• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home BOOK REVIEW

ಬುದ್ಧಚರಣ ಅನಿಕೇತನನ ಆಂತರ್ಯದ ಅನಾವರಣ!

Vishwa Samvada Kendra by Vishwa Samvada Kendra
February 28, 2022
in BOOK REVIEW
259
0
510
SHARES
1.5k
VIEWS
Share on FacebookShare on Twitter

ಕನ್ನಡ ಸಾಹಿತ್ಯದ ಸೌಭಾಗ್ಯವೆಂದರೆ,ಅತ್ಯಂತ ಉತ್ಕೃಷ್ಟವಾದ ಮಹಾಕಾವ್ಯಗಳು ಹೊರಬಂದಿರುವುದು. ಮಹಾಕಾವ್ಯಗಳ ಕಾಲ ಮುಗಿಯಿತೆಂಬ ಉದ್ಘಾರಗಳು ಹೊರಬಂದಾಕ್ಷಣ ಮತ್ತೊಂದು ಮಹಾಕಾವ್ಯ ಕನ್ನಡ ಸಹೃದಯನ ಮುಂದೆ ಬರುತ್ತದೆ. ಕನ್ನಡ ಕವಿಕುಲದ ಸಾಹಿತ್ಯಗಂಗೆ ಎಂದೂ ಬತ್ತದು,ಅದು ನಿತ್ಯದ ವೈವಿಧ್ಯಮಯ ಸಾಹಿತ್ಯ ಕಾರಂಜಿ. ಮಹಾಕಾವ್ಯ ಪರಂಪರೆಗೆ ಪೂರ್ಣವಿರಾಮ ಬಿತ್ತೆಂದುಕೊಂಡಾಗ ಶ್ರೀರಾಮಾಯಣ ದರ್ಶನಂ ಮಹಾಕವಿ ಕುವೆಂಪು ಅವರಿಂದ ಬಂದು ಕನ್ನಡದ ಮಹೋನ್ನತ ಕಾವ್ಯ ಪ್ರತಿಭೆ ತನ್ನ ಚಲನಶೀಲತೆಯನ್ನು ಮುಕ್ಕಾಗಿಸಿಕೊಂಡಲ್ಲವೆಂಬುದನ್ನು ಶೃತ ಪಡಿಸಿತು. ನಂತರ ಗೋಕಾಕರಾದಿಯಾಗಿ ಹಲವು ಮಹಾಸಾಹಿತಿಗಳು ಮಹಾಕಾವ್ಯಗಳನ್ನು ನೀಡಿ ನಮ್ಮ ಸಾಹಿತ್ಯ ಪರಂಪರೆಯನ್ನು ಪರಿಪುಷ್ಟಗೊಳಿಸಿದರು. ಆ ಮಹಾಕವಿಗಳ ಸಾಲಿಗೆ ಇದೀಗ ಹೆಚ್.ಎಸ್.ವೆಂಕಟೇಶಮೂರ್ತಿ ತಮ್ಮ ಬುದ್ಧಚರಣ ಮಹಾಕಾವ್ಯದ ಮೂಲಕ ಸೇರ್ಪಡೆಗೊಂಡು ಬುದ್ಧನ ಮಾನವೀಯ ಅಂತಃಕರಣವನ್ನು ವಿಶ್ಲೇಷಿಸುತ್ತಾ ಅವನ ಚಿಂತನೆ,ಕಂಡುಕೊಂಡ ಸತ್ಯ ,ಲೋಕ ಸುಖದ ಕಲ್ಪನೆ,ಆ ದಾರಿಯಲ್ಲಿ ನಡೆಯುತ್ತ ರಕ್ತ-ಮಾಂಸಗಳ ಈ ಶರೀರ ಹೇಗೆ ಪ್ರವೃತ್ತಿಯಿಂದ ದೂರವಾಗಿ ನಿವೃತ್ತಿ ಮಾರ್ಗದಲ್ಲಿ ಯಶಸ್ವಿಯಾಗಿ ಸಾಗಿ ತನ್ನ ಹೆಜ್ಜೆಗುರುತುಗಳನ್ನು ಕಾಲಾನುಕಾಲಕ್ಕೆ ಸ್ಥಾಯಿಯಾಗಿಸ ಬಹುದೆಂಬುದನ್ನು ಹೇಳುತ್ತದೆ.

ಗೌತಮ ಬುದ್ಧನ ಅವತಾರ ಒಂದು ಯುಗದ ಭಾಗ್ಯ. ಮನುಷ್ಯ ಸಹಜ ಸ್ಥಿತಿಯಲ್ಲೇ ಬುದ್ಧನ ಹುಟ್ಟನ್ನು ಹೆಚ್‌ಎಸ್ವಿ ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಪುರಾಣದ ಕಲ್ಪನೆಗಳನ್ನು ಪೂರ್ಣವಾಗಿ ಕೈಬಿಡದೆ,ಪೂರ್ವಸೂರಿಗಳ ಮಾರ್ಗದಲ್ಲೇ ಕಾವ್ಯ ಆರಂಭವಾಗು ವುದಾದರೂ,ಬುದ್ಧ ನೆಲದೊಡಲಲ್ಲಿ ಸುಕ್ಕುಗಟ್ಟಿದ ಬೀಜ ನೆಲದಿಂದ ತಲೆಯೆತ್ತಿ ಕುಡಿಯೊಡೆಯುವಂತೆಯೇ ಮೃಣ್ಮಯನಾಗಿ ಜನಿಸಿದನೆಂದು,ಆತನದು ಹೂವಾಗಿ, ಹಣ್ಣಾಗಿ,ತಣ್ಣೆರೆಳಾಗಿ ಮೂಡಿದ ವ್ಯಕ್ತಿತ್ವವೆನ್ನುತ್ತಾರೆ. ಕಾವ್ಯದ ಪೂರ್ವಕಾಂಡದಲ್ಲಿ ಬುದ್ಧನಾಗುವುದಕ್ಕೆ ಮುನ್ನ ನಡೆದ ಸಿದ್ಧತೆಗಳ ಸುಂದರ ವರ್ಣಮಯ,ವಿಚಾರಪೂರಿತ ವಿವರಣೆಯಿದೆ. ಬುದ್ಧನಾಗುವ ಮುನ್ನ ಸಿದ್ಧಾರ್ಥ ಅನುಸರಿಸಬೇಕಾದ ದಶಪಾರಮಿಗಳಾದ ದಾನ,ಶೀಲ,ತ್ಯಾಗ,ಕ್ಷಮೆ,ಪ್ರಜ್ಞೆ,ಸತ್ಯ, ವೀರ್ಯ,ದೃಢಸಂಕಲ್ಪ,ಮೈತ್ರಿ ಉಪೇಕ್ಷೆ ಈ ವ್ರತಸಂಧಾನಗಳನ್ನು ಮೂರಾವರ್ತಿ ಪೂರ್ಣಗೊಳಿಸಿ ಬುದ್ಧತ್ವ ಪಡೆಯುತ್ತಾನೆ. ದೇಹ ಮನಸ್ಸುಗಳ ಸೂಕ್ತ ದಂಡನೆಯ ಮೂಲಕ ಮಾಗಿದ ಫಲದಂತಹ ವ್ಯಕ್ತಿತ್ವ ಅದಾಗುತ್ತದೆ. ವ್ಯಕ್ತಿಯೊಬ್ಬ ತನ್ನ ದೃಢಚಿತ್ತ,ಛಲ,ಸತತ ಸಾಧನೆಯಿಂದ ಬುದ್ಧಗುರುವಾಗಬಹುದೆಂಬ ಸೂಚನೆ ಕಾವ್ಯದಲ್ಲಿದೆ.

READ ALSO

Conflict resolution : The RSS way

ರಾಣಿ ಚೆನ್ನಭೈರಾದೇವಿ ಬಹುಪಾರಕ್!!

ಅಷ್ಟಾದಶ ವರ್ಣನೆಗಳು ಮಹಾಕಾವ್ಯಕ್ಕೆ ಅನಿವಾರ್ಯವೆಂಬ ಸೂತ್ರವನ್ನು ಕವಿ ಇಲ್ಲಿ ಪೂರ್ಣವಾಗಿ ಕೈ ಬಿಡದೆ ಪೂರ್ವಕಾಂಡ ಹಾಗು ಬುದ್ಧನಾಗುವ,ಆದ ನಂತರದ ಹಾದಿಯಲ್ಲಿ ಮಿಥ್‌ಗಳು ಅಲ್ಲಲ್ಲಿ ನುಸುಳಿವೆಯಾದರೂ ಮಾನವ ಸಹಜ ಸೃಷ್ಟಿಕ್ರಿಯೆಯಲ್ಲೇ ಸಿದ್ಧಾರ್ಥನಾಗಿ ರಾಜಮನೆತನದಲ್ಲಿ ಹುಟ್ಟಿದರೂ ನಿತ್ಯ ಬದುಕಿನ ಏರಿಳಿತ,ನೋವು-ನಲಿವುಗಳು ಎಳೆಯ ಮನಸ್ಸಿನ ಮೇಲೆ ಅಚ್ಚೊತ್ತುವ ಪರಿಣಾಮ,ಅವುಗಳ ಬಗ್ಗೆ ಚಿಂತನಮಂಥನದಿಂದ ಬುದ್ಧನಾಗಿ ಭವಕ್ಕೆ ಬೆಳಕಾಗುವುದನ್ನು ಕಾವ್ಯ ಛಂದೋವೈವಿಧ್ಯದಲ್ಲಿ ಕಡೆದು ನೀಡಿದೆ. ದಶಪಾರಮಿಯನ್ನು ಅರ್ಥವತ್ತಾಗಿಸಲು ಜಾತಕ ಕಥೆಗಳನ್ನು ಅತ್ಯಂತ ಸೊಗಸಾಗಿ ಕಂದ ಪದ್ಯಗಳ ಮೂಲಕ ನೀಡಲಾಗಿದೆ. ಸಿದ್ಧಾರ್ಥ ಬುದ್ಧನಾಗುವ ಪರಿ ಪೂರ್ವಕಾಂಡದಲ್ಲೇ ಅರಿವಿಗೆ ಬರುತ್ತದೆ. ಮನುಷ್ಯರಲ್ಲಿ ಮನೆ ಮಾಡಿರುವ ದುಃಖ,ದಾರಿದ್ರ್ಯ,ರೋಷ,ಹಿಂಸೆ,ಸೇವೆ,ಕ್ಷಮಾಗುಣ,ಆಸೆ ಇವೆಲ್ಲವನ್ನೂ ಬೋಧಿಸತ್ವನಾಗಿ ಅನುಭವಿಸಿ ದಶಪಾರಮಿ ವ್ರತದ ಮೂಲಕ ಅವೆಲ್ಲವನ್ನು ಮೀರಿ ಬುದ್ಧನಾಗುವ ಒಂದು ದೃಢ ನಿಲುವನ್ನು ಕಾವ್ಯದಲ್ಲಿ ಮನಮುಟ್ಟುವಂತೆ ಸಹೃದಯರಿಗೆ ಕವಿ ಉಣಿಸುತ್ತಾ ಹೋಗುತ್ತಾರೆ.

ಬುದ್ಧ ಗುರುವಿನ ಪ್ರಕಾರ ಪಾರಭೌತಿಕತೆಗೆ ಆದ್ಯತೆ,ಆಸಕ್ತಿ ಎರಡನ್ನೂ ನೀಡಬೇಕಾಗಿಲ್ಲ. ಬುದ್ಧ ಅನುಭವದ ಮೂಲಕವೇ ಬದುಕಿನ ಒಳಹೆಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಮುಂದಾದ. ಅದನ್ನು ವಿಚಾರದ ನೆಲೆಯಲ್ಲಿ ಭೌದ್ಧಿಕ ಜಿಜ್ಞಾಸೆಗಳಿಂದ ನೋಡುವ ಆಸಕ್ತಿ ಇದ್ದ ಹಾಗೆ ಕಾಣುವುದಿಲ್ಲ. ಹಾಗಾಗಿ ಬದುಕಿನಲ್ಲಿ ಪ್ರಯೋಗ ಮಾಡುತ್ತಾ ಬದುಕಿನ ಮಾರ್ಗಗಳನ್ನು ಅನ್ವೇಷಿಸಬೇಕೆಂಬ ನಿಲುವು ಆತನದು. ಬದುಕು ದುಃಖ ಪೂರಿತ.ಕಾಮನೆ,ಬಯಕೆ ಇದಕ್ಕೆ ಕಾರಣ.ಅವುಗಳ ನಿವಾರಣೆಯಿಂದ ದುಃಖದಮನ. ನಾಲ್ಕು ಆರ್ಯಸತ್ಯಗಳನ್ನರಿತು,ಅಷ್ಟಾಂಗ ಮಾರ್ಗದಲ್ಲಿ ಅದರ ನಿವಾರಣೆ ಎಂದು ಬೋಧಿಸಿದ. ಆನಾತ್ಮವಾದ,ಪ್ರತೀತ್ಯಸಮುತ್ಪಾದ,ಆತ್ಯಂತಿಕ ಸತ್ಯವಿಲ್ಲ,ಕೇವಲ ಶೂನ್ಯ ಎಂಬ ಈ ಚಿಂತನಾಕ್ರಮಗಳು ರೂಪುಗೊಂಡವು.

ಬದುಕಿನ ಏರಿಳಿತ,ಎದುರಾಗುವ ಆಸೆ,ಸಂಕಷ್ಟಗಳಿAದ ಮನುಷ್ಯ ಸ್ವಭಾವದ ಮೇಲಾಗುವ ಪರಿಣಾಮಗಳನ್ನು ಸಿದ್ಧಾರ್ಥನ ಎಳೆಯ ಮನಸ್ಸು ವಿಶ್ಲೇಷಿಸುತ್ತಾ ಅದಕ್ಕೆ ಪರಿಹಾರ ಹುಡುಕಲು ಭವಸಾಗರವ ಈಜಿ ಮಧ್ಯಮ ಮಾರ್ಗವನ್ನಾಯ್ದು ಆರ್ಯ ಸತ್ಯಗಳನ್ನರಿತು ನಿವಾರಣೆಯ ಮಾರ್ಗದ ಅನ್ವೇಷಣೆಗೆ ಹೊರಡುವ ಬುದ್ಧಯಾನವನ್ನು ಆಪ್ತ ಶೈಲಿಯಲ್ಲಿ ಕಾವ್ಯ ಮುಂದಿರುಸುತ್ತದೆ. ಮಹಾಪುರುಷನೊಬ್ಬನ ಹುಟ್ಟನ್ನು ಮಹಾಕಾವ್ಯಗಳು ವೈಭವೀಕರಿಸಿ ಸಾಮಾನ್ಯ ವಾತಾವರಣದಲ್ಲಿ ಅಸಾಮಾನ್ಯತೆ ಮೈದಾಳುವಂತೆಯೇ ಬುದ್ಧನಾಗಲಿರುವ ಸಿದ್ಧಾರ್ಥನ ಜನನವನ್ನೂ ಕಾವ್ಯ ಮಹೋನ್ನತ ಸಂದರ್ಭವಾಗೇ ಕಟ್ಟಿಕೊಡುತ್ತದೆ. ಬೆಳ್ದಾವರೆಗಳು ಹೆಜ್ಜೆಗಾಸರೆಯಾಗಿ,ಹಕ್ಕಿಗಳು ಚಿಲಿಪಿಲಿಗುಟ್ಟುವ ಮೂಲಕ,ಹೂಮೊಗ್ಗುಗಳು ತುಟಿತೆರೆದು ತಂಗಾಳಿಯಲಿ ತಮಲರಿನ ಮೂಲಕ ಬುದ್ಧಾಗಮನವನ್ನು ಕವಿ ವಿವರಿಸುತ್ತಾರೆ.

   ಹೊಂಬಣ್ಣದಿಂದ ಹೊಳೆಯುವ ಬೋಧಿಸತ್ವನು
   ಇರಳು ಜನಿಸಿದಿನಂತೆ! ಲುಂಬಿನಿ ವನದಲ್ಲಿ!
   ನಿಜತಾನೆ………….ಹೇಳಿದವು ಮೋಡಗಳು
   ಖುಷಿಯಿಂದ ಪುಟಿಯುತ್ತ!
   ಗೊತ್ತಿಲ್ಲವಾ ನಿಮಗೆ?ಲುಂಬಿನಿ ವನದಲ್ಲಿ
   ಎತ್ತರೆತ್ತರದ ಸಾಲವೃಕ್ಷರಾಜಿಯ ಕೆಳಗೆ
   ಒಳ್ಳೆ ತಿಥಿ,ಒಳ್ಳೆ ನಕ್ಷತ್ರದ ಮುಹೂರ್ತದಲಿ,
   ಭೂಮಿಯಲ್ಲೇ ಪೂರ್ಣಚಂದ್ರಮನು ಜನಿಸಿದ್ದು?
ಸುಂದರ ಪದ ಗುಚ್ಛಗಳಿಂದ ಸಿದ್ಧಾರ್ಥಾಗಮನವನ್ನು ಕಾವ್ಯಶಿಲ್ಪದಲ್ಲಿ ವರ್ಣಮಯತೆಯಿಂದ ಮನನ ಮಾಡಿಸಲಾಗಿದೆ.ಬುದ್ಧನ ಜನನ ಒಂದು ಲೌಕಿಕ ಸೊಬಗು,ಅಸಿತ ಮುನಿಗಳು ರಾಜ ಶುದ್ಧೋಧನನಿಗೆ ಹೇಳುವುದು ಲೋಕದನಿಷ್ಟಗಳ ಬಗೆಹರಿಸಲೆಂದು ಬಂದವನು ಭಗವಾನ್ ಬುದ್ಧ! ಆಗುವನು ಸಮ್ಮಾ ಸಂಬುದ್ಧ!- ಸ್ವಂತ ಸಾಧನೆಯಿಂದ ಬೋಧಿಯನು ಗಳಿಸಿ ಬೀರುವನು ಬೆಳದಿಂಗಳನು ಬಿಸಿಲು ತಾನುಂಡು; ಪಾರು ಮಾಡುವನು ಲೋಕವ ಭವದ ಭಯದಿಂದ ಎಂಬ ಧ್ವನಿ ಪೂರ್ಣ ಸಾಲುಗಳ ಮೂಲಕ;ಹಾಗೆಯೇ ಇಹದ ಜಂಜಾಟಗಳನ್ನು ಅದರೊಳಗೆ ನಿಂತು ವೀಕ್ಷಿಸುತ್ತಾ,ವಿಶ್ಲೇಷಿಸುತ್ತಾ ಬುದ್ಧನಾಗುವತ್ತ ಹೆಜ್ಜೆಯಿಡುವನೆಂಬ ಸೂಚನೆ ನೀಡುತ್ತಾರೆ. ಮುನಿಗೆ ಶಿಶುವಿನ ಮುಂದಿನ ನಡೆತೋರುವುದು -ತಾನೆ ಕಡಲಾಗಲು ಹೊರಟ ಗಂಗೆಗೆ ಯಾರು ಅಣೆಕಟ್ಟೆ ಕಟ್ಟುವರು? ಈ ಬಗೆಯ  ಸುಂದರ ಉಪಮೆಗಳ ಮೂಲಕ ಬುದ್ಧನ ವ್ಯಕ್ತಿತ್ವದ ಪರಿಚಯವನ್ನು ಶಬ್ಧಚಿತ್ರವಾಗಿಸಿ ಕಾವ್ಯದಲ್ಲಿ ನೀಡಲಾಗಿದೆ.

ಸಿದ್ಧಾರ್ಥ ಬುದ್ಧನಾಗುವ ಹಂತಗಳ ವರ್ಣನೆ ಕಾವ್ಯದೊಳಗರಳುತ್ತಾ ಸಾಗುತ್ತದೆ. ಮಣ್ಣಹುಳ ಭಕ್ಷಿಸುವ ಹಕ್ಕಿಗಡಣ,ಹಕ್ಕಿ ಸೇವಿಸುವ ಹಾವು,ಹಾವನು ಹಿಡಿಯುವ ಹದ್ದು ಈ ರೀತಿ ಜೀವೊ ಜೀವಸ್ಯ ಜೀವನಂ ಎಂಬಂತೆ ಜನನ ಮರಣದ ಚಕ್ರ ಬಾಲ ಸಿದ್ಧಾರ್ಥನ ಕಣ್ಣಾಲಿಗಳ ತೇವಗೊಳಿಸುತ್ತಲೇ ಚಿಂತನೆಗೂ ತಳ್ಳುತ್ತದೆ. ದೇವದತ್ತನ ಬಾಣ ರಾಜಹಂಸವನು ಘಾಸಿಗೊಳಿಸಿದಾಗ ಅದನ್ನುಪಚರಿಸುವ ಸಿದ್ಧಾರ್ಥ ಹೇಳುವುದು ಅರ್ಥಗರ್ಭಿತವಾಗಿ- ಕೊಂದವನದಲ್ಲ -ಕಾದವನದ್ದು ಹಕ್ಕಿಯ ಹಕ್ಕೆಂದು. ಇಲ್ಲಿ ಸಿದ್ಧಾರ್ಥ ಪಂಜರದೊಳಗಿದ್ದು ಉಪಚಾರಕ್ಕೊಳಗಾದ ರಾಜಹಂಸದ ಸ್ಥಿತಿಯೇ ತನ್ನದೆಂದು ಕೊಳ್ಳುತ್ತಾನೆ. ಕವಿ ಇಲ್ಲಿ ಆ ಬಂಗಾರದ ಪಂಜರದಿಂದ (ಅರಮನೆ/ಲೌಕಿಕಕತೆ)ಹೊರ ಹೋಗುವನಿವಾರ್ಯತೆಯ ಸೂಚನೆಯನ್ನು ಒಂದು ರೂಪಕವಾಗಿಸಿ ನೀಡಿದ್ದಾರೆ.

ಶ್ರಾವಕನಾಗಲು ನಿಶ್ಚಯಿಸಿದ ಸಿದ್ಧಾರ್ಥನಲ್ಲಿ ರಸಿಕತೆಯ ಬಿತ್ತನೆಗೆ ನಡೆಸುವ ಚೈತ್ರೋತ್ಸವದ ಸುಂದರ ವರ್ಣನೆ ಶೃಂಗಾರ ರಸಾಭಿಷೇಕವನ್ನು ಕಾವ್ಯಾಸಕ್ತರಿಗೆ ಮಾಡಿಸಿದರೂ ಸಿದ್ಧಾರ್ಥನ ನಿರ್ಭಾವುಕತೆಯನ್ನೂ ಪರಿಚಯಿಸುತ್ತದೆ; ಆದರೆ ಸುಪ್ರಬುದ್ಧನ ಪುತ್ರಿ ಯಶೋಧರೆ ಉಡುಗೊರೆ ಸ್ವೀಕರಿಸಲು ಬಂದು ನಸುನಾಚಿ ನಿಂತಾಗ ಸಿದ್ಧಾರ್ಥನಾಂತರ್ಯದಲ್ಲೊಂದು ಭವದ ಆಕರ್ಷಣೆ ಮಿಂಚಿ ಮನುಷ್ಯ ಸಹಜ ಸ್ಥಿತಿಗೆ ತರುತ್ತದೆ. ಇದು ಕವಿ ಮೊದಲೇ ಹೇಳಿದಂತೆ ಆ ವ್ಯಕ್ತಿತ್ವ ನೆಲದೊಡಲಲ್ಲಿ ಸುಕ್ಕುಗಟ್ಟಿದ ಬೀಜ ತಲೆಯತ್ತಿ ಕುಡಿಯೊಡದಿದ್ದು ಎಂಬುದನ್ನು ದೃಢ ಪಡಿಸುತ್ತದೆ. ಕವಿ ಇಲ್ಲಿ ಸಿದ್ಧಾರ್ಥನನ್ನು ಪೂರ್ಣವಾಗಿ ಪಾರಮಾರ್ಥಿಕತೆಗೆ ಒಳಗಾಗಿಸದೆ ಇಹದ ಬಯಕೆಗೂ ಒಳಪಡಿಸುತ್ತಾರೆ. ಸಂಸಾರಿಯಾದರೂ ಸಿದ್ಧಾರ್ಥ,ಹಸುರು ಮರದಿಂದ ಹಣ್ಣೆಲೆಗಳುದಿರಿದಂತೆ ಆ ರಿತಿ ಕ್ರಿಯೆಗೆ ಹಂಬಲಿಸಿ ತಾನೂ ಒಂದು ಮರವೆಂದೇ ಭಾವಿಸಿ,ಭವದಿಂದ ದೂರವಾಗಿ ಬದುಕಿನ ಸತ್ಯಗಳನ್ನೊಳಗೊಂಡ ಅಲರು ತುಂಬಿದ ಮರವಾಗಬೇಕೆಂದುಕೊಳ್ಳುವುದನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಬುದ್ಧ ಮೂಗು ಹಿಡಿದು ತನ್ನ ಮೋಕ್ಷಕ್ಕೆ ಹಂಬಲಿಸಿದವನಲ್ಲ; ಬದುಕಿನಲ್ಲಿರುವ ದುಃಖ,ಅದಕ್ಕಿರುವ ಕಾರಣ,ದುಃಖ ನಿವಾರಿಸುವ ಮಾರ್ಗಾನ್ವೇಷಿಸಿ ಲೋಕಕ್ಕೆ ನೀಡಲವತರಿಸಿದವನು.ಅದಕ್ಕಾಗಿ ಬೋಧಿ ಪಡೆಯಲು ಆತನ ಮನದ ತಾಕಲಾಟ,ಅನುಭವಿಸಿದ ಕಾಠಿಣ್ಯ,ಬಂದ ಅಡೆತಡೆಗಳ ಒಟ್ಟು ವಿವರ ಕಾವ್ಯದಲ್ಲಿ ಅನಾವರಣಗೊಂಡಿದೆ.ಬುದ್ಧನಾಗುವ ಮುನ್ನ ಸಿದ್ಧಾರ್ಥನನ್ನು ಬಾಹ್ಯ ಜಗತ್ತು ಕಾಡುತ್ತದೆ. ಅದನ್ನು ಕವಿ ಏಕಾಂತಕ್ಕೆ ಲೋಕಾಂತದಾವರಣ,ಬಿಸಿಲ ಚಾವಟಿ ಬೆನ್ನ ಮೇಲೆ ಬಾರಿಸುವಾಗ ಅಸುಖೆಯು ಹೇಗೆ ಸುಖವಾಗಿ ಇದ್ದೀತು- ಎನ್ನುತ್ತಾ ಹೊರಗು ಒಳಗು ಒಂದನ್ನೊಂದು ಬಿಟ್ಟಿರವು ಎನ್ನುತ್ತಾರೆ. ಶಾಕ್ಯ- ಕೋಲಿ ರಾಜ್ಯಗಳ ಅನಿವಾರ್ಯ ಸಮರ ಸನ್ನಾಹದಲ್ಲಿ ಸಿದ್ಧಾರ್ಥನೊಳಗಿನ ಬುದ್ಧ ಹೇಳುವುದು-ಯುದ್ಧ ಪ್ರತಿಯುದ್ಧವನು ಹುಟ್ಟಿಸುವುದರಿಯಿರಿ,ಎಣ್ಣೆ ಹುಯ್ಯುವುದಗ್ನಿ ಶಮನಕ್ಕೆ ದಾರಿಯೆ? ಕೋಪದಲ್ಲಿ ಕೊಯ್ದ ಬೆಳೆ ಚಿಗುರಲಾರದೆಂಬ ಸತ್ಯವನ್ನು ಅರುಹುತ್ತಾನೆ. ಇಲ್ಲಿ ಕವಿ ಹಿಂಸೆ,ದ್ವೇಷ,ಹಗೆತನದಿಂದ ಸಾಧಿಸುವುದಾದರೂ ಏನೆಂಬ ಬುದ್ಧ ಮನಸ್ಸಿನ ಭಾವನೆಗಳನ್ನು ಆಪ್ತವಾದ ಕಾವ್ಯ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ.

ತನ್ನ ಕುಡಿಯೊಂದು ಯಶೋಧರೆಯ ಗರ್ಭದಲ್ಲಿ  ಮೈತಾಳುತ್ತಿದೆ ಎಂಬುದರಿವಾದಾಗ ಸಿದ್ಧಾರ್ಥನ ತಳಮಳ,ತಾಕಲಾಟಗಳನ್ನು ವೈವಿಧ್ಯಮಯ ಪ್ರತಿಮೆಗಳ ಬಳಸಿ ಕವಿ ವಿವರಿಸುತ್ತಾರೆ. ಸಿದ್ಧಾರ್ಥನ ಮನಸ್ಸಿನಲ್ಲಿ – ಬಳುಬಳುಕುತಿದೆ ಗಾಳಿದೆಲೆ ಬಳ್ಳಿ,ಅದೇ ಆಗುವುದೆ ಬಿಗಿವ ಲಂಗರಿನ ಸರಪಳಿ? ಬೆಳ್ಳಿ ಹಾಯಿಯ ನಿರಾಮಯ ಚಂದ್ರಬಿಂಬಕ್ಕೆ ರಾಹುಕೇತುವೆ ಬಾಯಿ ತೆರೆವ ಕಾರಾಗಾರ? ತಂದೆಯಾಗಲಿರುವ, ಆದರೆ ತಾನು ಅನಿಕೇತನನಾಗಬೇಕೆಂಬ ಬಯಕೆಗೆ ಬಂದ ಅಡ್ಡಿ-ಆತಂಕಗಳ ನೆನೆದು ವಿಹ್ವಲನಾಗುವುದನ್ನು ಅತ್ಯಂತ ಸಂಕೀರ್ಣವಾಗಿ ಹೆಚ್‌ಎಸ್ವಿ ಚಿತ್ರಿಸಿದ್ದಾರೆ. ತಂದೆಯಾದರೂ ಸಂಸಾರಿಯಾಗಿ ಉಳಿಯನೆಂಬುದನ್ನು ಕವಿ ರೂಪಕಗಳ ಮೂಲಕ ಸೂಚಿಸುವ ಬಗೆ ಅದ್ಭುತವಾಗಿದೆ- ದಂಡೆ ಹಿಡಿಯುವ ನದಿಯ ಯತ್ನ ನಿಷ್ಫಲ; ವಿಫಲ. ಕಾಲ್ಜಾರಿ ಸಾಗುವುದು ಕಡಲೆಡೆಗೆ ನದಿಯೊಡಲು ಎನ್ನುತ್ತಾ ಸಿದ್ಧಾರ್ಥನ ಸಂಕಲ್ಪ ಬಲದ ವರ್ಣನೆಯನ್ನು ನೀಡುತ್ತಾರೆ.

ಅರಸುಕುಮಾರ ಬುದ್ಧನಾಗಿ ಹೊಸ ಜನ್ಮವ ಪಡೆವ ಬಗೆಯ ವರ್ಣನೆಯ ಸಾಲುಗಳು ಹೀಗಿದೆ- ಸಿದ್ಧಾರ್ಥ ಹೊಂಬೆಳಗ ಹೊಳೆಗೆ ಜಿಗಿದನು. ಹಾಕಿ ಮಾರುಗೈ ಈಜಿದನು ಇನ್ನೊಂದು ದಡದತ್ತ. ಅದು ಶಾಕ್ಯ ಮುನಿಗೆ ಕಂಡಿದ್ದು- ಹರಿವ ಹೊಳೆಯಲ್ಲೊಂದು ತೇಲುದೀಪದ ಹಾಗೆ. ಈ ರೀತಿ ಅರ್ಥಗರ್ಭಿತ ಸುಂದರ ಪದಲಾಲಿತ್ಯದಿಂದ ಕೂಡಿದ ಸಾಲುಗಳು ಓದುಗರನ್ನು  ಹಿಡಿದಿಟ್ಟು ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ.

ಬಲ್ಲ ಗುರುವನ್ನು ಅರಸುತ್ತಾ ಸಾಗಿದಾಗ ಕಾವ್ಯದಲ್ಲಿ ಸಿದ್ಧಾರ್ಥ ಭಿಕ್ಕುವಾಗುವುದನ್ನು ತಡೆಯಲು ದೊರೆ ಬಿಂಬಸಾರ ಬಂದಾಗ ಅವರಿಬ್ಬರ ನಡುವಿನ ವಾಗ್ವಾದದಲ್ಲಿ ಬ್ರಹ್ಮಚರ್ಯ,ಗೃಹಸ್ಥ,ವಾನಪ್ರಸ್ಥದ ಸಹಜ ಸೋಪಾನ. ಕೊನೆಯಲ್ಲಿ ಇದ್ದೇ ಇದೆ ಸನ್ಯಾಸ ಎಂದು ಬಿಂಬಸಾರ ವಿವರಿಸಿ,ಸನ್ಯಾಸಾಶ್ರಮಕ್ಕೆ ಬಂದಾಗ ಲೋಕ ಮುಕ್ತಿ ಮಾರ್ಗವನು ಶೋಧಿಸು ಎಂದಾಗ,ಭಿಕ್ಕುವಿನ ಉತ್ತರ ಅಷ್ಟೇ ಖಂಡಿತವಾಗಿದೆ.
    ಮನೆಹತ್ತಿಉರಿವಾಗ ತೈಲಧಾರೆಯು ನುಗ್ಗಿ
    ಉರಿಯ ನಂದಿಸಬಹುದೆ? ಲಗ್ಗೆ ಹಾಕಿದ ಬಳಿಕ
    ಕಲ್ಕೋಟೆ ಕೊತ್ತಲಕೆ,ಆನೆ ಬಾಗಿಲಿಗಗುಳಿ ಹಾಕಿ
    ರಕ್ಷಿಸಬಹುದೆ? ಬೆಳೆ ಉರಿದ ಬಳಿಕ ಸುರಿ-
    ಮಳೆ ಬಂದರೇನು ಫಲ? ಜರ,ಮರಣ,ರೋಗಗಳ
    ಪರಿಹಾರ ಅವು ಸನಿಹ ಬರುವ ಮುನ್ನವೇ ಮಾಡ
    ಬೇಕು.
ಈ ಅಚಲ ಮನಸ್ಥಿತಿಯಲ್ಲಿ ಸಿದ್ಧಾರ್ಥ ಬುದ್ಧನಾಗಲು ಮುಂದಡಿಯಿಡುತ್ತಾನೆ- ಒಡಲ ಕಾಳಗ ಮುಗಿದರೂನು ಒಳಮನದ ಕಾಳಗವು ಮುಗಿದಿಲ್ಲ. ಈ ನಿಶ್ಚಲತೆಯೊಂದಿಗೆ ಸಿದ್ಧಾರ್ಥಯಾನ ಬುದ್ಧನಾಗುವತ್ತ ನಡೆದಿದೆ. ನಮ್ಮೊಳಗೆ ಇರುವ ಮಾರನೇ ನಮ್ಮ ಎದುರಾಳಿ, ಆ ಒಳಯುದ್ಧ ಮುಗಿಸಲು ಬುದ್ಧ ಪಥ ಹುಡುಕುತ್ತ. ಆರಾಡ ಮುನಿಯಿಂದ ಧ್ಯಾನದ ನಾಲ್ಕು ನೆಲೆಗಳನ್ನರಿತರೂ ಆತ್ಮತತ್ವವನ್ನು ಒಪ್ಪದೆ- ಆತ್ಮ ಎನ್ನುವುದು ಅನಗತ್ಯ ಊಹಾಕಲ್ಪ,ಎಲ್ಲವೂ ನಶ್ವರವೇ. ಆತ್ಮ ಶಾಶ್ವತವೆಂದು ಹೇಗೆ ಒಪ್ಪುವುದಾಗ? ಎಂಬ ಅನುಮಾನದಲ್ಲೆ ತನ್ನ ಅನಾತ್ಮ ವಾದವನ್ನು ಮಂಡಿಸಿ ಪೂರ್ಣ ಅರಿವಿಗೆ ಮುಂದಾಗುತ್ತಾನೆ. ಬುದ್ಧ ಗುರುವಿನ ವಿಶೇಷವೆಂದರೆ,ಗುರುವು ಹೇಳಿದ್ದರ ಪ್ರತಿಧ್ವನಿಯಾಗದೆ,ಆತನುಪದೇಶ ಗಳ ಪಥದಲ್ಲೇ ಪಥಿಕನಾಗಿ,ಬೋಧಿವೃಕ್ಷದಡಿ ತಾನಸ್ಖಲಿತನಾಗಿ ಕುಳಿತು,ರಾಗ-ದ್ವೇಷ,ಮೋಹ-ತರ್ಕಗಳಿಂದ ಪರಿಮುಕ್ತನಾಗಿ,ಸಾಕ್ಷಾತ್ಕಾರ ಪಡೆದರೆ,ಅಲ್ಲಿಂದ ಚೂತಾಪಪಾತವ ಪಡೆದು,ಆಸೆದಿಂದ ದೂರನಾಗಿ,ಆಸೆಕ್ಷಯದ ಅರಿವಿನಿಂದ ದುಃಖಕ್ಕೆ ಆಸೆಯೇ ಮೂಲವೆಂದರಿತು,ಮೋಹ,ಆಸೆ,ರಾಗ ಪರಿಮುಕ್ತನಾಗಿ ಅಷ್ಟಾಂಗ ಮಾರ್ಗಗಳಾದ ಸಮ್ಯಕ್ ದೃಷ್ಟಿ,ಸಂಕಲ್ಪ,ವಾಕ್,ಕರ್ಮಾಂತ, ಆಜೀವ,ವ್ಯಾಯಾಮ,ಸ್ಮೃತಿ ಕೊನೆಗೆ ಸರಿಯಾದ ಸಮಾಧಿ ಎಂಬ ಆರ್ಯ ಸತ್ಯಗಳ ಅರಿವು ಮೂಡಿ ಬುದ್ಧತ್ವದ ಸಿದ್ಧಿ ಪಡೆದು ಗುರುವಾಗುತ್ತಾನೆ.

ಉತ್ತರಾಕಾಂಡದಲ್ಲಿ ಸಿದ್ಧಾರ್ಥ ಬುದ್ಧನಾಗುವ ಪರಿಯನ್ನು ಅತ್ಯಂತ ಅರ್ಥಪೂರ್ಣವಾಗಿ ದೇಹದಂಡನೆಗಿಂತ ಧ್ಯಾನಾಸಕ್ತನಾಗಿ ಬದುಕಿನ ಸತ್ಯಗಳನ್ನರ್ಥ ಮಾಡಿಕೊಂಡು ಬುದ್ಧನಾಗುವುದರ ಮೂಲಕ ಭವಸಾಗರದ ಆಳ-ಅಗಲಗಳನ್ನರಿಯುತ್ತಾ ಎದುರಾದ,ತನ್ನನ್ನು ವಿಮುಖನಾಗಿಸುವ ಸಂದರ್ಭಗಳ ನಿವಾರಿಸಿಕೊಳ್ಳುತ್ತಾ ಬಂದು ಮಾನವತೆಯನ್ನು ಸಾರುವ ಭವ್ಯ ವ್ಯಕ್ತಿತ್ವ ನಿರ್ಮಾಣಗೊಂಡಿದ್ದನ್ನು ಕವಿ ಕಡೆದು ನಿಲ್ಲಿಸುತ್ತಾರೆ. ಕವಿ ಹೇಳುವುದು-ಕತ್ತಲ ಹರಿದು ಮೂಡುವುದು ದೇದೀಪ್ಯಮಾನ ತೇಜಃಕಿರಣ. ಇದು ಪರಮ ಪುಣ್ಯಕ್ಷಣ! ಬುದ್ಧತ್ವ ಸಿದ್ಧಿಸಿತು! ಎಂದು.

ಬುದ್ಧನ ಮಾರ್ಗ ಮಧ್ಯಮ ಮಾರ್ಗ. ಮನುಷ್ಯ ತನ್ನ ಮಾನವೀಯ ಸಂಪತ್ತನ್ನು ಕಳೆದುಕೊಳ್ಳುವುದು ಅತಿಯಾದ ಭೋಗಲೋಲುಪ್ತಿ ಅಥವಾ ಅತಿಯಾದ ದೇಹದಂಡನೆಯೆಂಬ ವಿರಕ್ತಿಯಿಂದ. ಈ ಎರಡೂ ಮಾರ್ಗಗಳನ್ನು ತ್ಯಜಿಸಿ ಮಧ್ಯಮ ಮಾರ್ಗ ಆರಿಸಿಕೊಂಡು,ಅಷ್ಟಾಂಗಗಳ ಮೂಲಕ ನಾಲ್ಕು ಆರ್ಯಸತ್ಯಗಳಾದ ದುಃಖ,ದುಃಖದ ಉದಯ,ದುಃಖ ಶಮನ,ದುಃಖ ಶಮನದ ಉಪಾಯಗಳನ್ನು ವಿವರಿಸಿ ಅನಾಸಕ್ತಿಯ ಮೂಲಕ ಬಿಡುಗಡೆಯ ಮಾರ್ಗ ತೋರಿಸುತ್ತಾ ಒಳಗಣ್ಣನು ತೆರಿಸುತ್ತಾ ಸಾಗುತ್ತಾನೆ. ಯಜ್ಞಕುಂಡದ ಬಾಹ್ಯಾಚರಣೆಯನ್ನು ಬದಿಗೊತ್ತುವ ಬುದ್ಧ- ಎದೆಯ ವೇದಿಯ ಮಾಡಿ ಸುಡಬೇಕು ಅದರಲ್ಲಿ ಅರಿಗಳಾರ್ವರ ಎಸೆದು ಅಮೃತಧುನಿ ಸಂಗೀತ ಮೂಡಿಸುತ್ತಾನೆ. ಮಾನವತೆಯ ಸಾಕಾರಬುದ್ಧನನು ಈ ಕಾವ್ಯ ಸೃಷ್ಟಿಸಿದೆ. ಬುದ್ಧನ ಮಧ್ಯಮ ಮಾರ್ಗ ಕಾವ್ಯದಲಿ ಒಂದು ರೂಪಕವಾಗಿ ಬಂದು ಎದೆಯೊಳಗಿಳಿಯುತ್ತದೆ.
   ಶೃತಿಯು ಹಿತವಾಗಿತ್ತು,ನಾದ ನಿರ್ಝರಿ ಹರಿದು
   ಎದೆಯ ಸವಿಸಿತು.ಒಂದು ವೇಳೆ ವೀಣೆಯ ತಂತಿ
   ಸಡಿಲವಿದ್ದರೆ ನಾದ ಹೊಮ್ಮುತ್ತಲೇ ಇರಲಿಲ್ಲ.
   ಅತಿಯಾಗಿ ಬಿಗಿಮಾಡಿದರೊ ತಂತಿ,ತಂತಿಯೇ
   ಹರಿದು,ವೀಣೆಯನಾದ ಹೊಮ್ಮುತಲೆ ಇರಲಿಲ್ಲ.
   ದೇಹಲೋಲುಪತೆ ಹೆಚ್ಚಿತೊ ದುಃಖದುತ್ಪತ್ತಿ
   ಅತಿಯಾಗಿ ದೇಹ ದಂಡಿಸಲು ದುಃಖೋತ್ಪತ್ತಿ
   ಇದೇ ಭಿಕ್ಕುಗಳೆ ನಾನು ನುಡಿದ ಮಧ್ಯಮ ಮಾರ್ಗ
ಎಂದು ಬುದ್ಧ ತನ್ನ ತತ್ವಾನ್ವೇಷಣೆಯ ಮಾರ್ಗವನ್ನು ವಿವರಿಸುತ್ತಾನೆ.

ಕಪಿಲವಸ್ತುವಿಗೆ ಬುದ್ಧನಾಗಿ ಸಿದ್ಧಾರ್ಥ ಮರಳಿ ಭೇಟಿ ಇತ್ತಾಗ,ಯಶೋಧರೆ-ಬುದ್ಧನ ಭೇಟಿಯನ್ನು ಕವಿ ಚಿತ್ರಿಸಿರುವುದು ಆಕೆ ಮಾಸ್ತಿಯವರು ಸೃಷ್ಟಿಸಿರುವ ಪ್ರಶ್ನೆ ಮಾಡುವ ಸ್ತ್ರೀಯಾಗಿಯಲ್ಲ, ತನ್ನ ಆತ್ಮಸಖ ಚೀವರವ ತೊಟ್ಟು ಬಂದಾಗ ಆಕೆ ಕೇಳುವುದು- ಎಲ್ಲ ಸುಖದಲ್ಲೂ ನನ್ನ ಜತೆಯಲ್ಲೇ ಇದ್ದವನು ಮುಕ್ತಿ ಸುಖದಲಿ ಮಾತ್ರ ಹೀಗೆ ಅಗಲಿದ್ದೇಕೆ? ಆತ ಮನೆ,ಮಡದಿಯ ತೊರೆದು ಹೋದಾಗ ಇದ್ದ ಆಕೆಯ ದುಃಖದ ಮನಸ್ಸೀಗ ಮಾಗಿದೆ. ಆ ಲೋಕಹಿತಕ್ಕಾಗಿ ಹೊರಟ ಪತಿಯ ದಾರಿ ಆಕೆಗೂ ಸರಿ ಎನಿಸಿ,ಆ ದಾರಿಯಲ್ಲೆ ತಾನೂ ಕಾಲೂರುವ ಆಸೆ ಅಭಿವ್ಯಕ್ತಿಸುತ್ತಾಳೆ. ಸತಿಯ ಮಾತು ಕೇಳಿ ಬುದ್ಧನುತ್ತರಿಸುವುದು- ಲೋಕಹಿತಕ್ಕಾಗಿ ಮರೆತನು ದೇವಿ ಸ್ವಾಂತಸುಖ ಮುಕ್ತಿ ಸುಖವೇ ಸುಖ ಎಂದು ನಂಬಿದರೆ ನಾನೀಗಲೂ ನಿನ್ನೊಡನೆ; ಆಯ್ಕೆ ನಿನ್ನದೆ.ಇದಕ್ಕೆ ಯಶೋಧರೆ ನಿರುತ್ತರೆ.

ಬುದ್ಧ ತತ್ವಗಳ ಸರಳ ನಿರೂಪಣೆ,ಆ ತತ್ವಗಳ ಸಾರ ಕಾವ್ಯದ ದೀಕ್ಷಾಕಾಂಡದಲ್ಲಿ ಮನಮುಟ್ಟುವಂತೆ ಮೂಡಿದೆ- ಇಲ್ಲವಾಗುವುದೊಂದೆ ಇರಲು ಉಪಾಯ,ಕಾಮ ವಾಸನೆಯಿಂದ ದೂರವಾದರೆ ಸಾಧ್ಯ ದುಃಖದ ವಿಮೋಚನೆ,ಧರ್ಮವೆಂಬುದೆ ದೀಪ. ದೀಪವಿದ್ದರೆ ದಾರಿಕಾಣುವುದು ಇರುಳಲ್ಲು. ಇದು ಬುದ್ಧ ಕಂಡುಕೊಂಡ ಸತ್ಯ. ಬುದ್ಧ ಚರಿತೆಯನ್ನು ಆತನ ಹುಟ್ಟಿನಿಂದ ಸಿದ್ಧಾರ್ಥ ಬುದ್ಧನಾಗುವ,ಬದುಕಿನಲ್ಲಿ ನಿವೃತ್ತಿ ಮಾರ್ಗದಲ್ಲಿ ಹೆಜ್ಜೆ ಇಡುವುದನ್ನು ಹೇಳುವ ಒಂದು ಸುಲಲಿತ ಶೈಲಿಯ ಅಷ್ಟೇ ಸಂಕೀರ್ಣವಾದ ಬದುಕಿನೆಳೆಗಳು ಇಲ್ಲಿ ಕಾವ್ಯ ಸೆಲೆಯಾಗಿ ಹರಿದಿದೆ. 

ಕಾವ್ಯದಲ್ಲಿ ಬುದ್ಧ ಕ್ರೂರಿ ಅಂಗುಲೀಮಾಲರ ಮುಖಾಮುಖಿ ದೃಶ್ಯವನ್ನು ಶಬ್ದಗಳಲ್ಲಿ ಕವಿ ಕಟ್ಟಿಕೊಟ್ಟಿರುವುದು,ಬುದ್ಧ ಹಿಂಸ್ರಕನ ಮನಸ್ಸನ್ನು ತನ್ನ ಧೈರ್ಯ,ಸಂಯಮದಿಂದ ಆವರಿಸಿಕೊಂಡು ಕ್ರೌರ್ಯದ ಮುಳ್ಳುಗಳ ಕಿತ್ತು ಹೃದಯಪುಷ್ಪ ಮೃದುವಾಗಿಸಿದಾಗ ದೀಪವನ್ನು ಹಿಂಬಾಲಿಸುವ ನೆರಳಿನಂತೆ ಆ ನಿರ್ಧಯಿ,ಕ್ರೂರಿ ಆರ್ದ್ರ ಹೃದಯನಾಗಿ ಭಿಕ್ಕುವಾಗುತ್ತಾನೆ.ಜೀವಹತ್ಯಾವಿರತಿಯಾಗುವ ಮುನ್ನ ಬುದ್ಧಗುರು ಹಾಗು ಅಂಗುಲೀಮಾಲನ ಸಂವಾದವನ್ನು ಕವಿ ಮತ್ತಷ್ಟು ಬೆಳೆಸಿ,ಹಿಂಸ್ರಕನ ಮನ ಪರಿವರ್ತನೆಯ ಚಿತ್ರಣವನಿನ್ನಷ್ಟು ವಿವರವಾಗಿ ಸಹೃದಯರಿಗೆ ನೀಡಬಹುದಿತ್ತು.ಆದರೂ ಕವಿ ಆ ಕ್ರೌರ್ಯ ಕರಗುವಿಕೆಯನ್ನು ಅರ್ಥಪೂರ್ಣವಾಗಿ- ಶಿಲೆಯು ಕರಗದೆ ಹೇಳಿ ಚಂದ್ರಿಕೆಯ ವರ್ಷಕ್ಕೆ? ಎದೆಯ ಹೂ ಅರಳದೇ ರವಿಯ ಕರ ಸ್ಪರ್ಶಕೆ? ಎಂಬ ಸುಂದರ ಸಾಲುಗಳಲ್ಲಿ ಹೇಳಿ ಬಿಡುತ್ತಾರೆ. ಇದು ಕಾವ್ಯದ ಸೊಬಗು.

ಈ ನಾಡಿನ ಮಹತ್ವದ ಕವಿ,ಅಂಕಣಕಾರ,ನಾಟಕ ಕರ್ತೃ,ಮಕ್ಕಳ ಸಾಹಿತಿ,ಈ ರೀತಿ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಕೈಯಾಡಿಸಿ ಯಶಸ್ವಿ ಕೃತಿಗಳನ್ನು ನೀಡಿರುವ ಹೆಚ್.ಎಸ್. ವೆಂಕಟೇಶಮೂರ್ತಿ ಲಲಿತ ಛಂದೋಲಯದಲ್ಲಿ ಬುದ್ಧಚರಣ ಮಹಾಕಾವ್ಯವಾಗಿ ರೂಪು ತಳೆದು ಸಹೃದಯರ ಮನೆ-ಮನ ಮುಟ್ಟಿದೆ. ಅವರ ಮಹಾಕಾವ್ಯ- ಬುದ್ಧಚರಣದ ವಿಶೇಷವೇ ಕವಿ ಹೇಳಿರುವಂತೆ ಬುದ್ಧನ ಮಾನವತ್ವದ ಔನ್ನತ್ಯದ ಕಥನ ಮಾರ್ಗ. ಸಿದ್ಧಾರ್ಥ ಬುದ್ಧನಾಗಿ,ಮನುಷ್ಯ ಬದುಕಿನ ಹಾದಿಯಲ್ಲಿ ಕಂಡ ನೋವು,ನೋವಿಗೆ ಕಾರಣವಾದ ಆಸೆ,ಆಸೆ ನಿವಾರಣೆಗೆ ಅಗತ್ಯವಾದ ಮಾನಸಿಕ ಸ್ಥಿತಿ ಹೊಂದುವ ಬಗೆ ಹೇಗೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಲೋಕ ಸುಖಕ್ಕಾಗಿ ತನ್ನ ಸಂಸಾರ ತ್ಯಜಿಸಿ ಚೀವರ ತೊಟ್ಟು ಕಾಮ್ಯಕತೆಯ ಕೈಬಿಟ್ಟು ನಡುರಾತ್ರಿಯಲ್ಲಿನಡೆದು, ಮೊದಲು ತನ್ನನ್ನು ತಾನು ಪರಿಷ್ಕರಿಸಿಕೊಂಡು ತ್ಯಾಗದಿಂದ ಅಮೃತತ್ವ,ಆದರೆ ಅದು ವ್ಯಷ್ಟಿಯ ಹಿತಕ್ಕೆ ಸೀಮಿತವಾಗದೆ ಸಮಷ್ಟಿಯ ಹಿತಕ್ಕೆಂದು ನಿಶ್ಚಯಿಸಿಕೊಂಡು ಲೋಕಗುರುವಾದವನು ಬುದ್ಧ. ಅದನ್ನು ಕಾವ್ಯ ಅನ್ಯಾದೃಶವಾಗಿ ನೀಡಿದೆ.

ಆತ ಹಾದುಹೋದ ಮಾರ್ಗದಲ್ಲಿ ಬಂದ ಅಡೆತಡೆ,ಎದುರಿಸಿದ ಕ್ರೌರ್ಯ,ಕ್ರೋದಾಗ್ನಿ,ತಾಕಿದ ಮತ್ಸರದ ಕಿಡಿಗಳು,ಹಿಂಸೆಯನ್ನೇ ಬದುಕಿನ ಭಾಗವಾಗಿ ಕೊಂಡವರೊAದಿಗೆ ಮುಖಾಮುಖಿ ಈ ಎಲ್ಲಾ ಸಂದರ್ಭಗಳಲ್ಲೂ ಆತ ತೋರಿದ ಸಂಯಮ,ಪ್ರೀತಿ,ವಿಶ್ವಾಸದಿಂದ ಆ ಎಲ್ಲಾ ಅರಿಗಳನ್ನು ಕಿತ್ತೆಸೆದು ಮಾನವೀಯ ಅಂತಃಕರಣ ಶುದ್ಧಗೊಳಿಸಿದ ರೀತಿಯನ್ನು ಕವಿ ತಮ್ಮ ಸುಂದರ ಕಾವ್ಯ ಶೈಲಿಯಲ್ಲಿ ಅಡಕಗೊಳಿಸಿ ಮಹಾಕಾವ್ಯದ ಸೊಗಸನ್ನು ಪೋಷಿಸಿದ್ದಾರೆ. ಸಂದರ್ಭಗಳ ವರ್ಣನೆಯಲ್ಲಿ ಕವಿಯ ಸೂಕ್ಷ್ಮದೃಷ್ಟಿ ಗೋಚರಿಸುತ್ತದೆ.ಬುದ್ಧನಾಗಲು ಮುಂದಾದ ಸಿದ್ಧಾರ್ಥನ ತಾಕಲಾಟಗಳು ಕವಿಯ ಪ್ರತಿಭಾ ಚಕ್ಷಸ್ವಿಗೆ ಸ್ಪಷ್ಟವಾಗಿ ಬಂದು ತಾಕಿ ಕಾವ್ಯದ ಸುಂದರ ಸಾಲುಗಳಾಗಿ ಮಾರ್ಪಟ್ಟಿವೆ. ವರ್ಣನೆಯಲ್ಲಿ ಅತ್ಯಂತ ಸ್ವಾರಸ್ಯ ತುಂಬಿ,ಆಯಾ ಸಂದರ್ಭದಲ್ಲಿ ಅದಕ್ಕನುಗುಣವಾದ ರಸಸೇಚನ ಮಾಡಿ ಕಾವ್ಯ ಓದುಗನನ್ನು ಹಿಡಿದಿಡುವಂತಾಗಿದ್ದರೆ, ಆಯಾ ಸಂದರ್ಭದ ಔಚಿತ್ಯಪೂರ್ಣ ವಿವರಣೆ ಕವಿಯ ಪ್ರತಿಭೆಯ ಪ್ರಖರತೆಯನ್ನು ಸೂಚಿಸುತ್ತದೆ. ಕಾವ್ಯ ಓದುಗನ ಮನದ ಭಿತ್ತಿಯನ್ನು ಸರಳವಾಗಿ ಸ್ಪರ್ಷಿಸುತ್ತಾ ಗಾಢವಾಗಿ ಆತನನ್ನು ಸೆಳೆದುಕೊಳ್ಳುವ ಗುಣ ಪಡೆದಿದೆ. ಹೆಚ್‌ಎಸ್ವಿ ಕಾವ್ಯದ ಹರಹು ವಿಶಾಲ,ಆ ಎಲ್ಲಾ ಕವನಗಳ ಸಾರ-ಸರ್ವಸ್ವ ಮಡುಗಟ್ಟಿ ಮಹಾಕಾವ್ಯದ ಈ ಛಂದೋ ವೈವಿಧ್ಯತೆಗೆ ಕಾರಣವಾಗಿದೆ.

ಸ.ಗಿರಿಜಾಶಂಕರ,ಸದಸ್ಯರು ಕುವೆಂಪು ಭಾಷಾ ಭಾರತಿ

  • email
  • facebook
  • twitter
  • google+
  • WhatsApp
Tags: BudhhaHSVMahakavya

Related Posts

BOOK REVIEW

Conflict resolution : The RSS way

April 21, 2022
BOOK REVIEW

ರಾಣಿ ಚೆನ್ನಭೈರಾದೇವಿ ಬಹುಪಾರಕ್!!

January 29, 2022
ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.
Articles

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

April 28, 2021
ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ
BOOK REVIEW

ಹುತಾತ್ಮ ಕುಯಿಲಿ, ಹೇಗಾದಾಳು ಎಲ್ಟಿಟಿಇ?

April 9, 2021
ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..
Articles

ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..

March 25, 2021
ಹೋರಾಟದ ಅಂಗಣದಲ್ಲಿ ರೂಪುಗೊಂಡ ‘ಬಲಿಷ್ಠರ ಮೋಸ’ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ
Articles

ಹೋರಾಟದ ಅಂಗಣದಲ್ಲಿ ರೂಪುಗೊಂಡ ‘ಬಲಿಷ್ಠರ ಮೋಸ’ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ

March 6, 2021
Next Post

Evacuation of Indians stranded in Ukraine by Government of India

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

UDUPI: VHP strongly condemns ban on Togadia, pledged for Hindu Unity at mega Hindu Samajotsav

UDUPI: VHP strongly condemns ban on Togadia, pledged for Hindu Unity at mega Hindu Samajotsav

March 9, 2015
Kashmir Imbroglio: International Conference at New Delhi on Pak Occupied Kashmir

Kashmir Imbroglio: International Conference at New Delhi on Pak Occupied Kashmir

July 5, 2012
ಆ ಮುಗ್ದರ ನೋವಿನ ಆಕ್ರಂದನಕ್ಕೆ ದೇಶ ಇನ್ನೂ ಮೌನವಾಗಿದೆ!

ಆ ಮುಗ್ದರ ನೋವಿನ ಆಕ್ರಂದನಕ್ಕೆ ದೇಶ ಇನ್ನೂ ಮೌನವಾಗಿದೆ!

January 21, 2013
Pungava HINDI special issue on Hindu Shakti Sangama-2012

Pungava HINDI special issue on Hindu Shakti Sangama-2012

March 14, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In