೆಯಾಗಿದೆ.

ಮರೆಯಲಾಗದ ಮಾತುಗಳು…

  •  ‘ಯಾರ ಅಂತಃಕರಣದಲ್ಲಿ ಕಶ್ಮಲ ತುಂಬಿದೆಯೋ ಅವರಿಗೆ ಹೊರಗಿನದೆಲ್ಲಾ ಅಪವಿತ್ರವಾಗಿಯೇ ಕಾಣುತ್ತದೆ.’
  • ‘ಸ್ನಾನದಿಂದ ಹೊರ ಚರ್ಮದ ಕೊಳೆ ಹೋಗಬಹುದಷ್ಟೆ. ಆದರೆ ಮನಸ್ಸಿನಲ್ಲಿ ತುಂಬಿರುವ ಅಹಂಕಾರದ ಕೊಳೆ ಹೋಗಬೇಕೆಂದರೆ ಸಮಾಜದ ಕೊನೆಯ ವ್ಯಕ್ತಿಗಳ ಜೊತೆ ನಮ್ಮನ್ನು ಜೋಡಿಸಿಕೊಳ್ಳಬೇಕಾಗುತ್ತದೆ.’
  •  ‘ಸ್ವದೇಶಿ ವಿಕಾಸ ಪಥ ಎಂದರೆ ಅದು ವಿಕೇಂದ್ರಿತ, ಗ್ರಾಮಾಧಾರಿತ, ಕಡಿಮೆ ಬಂಡವಾಳ ಸಾಕು, ಉದ್ಯೋಗ ಹೆಚ್ಚಳ, ಪರಿಸರ ಸ್ನೇಹಿ ಯೋಜನೆಯಾಗಿದೆ.’
  •  ‘ಕ್ರಿಕೆಟ್ಟೇನೋ ಸರಿ, ಆದರೆ ನಮ್ಮ ದೇಶದ ಆಟಗಳಾದ ಕಬ್ಬಡ್ಡಿ, ಕೊಕ್ಕೋ, ಆಟ್ಯಾ-ಪಾಟ್ಯಾ, ಚಿನ್ನಿದಾಂಡು ಈ ಆಟಗಳಿಗೆ ಎಷ್ಟು ಪ್ರೋತ್ಸಾಹ ಕೊಟ್ಟಿದ್ದೀರಿ?’ (ಕೇಂದ್ರ ಕ್ರೀಡಾ ಸಚಿವರಿಗೆ ಸುದರ್ಶನ್‌ಜೀ ಪ್ರಶ್ನೆ.)
  • ರಾಷ್ಟ್ರವನ್ನು ಆಕ್ರಮಣಕಾರರಿಂದ ರಕ್ಷಿಸಬೇಕು. ಇದಕ್ಕಾಗಿ ಆಧುನಿಕ ಶಸ್ತ್ರಾಸ್ತ್ರಗಳಿಂದ ದೇಶವನ್ನು ಸಜ್ಜುಗೊಳಿಸಬೇಕು. ಈ ವಿಷಯ ನಮ್ಮ ಗಮನಕ್ಕೆ ಬರಲೇ ಇಲ್ಲ. ಬದಲಾಗಿ ಅಹಿಂಸೆಗೆ ಅತಿಯಾದ ಒತ್ತು ನೀಡಿದೆವು. ಇದರ ಪರಿಣಾಮವಾಗಿ ಶಸ್ತ್ರಾಸ್ತ್ರಗಳ ಬಗ್ಗೆ ಉದಾಸೀನ ತೋರಿದೆವು. ಇದು ಇಂದಿನ ಕಥೆ ಮಾತ್ರವಲ್ಲ. ಬಹಳ ಹಿಂದಿನಿಂದಲೂ ಆಗಿರುವ ತಪ್ಪು. ನಾವು ಕೆಲವಾರು ಯುದ್ಧಗಳಲ್ಲಿ ಸೋತಿರುವುದು ಸಹ ಪರಾಕ್ರಮದ, ಪ್ರತಿಭೆಯ ಕೊರತೆಯಿಂದಲ್ಲ. ನಮ್ಮಲ್ಲಿ ಸಮರ್ಥ ಶಸ್ತ್ರಾಸ್ತ್ರಗಳಿರಲಿಲ್ಲ ಎನ್ನುವ ಕಾರಣಕ್ಕಾಗಿ ಸೋತು ಹೋದೆವು. ಉದಾಹರಣೆಗೆ ೭ನೇ ಶತಮಾನದಲ್ಲಿ ಆಕ್ರಮಣವೆಸಗಿದ ಮಹಮದ್ ಬಿನ್ ಖಾಸಿಂ ಬಳಿ ಕಲ್ಲುಗಳನ್ನು ಬೀಸಿ ಒಗೆಯುವ ಐದು ಯಂತ್ರಗಳಿದ್ದವು. ಅವನನ್ನು ಎದುರಿಸಿದ ದಾಹಿರನ ಬಳಿ ಇದ್ದದ್ದು ಕೇವಲ ಕತ್ತಿ-ಗುರಾಣಿಗಳು. ಈಗಲೂ ಅಷ್ಟೆ, ಶಸ್ತ್ರಾಸ್ತ್ರಗಳ ಬಗ್ಗೆ ನಮ್ಮ ಸರ್ಕಾರದ್ದು ದಿವ್ಯ ನಿರ್ಲಕ್ಷ್ಯ.
  • ಮಾನವನು ನಿಸರ್ಗದ ಒಡೆಯನಲ್ಲ. ಆತ ಅದರ ಅಂಗ ಮಾತ್ರ. ಅದಕ್ಕಾಗಿ ನಿಸರ್ಗದ ಸಂತುಲನವನ್ನು ಕಾಪಾಡುವುದರಲ್ಲಿ ಆತನಿಗೂ ಹೊಣೆಯಿದೆ. ತಾನು ಪ್ರಕೃತಿಯ ಒಂದು ಅಂಗವೆಂಬ ಅರಿವು ಇದ್ದಾಗ ಮಾತ್ರ ಈ ಕೆಲಸ ಆತ ಮಾಡಬಲ್ಲ. ವ್ಯಕ್ತಿಯೊಬ್ಬ ತನ್ನ ಕುಟುಂಬದ ಅಂಗ, ಕುಟುಂಬವು ರಾಷ್ಟ್ರದ ಅಂಗ, ರಾಷ್ಟ್ರವು ಸಂಪೂರ್ಣ ಮನುಕುಲದ ಅಂಗ, ಮನುಕುಲವು ನಿಸರ್ಗದ ಅಂಗ ಹಾಗೂ ನಿಸರ್ಗವು ಪರಮಾತ್ಮನ ಅಂಗ – ಹೀಗೆ ವ್ಯಕ್ತಿಯಿಂದ ಪರಮಾತ್ಮನವರೆಗೂ ಎಲ್ಲದರಲ್ಲಿ ಅವಯವಗಳು ಮತ್ತು ಶರೀರದಲ್ಲಿ ಇರುವಂತಹ ರೀತಿಯ ಸಂಬಂಧವಿದೆ.
  • ಹಿಂದೂ ಸಮಾಜವು ತನ್ನ ದೀರ್ಘನಿದ್ರೆಯಿಂದ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಅನೇಕ ಸಾರಿ ದುಷ್ಟಶಕ್ತಿಗಳಿಗೆ ತಲೆಬಾಗಿ ತನ್ನದೆಲ್ಲವನ್ನೂ ಕಳೆದುಕೊಂಡ ಹಿಂದೂ ಸಮಾಜವು ಈಗ ತನ್ನ ಮತ್ತು ತನ್ನ ಸಂಸ್ಕೃತಿಯ ಉಳಿವಿಗಾಗಿ ಹೋರಾಟ ನಡೆಸುವ ಸಮಯ ಸನ್ನಿಹಿತವಾಗಿದೆ. ನಾವೇನೂ ಇತರರ ಮೇಲೆ ಆಕ್ರಮಣ ಮಾಡಬೇಕಾಗಿಲ್ಲ. ಆದರೆ ಆತ್ಮರPಣೆಗೆ ಸದಾ ಸಿದ್ಧರಾಗಿರಬೇಕು. ಇದರಲ್ಲಿ ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಮೇಲೆ ದಾಳಿ ಮಾಡುವವರಿಗೆ ಸರಿಯಾದ ಪಾಠ ಕಲಿಸಬೇಕು.
  • ನಾವು ಪ್ರಕೃತಿಯ ಶೋಷಣೆಯನ್ನೂ ಒಪ್ಪುವುದಿಲ್ಲ. ಮಗುವು ತಾಯಿಯ ಎದೆಹಾಲನ್ನು ತನಗೆ ಅಗತ್ಯ ವಿರುವಷ್ಟು ಮಾತ್ರ ಕುಡಿಯುತ್ತದೆ. ಹೊಟ್ಟೆ ತುಂಬಿದ ನಂತರ ಅದು ಕುಡಿಯುವುದಿಲ್ಲ. ನಮಗೆ ನಿಸರ್ಗವೂ ತಾಯಿ ಇದ್ದಂತೆ, ಈ ತಾಯಿಯನ್ನು ನಮ್ಮ ಅನಿವಾರ್ಯ ಅವಶ್ಯಕತೆಗೆ ಬೇಕಾಗುವಷ್ಟು ಮಾತ್ರ ಬಳಸಬೇಕು. ಅದು ನಿಸರ್ಗದ ಶೋಷಣೆ ((Exploitation of Nature) ಆಗುವುದಿಲ್ಲ. ಬದಲಾಗಿ ಹಸುವಿನ ಹಾಲು ಕರೆದಂತೆ (Milking a cow ದೋಹನ) ಆಗುತ್ತದೆ. ಪ್ರಕೃತಿಯಿಂದ ಲಭ್ಯವಾಗುವುದನ್ನು ‘ತೇನ ತ್ಯಕ್ತೇನ ಭುಂಜೀಥಾ’ (ತ್ಯಾಗ ಮಾಡಿ ನಂತರವಷ್ಟೇ ಉಪಯೋಗಿಸು) ಎಂಬುದು ಹಿಂದು ಚಿಂತನೆ. ಇದರಂತೆ ಶೋಷಣೆ ಅಲ್ಲ ದೋಹನ ಎಂಬುದು ಹಿಂದೂ ವ್ಯಾಖ್ಯೆ.
KS SUDARSHAN JI ADDRESSING MUSLIM COMMUNITY at Shiavajinagar, Bangalore in 2010

ಸುದರ್ಶನ್ ಜೀ ಬಗ್ಗೆ ಗಣ್ಯರ ಅಭಿಪ್ರಾಯ  :

“ಪ್ಲಾಸ್ಟಿಕ್‌ನಿಂದ ಪೆಟ್ರೋಲ್ ತೆಗೆಯಲು ಸಾಧ್ಯ ಎಂದು ಓದಿದ ತಕ್ಷಣ ಅದರ ಹಿಂದೆ ಬಿದ್ದು, ಅದು ಹೇಗೆ ಎಂದು ವಿಜ್ಞಾನಿಗಳೊಂದಿಗೆ ಚರ್ಚಿಸಿದ್ದರು. ಸಾವಯವ ಕೃಷಿ ಬಗ್ಗೆ ಸಾಕಷ್ಟು ಕೃಷಿಕರೊಂದಿಗೆ ಚರ್ಚೆ ನಡೆಸಿದ್ದರು. ಹೊಸ ಸಂಗತಿ ಬಗ್ಗೆ ಅರಿಯುವ ಅಪರಿಮಿತ ಕುತೂಹಲ ಅವರಿಗಿತ್ತು. ಅಖಿಲ ಭಾರತ ಮಟ್ಟದ ಜವಾಬ್ದಾರಿ ವಹಿಸಿಕೊಂಡಿದ್ದರೂ ಸರಳಜೀವನವನ್ನು ಮೈಗೂಡಿಸಿಕೊಂಡಿದ್ದರು. ೧೯೭೯-೮೦ರ ಸಂದರ್ಭದಲ್ಲಿಯೇ ಅಸ್ಸಾಂನಲ್ಲಿ ಮೆಲ್ಲಗೆ ಶುರುವಾದ ಬಾಂಗ್ಲಾ ದೇಶಿಯರ ವಲಸೆ ಸಮಸ್ಯೆ ಕುರಿತು ಸುದರ್ಶನ್‌ಜೀ ಎಲ್ಲರ ಗಮನ ಸೆಳೆದಿದ್ದರು. ಇದು ಅಸ್ಸಾಂನ ಸಮಸ್ಯೆಯಲ್ಲ, ದೇಶದ ಸಮಸ್ಯೆ ಎಂದು ಬಲವಾಗಿ ಹೇಳುವ ಮೂಲಕ, ಕೇಂದ್ರದ ಗಮನ ಸೆಳೆದಿದ್ದರು. ಚರ್ಚ್‌ಗಳು ಸೇರಿದಂತೆ ಅನ್ಯ ಧರ್ಮೀಯರ ಪೂಜಾ ಮಂದಿರಗಳು ಭಾರತೀಕರಣ ಗೊಳ್ಳಬೇಕು ಎಂದು ಸುದರ್ಶನ್‌ಜೀ ಬಲವಾಗಿ ಪ್ರತಿಪಾದಿಸಿದರಲ್ಲದೆ, ಆ ನಿಟ್ಟಿನಲ್ಲಿ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಬಹಳಷ್ಟು ಚರ್ಚೆ ನಡೆಸಿದರು. ಭಾರತೀಯ ಚರ್ಚ್‌ಗಳ ಆಚಾರ-ವಿಚಾರಕ್ಕೆ ಯುರೋಪಿಯನ್ ಸಂಸ್ಕೃತಿ ಏಕೆ? ಭಾರತೀಯ ಸಂಸ್ಕೃತಿಯನ್ನೇ ಅವರು ಅನುಸರಿಸಬಹುದಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಸುದರ್ಶನ್‌ಜೀ ಅವರಿಗೆ ಸ್ಮರಣ ಶಕ್ತಿ ಹೆಚ್ಚ್ಚಿತ್ತು. ಅಟಲ್‌ಜೀ ಬರೆದ ಎಲ್ಲ ಕವನಗಳು ಸುದರ್ಶನ್‌ಜೀ ಅವರ ನಾಲಗೆ ಮೇಲೆ ಇದ್ದವು. ಇದು ಸ್ವತಃ ಅಟಲ್‌ಜೀಗೆ ಅಚ್ಚರಿ ಮೂಡಿಸಿತ್ತು. ಸುದರ್ಶನ್‌ಜೀ ತುಂಬಿದ ಸಭೆಯಲ್ಲಿ ಎಲ್ಲ ಕಾರ್ಯಕರ್ತರನ್ನೂ ಹೆಸರು ಹಿಡಿದು ಕರೆಯುತ್ತಿದ್ದರು.

ಸರಸಂಘಚಾಲಕರಾಗಿದ್ದ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಿದ್ದರು. ಎನ್‌ಡಿಎ ಸರಕಾರ ಸ್ವದೇಶಿ ನೀತಿಯಿಂದ ದೂರ ಸರಿಯುತ್ತಿರುವುದನ್ನು ಬಲವಾಗಿ ಖಂಡಿಸಿದ್ದರು. ನಂಬಿದ ವೈಚಾರಿಕ ಸಿದ್ಧಾಂತಕ್ಕೆ ಅನುಗುಣವಾಗಿ ಬಾಳಿ ಬದುಕಿ ಹೋದರು. ಸುದರ್ಶನ್‌ಜೀ ಎಂಜಿನಿಯರ್ ದಿವಸದ ದಿನವೇ ನಿಧನರಾಗಿರುವುದು ಕಾಕತಾಳೀಯ. ಗಮನಿಸಬೇಕಾದ ಸಂಗತಿ ಅಂದ್ರೆ – ವಿಶ್ವೇಶ್ವರಯ್ಯ, ಸುದರ್ಶನ್‌ಜೀ ಇಬ್ಬರೂ ಕರ್ನಾಟಕದವರು ಹಾಗೂ ಇಬ್ಬರೂ ಎಂಜಿನಿಯರ್‌ಗಳು. ರಾಷ್ಟ್ರ ಅವರನ್ನು ಸ್ಮರಿಸುತ್ತದೆ!”

– ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಸಹ ಪ್ರಧಾನ ಕಾರ್ಯದರ್ಶಿ

  • ಸುದರ್ಶನ್‌ಜೀ ಹಳೆಯ ಕಂದಾಚಾರಗಳನ್ನು ವಿರೋಧಿಸುತ್ತಿದ್ದರು. ಕೆಲವರನ್ನು ನಿಷೇಧಿಸುವುದು, ಕಪ್ಪು ಪಟ್ಟಿಗೆ ಸೇರಿಸುವುದು ಮೊದಲಾದುವೆಲ್ಲವನ್ನು ಹಿಂದುಗಳು ಅನುಸರಿಸಬಾರದು. ಹಿಂದು ಧರ್ಮದಲ್ಲಿ ದೇವರನ್ನು ಟೀಕಿಸುತ್ತಿದ್ದ ಚಾರ್ವಾಕನಿಗೂ ಸಮಾಜದಲ್ಲಿ ಮನ್ನಣೆ ನೀಡುತ್ತಿದ್ದುದನ್ನು ಸುದರ್ಶನ್‌ಜೀ ನೆನಪಿಸುತ್ತಿದ್ದರು. ಸಂಘ ಕಾರ್ಯಾಲಯಗಳಲ್ಲಿ ಅವರು ಸ್ಪಷ್ಟವಾದ ಒಂದು ಸೂಚನೆ ನೀಡಿದ್ದರು. ಯಾರು ಎಷ್ಟು ನೀರು ಕುಡಿಯುತ್ತಾರೋ ಅಷ್ಟು ಮಾತ್ರ ನೀರನ್ನು ಗ್ಲಾಸ್‌ನಲ್ಲಿ ತುಂಬಿಡಬೇಕೆಂದು. ‘ನೀರನ್ನು ವ್ಯಯ ಮಾಡಬೇಡಿ. ಕುಡಿಯಲಿಟ್ಟ ನೀರು ಬಳಿಕ ಹೊರಗೆ ಚೆಲ್ಲುವಂತಾಗಬಾರದು. ನೀರು ಪವಿತ್ರ ಮತ್ತು ಪರಿಮಿತವಾದುದು’ ಎಂದು ಅವರು ಹೇಳುತ್ತಿದ್ದರು. ವೈಭವದ ವಿವಾಹ ಸಮಾರಂಭವನ್ನು ಏರ್ಪಡಿಸಬೇಡಿರೆಂದು ಅವರು ಮನವಿ ಮಾಡುತ್ತಿದ್ದರು. ಇಂಥ ವೈಭವ ಅನಗತ್ಯ. ಇದು ಭಾರತದ ಕೋಟ್ಯಂತರ ಬಡವರನ್ನು ಅಣಕವಾಡಿದಂತೆ. ಇದು ಹಿಂದು ಸಮಾಜಕ್ಕೊಂದು ಕಪ್ಪುಚುಕ್ಕಿ ಎಂದೂ ಅವರು ವಿರೋಧಿಸುತ್ತಿದ್ದರು. ಹೆಣ್ಣುಮಕ್ಕಳ ಭ್ರೂಣ ಹತ್ಯೆಯನ್ನೂ ಅವರು ವಿರೋಧಿಸುತ್ತಿದ್ದರು. ಲಕ್ಷ್ಮಿ, ದುರ್ಗೆ ಮತ್ತು ಸರಸ್ವತಿಯರನ್ನು ಪೂಜಿಸುವ ನಾವು ಭ್ರೂಣದಲ್ಲಿ ಅವರ ಹತ್ಯೆ ಮಾಡುವುದೇ ಎಂದು ಭಾಷಣಗಳಲ್ಲಿ ಪ್ರಶ್ನಿಸುತ್ತಿದ್ದರು.  – ತರುಣ್ ವಿಜಯ್, ಬಿಜೆಪಿ ರಾಜ್ಯಸಭಾ ಸದಸ್ಯ
  • ಯುವ ಜನಾಂಗ ತ್ಯಾಗವನ್ನು ಬಿಟ್ಟು ಭೋಗದ ಹಿಂದೆ ಸಾಗುತ್ತಿರುವ ಈ ದಿನಗಳಲ್ಲಿ ತಮ್ಮ ಇಡೀ ಜೀವನದಲ್ಲಿ ದೇಶಕ್ಕಾಗಿಯೇ ಬದುಕಿದ ಸುದರ್ಶನ್‌ಜೀ ಎಲ್ಲರಿಗೂ ಪ್ರೇರಕ ರಾಗುತ್ತಾರೆ. – ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ರಾಮಚಂದ್ರಾಪುರ ಮಠಾಧೀಶ
  • ಒಬ್ಬ ಸ್ವಯಂಸೇವಕನ ಬದುಕು ಹೇಗಿರಬೇಕು ಎಂಬುದಕ್ಕೆ ಸುದರ್ಶನ್‌ಜೀ ಬದುಕೇ ಉದಾಹರಣೆ. – ಪ್ರೊ|| ಪಿ.ವಿ. ಕೃಷ್ಣಭಟ್, ಶಿಕ್ಷಣ ತಜ್ಞರು
  • ಮಹಾನ್ ರಾಷ್ಟ್ರವೊಂದರ ಅಭ್ಯುದಯಕ್ಕಾಗಿ ಅವಿರತ ಶ್ರಮಿಸಿದ ಸುದರ್ಶನ್‌ಜೀ ಯವರಿಗೆ ಆ ಕೃತಜ್ಞ ದೇಶದ ಸಾಮಾನ್ಯ ನಾಗರಿಕನಾಗಿ ನನ್ನ ಸಹಸ್ರ ನಮನಗಳು. – ಅಟಲ್ ಬಿಹಾರಿ ವಾಜಪೇಯಿ ಮಾಜಿ ಪ್ರಧಾನಮಂತ್ರಿ
  • ಸಾಮಾಜಿಕ ನ್ಯಾಯಕ್ಕಾಗಿ ಸುದರ್ಶನ್‌ಜೀ ಬದ್ಧರಾದವರು. ಕ್ರೈಸ್ತ ಸಮುದಾಯದ ಅನೇಕರಲ್ಲಿ ರಾಷ್ಟ್ರೀಯ ವಿಚಾರಗಳನ್ನು ಬಡಿದೆಬ್ಬಿಸಿ ಹಿಂದೂ-ಕ್ರೈಸ್ತ ಸಮಾಜದ ನಡುವೆ ಸಾಮರಸ್ಯ ಮೂಡಿಸಿದ ಶ್ರೇಷ್ಠರಲ್ಲಿ ಸುದರ್ಶನ್‌ಜೀ ಒಬ್ಬರು.-  RL  ಫ್ರಾನ್ಸಿಸ್, ಕ್ರಿಶ್ಚಿಯನ್ ಲಿಬರೇಷನ್ ಮೂವ್‌ಮೆಂಟ್ ಅಧ್ಯP
  • ಸುದರ್ಶನ್‌ಜೀಯವರ ಜತೆಗಿನ ಅನೇಕ ಸಲದ ಭೇಟಿಯ ವೇಳೆ ಸ್ವದೇಶೀ ತಂತ್ರಜ್ಞಾನದ ಕುರಿತು ಸುದರ್ಶನ್‌ರ ಕಾಳಜಿ ವ್ಯಕ್ತವಾಗುತ್ತಿತ್ತು. ನಮ್ಮ ದೇಶದ ಕೃಷಿ ಕ್ಷೇತ್ರದ ಸಮಸ್ಯೆಯನ್ನು ಸರಿಯಾಗಿ ಬಲ್ಲವರಾಗಿದ್ದರು. – ಡಾ|| ವಿಜಯ್ ಭಾಟ್ಕರ್, ವಿಜ್ಞಾನಿ, ಮುಂಬೈ
  • ಅವರದು ಸರಳ, ಸಮೃದ್ಧ ಜೀವನ. ಜಲ ಸಂರಕ್ಷಣೆ, ಸಾವಯವ ಕೃಷಿ, ದೇಶದ ಆರ್ಥಿಕ ಸುಧಾರಣೆ ಹೀಗೆ ಹತ್ತು ಹಲವು ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿ ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಅಲ್ಪಸಂಖ್ಯಾತ ಎಂಬ ಪದ ಪ್ರಯೋಗಕ್ಕೆ ಅವರ ವಿರೋಧವಿತ್ತು. ಇಸ್ಲಾಂನ ಭಾರತೀಕರಣ ಮತ್ತು ಚರ್ಚ್‌ಗಳ ರಾಷ್ಟ್ರೀಕರಣ ಬಗ್ಗೆಯೂ ಅವರು ಪ್ರತಿಪಾದಿಸಿದ್ದರು. – ಮೈ.ಚ. ಜಯದೇವ್, ಆರೆಸ್ಸೆಸ್ ಮುಖಂಡ
  • ತೀವ್ರಗಾಮಿ ಹಿಂದೂತ್ವದ ನಿಲುವು ಮತ್ತು ಸ್ವದೇಶಿ ಚಿಂತನೆಯನ್ನು ಬಲವಾಗಿ ನಂಬಿಕೊಂಡಿದ್ದರು ಸುದರ್ಶನ್. ತಮ್ಮ ಸೇವಾ ಅವಧಿಯಲ್ಲಿ ಆರ್ಥಿಕ ಸಾರ್ವಭೌಮತ್ವ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದ್ದರು. – ‘ಪ್ರಜಾವಾಣಿ’, ಸೆಪ್ಟೆಂಬರ್ ೧೬, ೨೦೧೨

ಪ್ರಶ್ನೆ : ನಮ್ಮ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ವರ್ಣಭೇದವನ್ನು ದೂರಗೊಳಿಸುವುದು ಹೇಗೆ?

ಸುದರ್ಶನ್‌ಜೀ ಉತ್ತರ : ಅದಕ್ಕಾಗಿ ಮೊದಲು ನಾವೆಲ್ಲರೂ ಹಿಂದುಗಳು ಎಂಬ ಭಾವವನ್ನು ಜನರ ಮನದಲ್ಲಿ ಎಬ್ಬಿಸಬೇಕಾಗಿದೆ. ಜಾತಿ, ಮತ, ಪಂಥ, ಇತ್ಯಾದಿ ಸಣ್ಣ ವಿಚಾರಗಳಿಂದ ಮೇಲೆದ್ದು ಹಿಂದುಗಳಾಗಿ ನಾವೆಲ್ಲರೂ ಒಂದು ಎಂಬಂತೆ ವ್ಯವಹರಿಸುವುದನ್ನು ಕಲಿಸಬೇಕಾಗಿದೆ.

ಹಿಂದೆ ಸಮಾಜದ ವ್ಯವಸ್ಥಿತ ಬದುಕಿಗಾಗಿ ವರ್ಣವ್ಯವಸ್ಥೆ ಇತ್ತು. ಅವರವರ ವೃತ್ತಿಗಳ ಮೇಲೆ ಈ ವ್ಯವಸ್ಥೆ ರಚಿತವಾಯಿತು. ಆದರೆ ನಾವೆಲ್ಲರೂ ಕೂಡಿ ಒಂದೇ ಸಮಾಜಪುರುಷನ ಅಂಗಗಳು ಎಂಬ ಭಾವ ಇಡೀ ಸಮಾಜದಲ್ಲಿತ್ತು. “ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂ ರಾಜಸನ್ಯಕೃತಃ| ಉರೂ ತದಸ್ಯ ಯದ್‌ವೈಶ್ಯಃ ಪದ್‌ಭ್ಯಾಂ ಶೂದ್ರೋ ಅಜಾಯತ” ಎಂದು ಹೇಳಲಾಗುತ್ತಿತ್ತು. ಇದರಲ್ಲಿ ತಲೆಯದು ಶ್ರೇಷ್ಠ ಸ್ಥಾನ, ಕಾಲಿನದು ಕೀಳು ಸ್ಥಾನ ಇತ್ಯಾದಿ ಎಂದೂ ತಿಳಿಯುತ್ತಿರಲಿಲ್ಲ. ಈ ರೀತಿ ತಿಳಿಯಲಾರಂಭವಾದುದು ಒಂದು ಮಾನಸಿಕ ವಿಕೃತಿ ಮಾತ್ರ. ವಾಸ್ತವಿಕವಾಗಿ ಹಿರಿಯರ ಪಾದಮುಟ್ಟಿ ನಮಸ್ಕರಿಸುವುದೇ ನಮ್ಮ ಪದ್ಧತಿ, ತಲೆಮುಟ್ಟಿ ಅಲ್ಲ. ಮುಂದೆ ವರ್ಣವ್ಯವಸ್ಥೆಯಲ್ಲಿ ಪತನ ಆರಂಭವಾಗಿ ಜಾತಿಭೇದಗಳು, ಮೇಲುಕೀಳು, ಸ್ಪೃಶ್ಯ ಅಸ್ಪೃಶ್ಯ ಇತ್ಯಾದಿ ದೋಷಗಳು ಸಮಾಜದಲ್ಲಿ ತಲೆದೋರಿದವು. ಆದರೆ ೧೯೬೯ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದು ಪರಿಷತ್ತಿನ ಸಮ್ಮೇಳನದಲ್ಲಿ ಹಲವಾರು ಮಠಾಧಿಪತಿಗಳು ಒಂದೇ ವೇದಿಕೆಯ ಮೇಲೆ ಸೇರಿ “ಹಿಂದವಃ ಸೋದರಾಃ ಸರ್ವೇ” – ಎಲ್ಲ ಹಿಂದುಗಳು ಪರಸ್ಪರ ಸೋದರರು. ಅದಕ್ಕಾಗಿ ಅಸ್ಪೃಶ್ಯತೆಯ ಆಚರಣೆ ತಪ್ಪು ಎಂದು ಒಕ್ಕೊರಳಿನಲ್ಲಿ ಘೋಷಿಸಿದರು.

ತದನಂತರ ಪೂಜ್ಯರಾದ ಪೇಜಾವರ ಶ್ರೀಗಳು ಬೆಂಗಳೂರಿನಲ್ಲಿ ಸ್ವತಃ ಹರಿಜನರ ಕಾಲೋನಿಗೆ ಭೇಟಿ ನೀಡಿ ಅಸ್ಪೃಶ್ಯತೆಯ ಆಚರಣೆ ತಪ್ಪು ಎಂಬುದಕ್ಕೆ ಪ್ರತ್ಯಕ್ಷ ಕಾರ್ಯರೂಪ ಕೊಟ್ಟರು. ಅವರ ಈ ಕ್ರಮವನ್ನು ಸಂಪ್ರದಾಯವಾದಿಗಳು ಆಕ್ಷೇಪಿಸಿದಾಗ ‘ನಮ್ಮ ಶಾಸ್ತ್ರಗಳಲ್ಲಿ ಯವನರ ಸ್ಪರ್ಶವಾದಲ್ಲಿ ಆ ಅಂಗವನ್ನೇ ಕತ್ತರಿಸ ಬೇಕು ಎಂದು ಸಹ ಹೇಳಲಾಗಿದೆ. ನಿಮ್ಮಲ್ಲಿ ಯವನರ ಜೊತೆ ವ್ಯವಹರಿಸುವವರಿಲ್ಲವೇನು? ಅಂತಹವರು ನಿಮ್ಮ ಶರೀರದ ಭಾಗಗಳನ್ನು ಕೊಯ್ಯಿಸಿಕೊಳ್ಳುವಿರಾ?’ ಎಂದು ಅದೇ ಭಾಷೆಯಲ್ಲಿ ಪ್ರಶ್ನಿಸಿದರು. ಸಂಪ್ರದಾಯ ವಾದಿಗಳಿಗೆ ವೇದಗಳೇ ಪ್ರಮಾಣವಾಗಿರುವುದರಿಂದ ವೇದಗಳಲ್ಲಿ ಎಲ್ಲೂ ಅಸ್ಪೃಶ್ಯತೆಯ ಉಲ್ಲೇಖವೇ ಇಲ್ಲ ಎಂಬುದನ್ನು ಶ್ರುತಪಡಿಸಿದರು.

ಮುಂದೆ ಅಯೋಧ್ಯೆಯಲ್ಲಿ ನೂತನ ರಾಮಮಂದಿರದ ನಿರ್ಮಾಣಕ್ಕಾಗಿ ಶಿಲಾನ್ಯಾಸವಾದಾಗ, ಎಲ್ಲ ಧರ್ಮಾಚಾರ್ಯರು ಸೇರಿ ಬಿಹಾರ್‌ನಿಂದ ಅಲ್ಲಿಗೆ ಬಂದಿದ್ದ ಓರ್ವ ಹರಿಜನ ಬಂಧುವಿನಿಂದ ಮೊದಲ ಕಲ್ಲು ಸ್ಥಾಪಿಸಿದರು. ನಾಗಪುರದಲ್ಲಿ ಧರ್ಮಸಂಸತ್ತು ನಡೆದಾಗ ಅಲ್ಲಿ ಸೇರಿದ ಎಲ್ಲ ಮಠಾಧಿಪತಿಗಳು ಡಾ|| ಅಂಬೇಡ್ಕರರು ಬೌದ್ಧಮತದ ದೀಕ್ಷೆ ಪಡೆದ ದೀಕ್ಷಾಭೂಮಿಗೆ ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆಗೆ ಹಾರ ಸಮರ್ಪಿಸಿದರು. ಇನ್ನೊಮ್ಮೆ ಕಾಶಿಯಲ್ಲಿ ಅಂತಹ ಸಮ್ಮೇಳನ ನಡೆದಾಗ ಎಲ್ಲ ಧರ್ಮಾಚಾರ್ಯರು ಅಲ್ಲಿನ ಸ್ಮಶಾನದ ಅಧಿಕಾರಿ ಡೊಂಬರಾಜನ ಆತಿಥ್ಯವನ್ನು ಸ್ವೀಕರಿಸಿದರು. ಈ ಮೂಲಕ ತಾವು ಅಸ್ಪೃಶ್ಯತೆಗೆ ಮನ್ನಣೆ ನೀಡುವುದಿಲ್ಲ ಎಂಬುದನ್ನು ಕೃತಿಯಲ್ಲಿ ಆಚರಿಸಿ ತೋರಿಸಿದರು.

ಈಗ ನಮ್ಮ ಮುಂದೆ ಇಂತಹ ಆದರ್ಶಗಳೇ ಇರುವಾಗ, ನಾವೂ ನಮ್ಮ ನಂಬಿಕೆ, ಬದುಕು ಇವೆಲ್ಲವುಗಳಲ್ಲಿ ಅಂತಹ ಪರಿವರ್ತನೆಯನ್ನು ತರಬೇಕು. ಈ ಕೆಲಸ ನಮ್ಮ ಮನೆಗಳಿಂದಲೇ ಆರಂಭವಾಗಬೇಕು. ಅಸ್ಪೃಶ್ಯರೆನಿಸುವ ಪಂಗಡದವರನ್ನು ನಮ್ಮ ಮನೆಗಳಿಗೆ ಕರೆದು ಸಹಪಂಕ್ತಿಯಲ್ಲಿ ಭೋಜನ, ಕೆಲವೊಮ್ಮೆ ನಾವೂ ಅವರಲ್ಲಿ ಹೋಗಿ ಅಲ್ಲಿ ಊಟ ಮಾಡುವುದು ಇತ್ಯಾದಿ ಮಾಡಿದಲ್ಲಿ ನೀವು ಹೇಳಿರುವಂತಹ ರೀತಿಯ ಭೇದಗಳು ಸಮಾಜದಿಂದ ಕ್ರಮೇಣ ದೂರವಾಗುವುವು.

ಒಮ್ಮೆ ನಮ್ಮ ಒಬ್ಬ ಹರಿಜನ ಸ್ವಯಂಸೇವಕನ ಮನೆಯಲ್ಲಿನ ಮದುವೆಗೆ ಅನೇಕ ಸ್ವಯಂಸೇವಕರು ಹೋಗಿದ್ದರು. ಅಲ್ಲಿ ಎಲ್ಲರೂ ಕೂಡಿ ಮಂತ್ರ ಹೇಳಿ ಒಟ್ಟಿಗೆ ಊಟ ಮಾಡಿದುದನ್ನು ಕಂಡು ಮದುವೆಗೆ ಬಂದಿದ್ದ ಇತರ ಅತಿಥಿಗಳಿಗೂ ಸಂತೋಷ ವಾಯಿತು. ಅವರ ಮದುವೆಗಳಲ್ಲಿ ಹೆಂಡ ಕುಡಿಯುವುದು ಮಾಮೂಲಿ ಸಂಗತಿ ಯಾಗಿದ್ದರೂ, ಅಂದು ಅದನ್ನು ಯಾರೂ ಕೇಳಲೇ ಇಲ್ಲ.

ನಾಗಪುರದ ಒಂದು ಹರಿಜನ ಕೇರಿಗೆ ಮಕರಸಂಕ್ರಾಂತಿಯಂದು ಸ್ವಯಂಸೇವಕರು ಎಳ್ಳು ಬೆಲ್ಲ ಬೀರಲು ಹೋಗಿದ್ದಾಗ ಓರ್ವ ಮಹಿಳೆ “ನನ್ನ ಮಗನೂ ಸಂಘದ ಶಾಖೆಗೆ ಪ್ರತಿದಿನವೂ ಹೋಗುತ್ತಿದ್ದಾನೆ. ಈಗ ಅವನ ನಡವಳಿಕೆ ತುಂಬ ಸುಧಾರಿಸಿದೆ” ಎಂದು ಹೇಳಿದಳು. ಸಮಾಜದಲ್ಲಿ ಪರಿವರ್ತನೆ ಈಗ ಗೋಚರವಾಗುತ್ತಿದೆ. ಕ್ರಮೇಣ ಈಗ ಕಾಣುವ ಭೇದಗಳೆಲ್ಲವೂ ದೂರವಾಗುವುದು ನಿಶ್ಚಿತ.

(2೦೦೦ನೇ ಇಸವಿಯಲ್ಲಿ ರಾಯಚೂರಿಗೆ ಆಗಮಿಸಿದ್ದ ಸುದರ್ಶನ್‌ಜೀ ನೆರೆದ ಗಣ್ಯರ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ)

-ರಾಜೇಶ್ ಪದ್ಮಾರ್

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
Next Post
‘Common Man has potentiality to bring Social Transformation’: RSS Chief Bhagwat at Alappuzha

'Common Man has potentiality to bring Social Transformation': RSS Chief Bhagwat at Alappuzha

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

EDITOR'S PICK

RSS to hold a nationwide protest on November 10:      ಹಿಂದು ವಿರೋಧಿ ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ಪ್ರತಿಭಟನಾ ಧರಣಿ

RSS to hold a nationwide protest on November 10: ಹಿಂದು ವಿರೋಧಿ ಕೇಂದ್ರ ಸರಕಾರದ ವಿರುದ್ಧ ಆರೆಸ್ಸೆಸ್ ಪ್ರತಿಭಟನಾ ಧರಣಿ

November 5, 2010
‘Governments failed to implement Democracy in an Ideal Way’: Ram Madhav at Kozhikode

‘Governments failed to implement Democracy in an Ideal Way’: Ram Madhav at Kozhikode

March 27, 2014
NAGPUR: With heavy waves of emotions, Funeral of Sudarshanji held, brother performs last rites

NAGPUR: With heavy waves of emotions, Funeral of Sudarshanji held, brother performs last rites

September 17, 2012

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In